ನಿರ್ದೇಶನದಲ್ಲಿ ಜೋಗಿ ಪ್ರೇಮ್ ಕಿಲಾಡಿ ಆದ್ರೆ ನಟನೆಯಲ್ಲಿ ಧ್ರುವ ಕಿಲಾಡಿ. ಈ ಇಬ್ಬರೂ ಕಿಲಾಡಿ ಜೋಡಿಯ ಕೆಡಿ ಆರೇ ದಿನದಲ್ಲಿ 62 ಕೋಟಿ ಗಳಿಸಿದೆ ಅಂದ್ರೆ ನೀವು ನಂಬಲೇಬೇಕು. ಹೌದು.. ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ಕೆಡಿ ಪಕ್ಕಾ ಕಲೆಕ್ಷನ್ ರಿಪೋರ್ಟ್ ಜೊತೆಗೆ ಇಡೀ ಇಂಡಸ್ಟ್ರಿ ಸೆಲೆಬ್ರಿಟಿ ಶೋನಲ್ಲಿ ಕೆಡಿ ನೋಡಿ ಯಾರೆಲ್ಲಾ ಕೊಂಡಾಡಿದ್ರು ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..
- ಆರು ದಿನಕ್ಕೆ 8124 ಶೋ.. 61.52 ಕೋಟಿ KD ಕಲೆಕ್ಷನ್..!
- 321 ಸಿಂಗಲ್ ಸ್ಕ್ರೀನ್ ಥಿಯೇಟರ್.. 84 ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್
- ‘KD’ ಧ್ರುವ.. ಕಿಲಾಡಿ ಪ್ರೇಮ್ಗೆ ಇಂಡಸ್ಟ್ರಿ ಕ್ಲೀನ್ ಬೋಲ್ಡ್..!
- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರಿಯರ್ ಬೆಸ್ಟ್ ಪರ್ಫಾಮೆನ್ಸ್
ಜೋಗಿ ಪ್ರೇಮ್ ಹೀರೋಗಳಿಗೆ ಲಾಂಗ್ ಹಿಡಿಸಿರೋ ಯಾವುದೇ ಸಿನಿಮಾ ಸೋತಿಲ್ಲ. ಕರಿಯ ಹಾಗೂ ಜೋಗಿ ಸಾಲಿಗೆ ಕೆಡಿ ಕೂಡ ಸೇರಿದೆ. ಸಿನಿಮಾ ನೋಡಿದ ಬಬಹುತೇಕ ಮಂದಿ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದಾದ್ಯಂತ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಸುರಿಮಳೆ ಆಗ್ತಿದೆ. ಧ್ರುವ-ಪ್ರೇಮ್ ಜೋಡಿ ಅಕ್ಷರಶಃ ಮೋಡಿ ಮಾಡ್ತಿದೆ.
ಅಮಾಯಕನೊಬ್ಬ ಅಚಾನಕ್ಕಾಗಿ ಲಾಂಗ್ ಅಥ್ವಾ ಮಚ್ಚು ಹಿಡಿದ್ರೆ ಎಂತಹ ರಕ್ತಪಾತ ಆಗಲಿದೆ ಅನ್ನೋದಕ್ಕೆ ಕೆಡಿ ಪ್ರತ್ಯಕ್ಷ ಸಾಕ್ಷಿ. ಅದ್ರಲ್ಲೂ ಬ್ರದರ್ ಸೆಂಟಿಮೆಂಟ್ ಕುರಿತ ಎಮೋಷನಲ್ ಜರ್ನಿ ಕೆಡಿ. ಒಂದು ನವಿರಾದ ಪ್ರೇಮಕಥೆ, ಫ್ಯಾಮಿಲಿ ಎಮೋಷನ್ಸ್, ಅಣ್ತಮ್ಮಂದಿರ ಕಥೆ ಜೊತೆ ಅಂಡರ್ವರ್ಲ್ಡ್ ಡಾನ್.. ಹೀಗೆ ಎಲ್ಲವೂ ಅದ್ಭುತವಾಗಿ ಬ್ಲೆಂಡ್ ಆಗಿರೋ ಸಿನಿಮಾ. ಕೆವಿಎನ್ ಪ್ರೊಡಕ್ಷನ್ಸ್ನ ಈ ಚಿತ್ರ ತೆರೆಕಂಡ ಆರೇ ದಿನದಲ್ಲಿ ಬರೋಬ್ಬರಿ 61 ಕೋಟಿ 52 ಲಕ್ಷ ದಾಖಲೆ ಕಲೆಕ್ಷನ್ ಮಾಡಿರೋದನ್ನ ಚಿತ್ರತಂಡವೇ ಅಧಿಕೃತವಾಗಿ ಹಂಚಿಕೊಂಡಿದೆ.
ಯೆಸ್.. ರಾಜ್ಯದಾದ್ಯಂತ ಸುಮಾರು 321 ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಹಾಗೂ 84 ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್ನಲ್ಲಿ ಕೆಡಿ ಬಿಡುಗಡೆ ಆಗಿತ್ತು. ಇಲ್ಲಿಯ ತನಕ ಆರು ದಿನದಲ್ಲಿ ಸುಮಾರು 8124 ಶೋಗಳು ಪ್ರದರ್ಶನಗೊಂಡಿದ್ದು, ಅವುಗಳಿಂದ ಚಿತ್ರತಂಡದ ಪ್ರಕಾರ 61 ಕೋಟಿ 52 ಲಕ್ಷ ಬೃಹತ್ ಮೊತ್ತ ಗಳಿಕೆ ಆಗಿದೆ. ಇದು ನಿಜಕ್ಕೂ ಒಳ್ಳೆಯ ಕಲೆಕ್ಷನ್ ಅನ್ನಬಹುದು. ಕನ್ನಡ ಒಂದರಲ್ಲೇ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರೋ ಕೆಡಿ, ಪರಭಾಷೆಗಳಿಗೆ ಲಗ್ಗೆ ಇಟ್ರೆ ಇನ್ನೆಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋ ಲೆಕ್ಕಾಚಾರ ಕೂಡ ನಡೀತಿದೆ.
ಅಂದಹಾಗೆ ಇತ್ತೀಚೆಗೆ ಎಎಂಬಿ ಕಪಾಲಿಯಲ್ಲಿ ಕೆಡಿ ಚಿತ್ರದ ಸೆಲೆಬ್ರಿಟಿ ಶೋ ನಡೆಯಿತು. ಚಿತ್ರರಂಗದ ಬಹುತೇಕ ಮಂದಿ ಸ್ಟಾರ್ಗಳು ಬಂದು ಕೆಡಿ ನೋಡಿ ಮನಸಾರೆ ಕೊಂಡಾಡಿದ್ರು. ಅದರಲ್ಲೂ ಧ್ರುವ ಸರ್ಜಾ ಕರಿಯರ್ ಬೆಸ್ಟ್ ಪರ್ಫಾಮೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಚ್ಚ್ ಲಕ್ಷ್ಮೀಯಾಗಿ ರೀಷ್ಮಾ, ಧರ್ಮನಾಗಿ ರಮೇಶ್ ಅರವಿಂದ್ ಕೂಡ ಹೊಸ ಪ್ರಯೋಗಾತ್ಮಕ ಪಾತ್ರಗಳನ್ನ ಮಾಡಿದ್ದು, ಜೋಗಿ ಪ್ರೇಮ್ ನಿರ್ದೇಶನಕ್ಕೂ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.
ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಆರ್ ಚಂದ್ರು, ಎಸ್ ಮಹೇಂದರ್, ಮಿಲನಾ ನಾಗರಾಜ್, ಮಾನ್ವಿತಾ, ರಮೇಶ್ ಅರವಿಂದ್, ಶರಣ್, ತರುಣ್ ಸುಧೀರ್, ಅಜನೀಶ್ ಲೋಕನಾಥ್, ಆರ್ಮುಗಂ ರವಿಶಂಕರ್, ಪ್ರಮೋದ್ ಶೆಟ್ಟಿ, ಸಿಂಪಲ್ ಸುನಿ, ಬೃಂದಾ ಆಚಾರ್ಯ, ಅಜಯ್ ರಾವ್, ಬಹದ್ದೂರ್ ಚೇತನ್, ತನಿಷಾ ಕುಪ್ಪಂಡ, ಅಯೋಗ್ಯ ಮಹೇಶ್, ಪೃಥ್ವಿ ಅಂಬರ್, ರಕ್ಷಿತಾ ಪ್ರೇಮ್.. ಹೀಗೆ ಸಾಕಷ್ಟು ಮಂದಿ ಚಿತ್ರರಂಗದ ತಾರೆಯರು ಕೆಡಿ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇನ್ನೂ ಇಡೀ ಸ್ಯಾಂಡಲ್ವುಡ್ ಹೀಗೆ ಕೆಡಿ ಸಿನಿಮಾ ನೋಡಿ ಮನಸಾರೆ ಹರಸಿ, ಹಾರೈಸಿದ್ದನ್ನ ಕಂಡು ದಿಲ್ಖುಷ್ ಆದಂತಹ ಚಿತ್ರತಂಡ ಕೂಡ ಆ ಖುಷಿಯನ್ನ ಹಂಚಿಕೊಂಡಿದ್ದು ವಿಶೇಷ.
ಕೊನೆಯಲ್ಲಿ ಕೇಕ್ ಕಟ್ ಮಾಡೋ ಮೂಲಕ ಆ ಸಕ್ಸಸ್ ಸೆಲೆಬ್ರೇಷನ್ನ ಎಎಂಬಿ ಸಿನಿಮಾಸ್ನಲ್ಲೇ ಆಚರಿಸಿತು ಟೀಂ. ಅದೊಂದು ಅವಿಸ್ಮರಣೀಯ ಹಾಗೂ ಅನನ್ಯ ಗಳಿಗೆಗೆ ಸಾಕ್ಷಿ ಆಗಿದ್ದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





