ತುಳುವೆರೆ ಚಿತ್ರರಂಗದ ಅತ್ಯಂತ ನಿರೀಕ್ಷಿತ ಚಿತ್ರ “ಕೊರಗಜ್ಜ”ದ ಮೊದಲ ಹಾಡು “ಗುಳಿಗ… ಗುಳಿಗ… ಘೋರ ಗುಳಿಗಾ…” ಇಂದು (ನವೆಂಬರ್ 20, 2025) ಝೀ ಮ್ಯೂಜಿಕ್ ಕನ್ನಡ ಚಾನಲ್ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕರಾವಳಿಯ ಅತ್ಯಂತ ಭಯಂಕರ ಮತ್ತು ರಕ್ತದಾಹಿ ದೈವ “ಗುಳಿಗ”ನ ರುದ್ರ ರೂಪವೇ ಈ ಹಾಡಿನ ಮೂಲ ಆಕರ್ಷಣೆ.
ಗೀತೆಯನ್ನು ಬರೆದಿದ್ದು, ಹಾಡಿದ್ದು, ಚಿತ್ರವನ್ನೇ ನಿರ್ದೇಶಿಸುತ್ತಿರುವ ಬಹುಪ್ರತಿಭೆ ಸುಧೀರ್ ಅತ್ತಾವರ್. “ಮರಳಿ ಮರೆಯಾಗಿ…” ಖ್ಯಾತಿಯ ಸುಧೀರ್ ಅತ್ತಾವರ್ ಈ ಬಾರಿ ರ್ಯಾಪ್ ಮಿಶ್ರಿತ ರುದ್ರ ಗೀತೆಯೊಂದಿಗೆ ಆಗಮಿಸಿದ್ದಾರೆ. ಸಂಗೀತ ಸಂಯೋಜನೆ ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿ ಸುಂದರ್. ಧ್ವನಿಯಲ್ಲಿ ಬಾಲಿವುಡ್ನ ಪ್ರಮುಖ ಗಾಯಕ ಜಾವೇದ್ ಅಲಿ ಜೊತೆಗೆ ಸುಧೀರ್ ಅತ್ತಾವರ್ ಮತ್ತು ಗೋಪಿ ಸುಂದರ್ ಸ್ವತಃ ಧ್ವನಿ ತುಂಬಿದ್ದಾರೆ. ಈ ಮೂವರ ಧ್ವನಿಯ ಸಮ್ಮಿಲನ ಹಾಡಿಗೆ ಅಪೂರ್ವ ಶಕ್ತಿಯನ್ನು ನೀಡಿದೆ.
ತುಳುನಾಡಿನ ಜನಪದ ಕಥನದಂತೆ ನೆಲವುಲ್ಲ ಸಂಕೆಯ 24ನೇ ಮಗನಾಗಿ ಹುಟ್ಟಿದ ಗುಳಿಗ ಹುಟ್ಟಿದ ತಕ್ಷಣ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಕುಡಿದರೂ ಹಸಿವು ತೀರದೇ ಶ್ರೀಮನ್ನಾರಾಯಣನ ಕಿರುಬೆರಳಿನ ರಕ್ತವನ್ನೇ ಹೀರಿದ ಘೋರ ದೈವ. ಈ ರಕ್ತದಾಹಿ ಗುಳಿಗನ ಕೋಲ ಸೇವೆ ತುಳುನಾಡಿನಲ್ಲಿ ಇಂದಿಗೂ ಅತ್ಯಂತ ರುದ್ರ ಮತ್ತು ಭಯಂಕರ ರೂಪದಲ್ಲಿ ನಡೆಯುತ್ತದೆ. ಗುಳಿಗನ ರಕ್ತ ಹೀರುವ ರುದ್ರ ನರ್ತನ ನೋಡಲಾಗದೇ ಅನೇಕರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಓಡಾಡುವ ಗುಳಿಗನನ್ನು ಹಿಡಿಯಲು ಪಟ್ಟೆದಾರರು ಮಾಡುವ ಹರಸಾಹಸ ಮೈ ಝುಂ ಎನ್ನುವಂತಿದೆ.
ಚಿತ್ರದಲ್ಲಿ ಘೋರ ಗುಳಿಗ ದೈವವು ಪಂಜುರ್ಲಿ ದೈವದ ಜೊತೆಗೆ ಸೇರಿ ಕೊರಗಜ್ಜನನ್ನು ಭೇಟಿಯಾಗುವ ಅತ್ಯಂತ ರೋಮಾಂಚಕ ಸನ್ನಿವೇಶವಿದೆ. ಗುಳಿಗನ ರುದ್ರ ನರ್ತನಕ್ಕೆ ಹಾಲಿವುಡ್-ಬಾಲಿವುಡ್ನ ಪ್ರಸಿದ್ಧ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಸ್ವತಃ ಕಾಲಿಟ್ಟಿದ್ದು, ಈ ದೈವ ನೃತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕೊರಿಯೋಗ್ರಾಫಿ ನೀಡಿದ್ದಾರೆ. ಪಂಜುರ್ಲಿ ಪಾತ್ರದಲ್ಲಿ ಸರ್ದಾರ್ ಸತ್ಯ ಅಭಿನಯಿಸಿದ್ದಾರೆ.
ಮಂಗಳೂರು ಸೋಮೇಶ್ವರ ಕಡಲತೀರದಲ್ಲಿ ಈ ಹಾಡಿನ ಚಿತ್ರೀಕರಣ ನಡೆಸುವಾಗ ಭಾರೀ ಡ್ರಾಮಾ ನಡೆದಿತ್ತು. 100 ಅಡಿ ಎತ್ತರದ ಎರಡು ಕ್ರೇನ್ಗಳು, 5 ಕ್ಯಾಮೆರಾಗಳೊಂದಿಗೆ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದಾಗ ಸ್ಥಳೀಯ ರೌಡಿಗಳ ಗ್ಯಾಂಗ್ ಎರಡು ದಿನಗಳ ಕಾಲ ದಾಳಿ ನಡೆಸಿ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿಸಿತ್ತು. ಎರಡನೇ ದಿನ 25 ಬೌನ್ಸರ್ಗಳನ್ನು ನೇಮಿಸಿದ್ದರೂ, ಬೆದರಿಕೆ ಕಾಲ್ ಬಂದ ತಕ್ಷಣ ಬೌನ್ಸರ್ಗಳೇ ಓಡಿಹೋಗಿದ್ದರು. ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ ಶೆಟ್ಟಿ ರೌಡಿಗಳನ್ನು ಮನವೊಲಿಸಲು ಪ್ರಯತ್ನಿಸಿದರೂ ವಿಫಲ. ಆದರೆ ನಿರ್ಮಾಪಕ ತ್ರಿವಿಕ್ರಮ್ ಎದೆಗುಂದದೇ ಮೂರನೇ ಬಾರಿ ಪೊಲೀಸ್ ಭದ್ರತೆಯೊಂದಿಗೆ ಅದೇ ಕಡಲತೀರದಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದರು.





