ರೇಪ್ ಕೇಸ್ ಆರೋಪಿಯಾಗಿರೋ ಮಡೆನೂರು ಮನು ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಇಂದು ತೆರೆಗಪ್ಪಳಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಜನ ಕೈ ಹಿಡಿದ್ರಾ..? ಮಡೆನೂರು ಮನು ಪತ್ನಿ ದಿವ್ಯ ಗ್ಯಾರಂಟಿ ನ್ಯೂಸ್ಗೆ ಹೇಳಿದ್ದೇನು ಅನ್ನೋದ್ರ ರಿಪೋರ್ಟ್ ಇಲ್ಲಿದೆ.
- ಹೇಗಿದೆ ಮಡೆನೂರು ಮನು ಸಿನಿಮಾ.. ಪ್ರೇಕ್ಷಕರು ಏನಂದ್ರು ?
- ಪೊಲೀಸ್ ಕಸ್ಟಡಿಯಲ್ಲಿ ಮನು.. ಥಿಯೇಟರ್ನಲ್ಲಿ ಮನು ಚಿತ್ರ
- ಪ್ರೇಕ್ಷಕರ ಜೊತೆ ಕೂತು ಚಿತ್ರ ವೀಕ್ಷಿಸಿದ ಮನು ಪತ್ನಿ ಹೇಳಿದ್ದೇನು?
- ರೀಲ್ & ರಿಯಲ್ ಲೈಫ್ನಲ್ಲಿ ಮಡೆನೂರು ಮನು ಹೋರಾಟ
ಕಾಮಿಡಿ ಕಿಲಾಡಿ ಮಡೆನೂರು ಮನು ಲೈಫ್ ಫುಲ್ ಸೀರಿಯಸ್ ಆಗಿದೆ. ಹೌದು.. ಆತನ ಮೇಲೆ ರೇಪ್ ಕೇಸ್ ಬುಕ್ ಆಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರೋ ಮನು, ದಶಕದ ಕನಸು ಆತನ ಅನುಪಸ್ಥಿತಿಯಲ್ಲಿ ನನಸಾಗಿದೆ. ತುಂಬಾ ಕಷ್ಟಪಟ್ಟು, ಇಷ್ಟ ಪಟ್ಟು ಮಾಡಿದಂತಹ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.
ಯೋಗರಾಜ್ ಭಟ್ ಬರೆದ ಕಥೆಗೆ ಕೆ ರಾಮ್ನಾರಾಯಣ್ ನಿರ್ದೇಶನವಿದ್ದು, ಸಂತೋಷ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಮಡೆನೂರು ಮನು ಹೀರೋ ಆಗಿ ಲಾಂಚ್ ಆಗಿರೋ ಈ ಸಿನಿಮಾದಲ್ಲಿ ಮನುಗೆ ಜೋಡಿಯಾಗಿ ಮೌನ ಗುಡ್ಡೆಮನೆ ಬಣ್ಣ ಹಚ್ಚಿದ್ದು, ಇಬ್ಬರೂ ನಟನೆಯಲ್ಲಿ ಒಳ್ಳೆಯ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಇವರ ನಟನೆಗೆ ಪ್ರೇಕ್ಷಕರು ಬೊಂಬಾಟ್ ರೆಸ್ಪಾನ್ಸ್ ನೀಡಿದ್ದಾರೆ.
ಮಾಗಡಿ ರಸ್ತೆಯಲ್ಲಿರೋ ವೀರೇಶ್ ಥಿಯೇಟರ್ನಲ್ಲಿ ಪ್ರೇಕ್ಷಕರ ಜೊತೆ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಮಡೆನೂರು ಮನು ಅವರ ಪತ್ನಿ ದಿವ್ಯ, ಗಂಡನ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲ, ಈ ಸಿನಿಮಾಗಾಗಿ ಮನು ಹಾಕಿದ್ದ ಎಫರ್ಟ್, ನಿರ್ಮಾಪಕರ ಹಣದ ಮಹತ್ವದ ಬಗ್ಗೆಯೂ ಮಾತನಾಡಿದರು.
ಇನ್ನು ನಿರ್ದೇಶಕ ಹಾಗೂ ನಿರ್ಮಾಪಕರು ಕೂಡ ರಿಲೀಸ್ ಬಳಿಕ ತಮಗಿದ್ದ ಆತಂಕ ದೂರವಾಗಿದೆ. ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ ಅಂತ ಹರ್ಷ ವ್ಯಕ್ತಪಡಿಸಿದರು.
ಒಟ್ಟಾರೆ ಮಡೆನೂರು ಮನು ಒಂಥರಾ ನತದೃಷ್ಠ ಕಲಾವಿದ. ಚಿತ್ರರಂಗದಲ್ಲಿ ಲಯ ಕಂಡುಕೊಳ್ಳಬೇಕಾದ ಮನು ಆರಂಭದಲ್ಲೇ ವೈಯಕ್ತಿಕ ಜೀವನ ಹಾಗೂ ಕರಿಯರ್ನಲ್ಲಿ ಲಯ ತಪ್ಪಿದ್ದಾರೆ. ಆರೋಪ ಮುಕ್ತನಾಗಿ ಹೊರಬರ್ತಾರಾ ಅಥ್ವಾ ಶಿಕ್ಷೆ ಅನುಭವಿಸಿ ಹೊರಬರ್ತಾರಾ ಅನ್ನೋದು ಕಾದು ನೋಡಬೇಕಿದೆ. ಆದ್ರೆ ನಿಜ ಜೀವನ ಹಾಗೂ ಸಿನಿಮಾ ಎರಡರಲ್ಲೂ ಮನು ಹೋರಾಟ ಜೋರಿದೆ. ಕುಲದಲ್ಲಿ ಕೀಳ್ಯಾವುದೋ ಜಾತಿಪದ್ದತಿಯ ವಿರುದ್ಧದ ಹೋರಾಟವಾಗಿದೆ.