ಕಂಟೆಂಟ್ನಲ್ಲಿ ಧಮ್ ಇದ್ರೆ.. ಪಾತ್ರಗಳು ಜೀವಂತಿಕೆ ಪಡೆದ್ರೆ.. ಮೇಕಿಂಗ್ ವ್ಹಾವ್ ಫೀಲ್ ತರಿಸಿದ್ರೆ ಸಾಕು ಆ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಗೆದ್ದೇ ಗೆಲ್ಲುತ್ತೆ. ಅಂತಹ ಚಿತ್ರಗಳು ಸೋತ ನಿದರ್ಶನವೂ ಇಲ್ಲ. ಸದ್ಯ ಈ ವರ್ಷ ದ್ವಿತಿಯಾರ್ಧದಲ್ಲಿರೋ ನಮಗೆ ಇಲ್ಲಿಯ ತನಕ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಬರಲೇ ಇಲ್ಲ. ಸದ್ಯ ಕರಾವಳಿ ಅಂಥದ್ದೊಂದು ಭರವಸೆ ಹುಟ್ಟಿಹಾಕಿದೆ.
- ಕರಾವಳಿ ಬರೀ ಸಿನಿಮಾ ಅಲ್ಲ.. ಎಮೋಷನ್ ಆಫ್ ‘ಕಂಬಳ’
- ಸಿನಿದುನಿಯಾಗೆ ಕಂಬಳದ ಗತ್ತು, ಗೈರತ್ತು ಪರಿಚಯಿಸಿದ ಚಿತ್ರ
- ಮೈಸೂರು ಮಹಾರಾಜರು ಕೂತಿದ್ದ ಕುರ್ಚಿಗಾಗಿ ಸೇಡಿನ ಕಥೆ
- ಮಹಾಬಲ, ಮಹಾವೀರ, ಧನ & ದೊಡ್ಡವ್ರ ರಕ್ತಸಿಕ್ತ ಅಧ್ಯಾಯ
ಕರಾವಳಿ.. ಕಳೆದ ಐದು ದಿನಗಳಿಂದ ರಾಜ್ಯದ ಪ್ರಮುಖ ಐದು ಸಿಟಿಗಳಲ್ಲಿ ಸ್ಪೆಷಲ್ ಪ್ರೀಮಿಯರ್ ಶೋಗಳಿಂದ ಎಲ್ಲರ ಗಮನ ಸೆಳೆದು, ಅದ್ಭುತ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆಯುತ್ತಿರೋ ಸಿನಿಮಾ. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಅನ್ನೋ ಸಿನಿಮಾ ನೀಡಿದ್ದ ಗುರುದತ್ ಗಾಣಿಗ ಈ ಬಾರಿ ನಿರ್ದೇಶನದ ಜೊತೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತು ಬಂದಿರೋ ಚಿತ್ರವಿದು. ಸದಾ ಭಿನ್ನ ಅಲೆಯ ಸಿನಿಮಾಗಳಿಗೆ ಹಾತೊರೆಯುವ ಗುರು, ಈ ಬಾರಿ ಕೂಡ ಡಿಫರೆಂಟ್ ಜಾನರ್ ಹಾಗೂ ಯಾರೂ ಟಚ್ ಮಾಡದೇ ಇರೋ ಅಂತಹ ಕಂಟೆಂಟ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಕರಾವಳಿ ಅಂದಾಕ್ಷಣ ನಮಗೆಲ್ಲಾ ನೆನಪಾಗೋದೇ ಕೋಲ, ದೈವ, ಕೊರಗಜ್ಜ, ಪಂಜುರ್ಲಿ ಹಾಗೂ ಕಂಬಳ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ದೈವ, ದೈವನರ್ತಕ ಹಾಗೂ ಅದ್ರ ಸುತ್ತಲಿನ ವಿಷಯಗಳನ್ನ ಟಚ್ ಮಾಡಿದ್ರು. ಆದ್ರೆ ಗುರುದತ್ ಗಾಣಿಗ ಕಂಬಳಕ್ಕೆ ಅತ್ಯದ್ಭುತ ದೃಶ್ಯರೂಪ ನೀಡಿದ್ದಾರೆ. ಯೆಸ್.. ನಾವು ಇಲ್ಲಿಯ ತನಕ ಕಂಬಳವನ್ನ ಬರೀ ಟಿವಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಓದುವ ಹಾಗೂ ನೋಡುವ ಮೂಲಕ ತಿಳಿದುಕೊಳ್ತಿದ್ವಿ. ಆದ್ರೆ ಕರಾವಳಿ ಭಾಗದ ಆ ದೇಸಿ ಕ್ರೀಡೆ ಅಥ್ವಾ ಆಚಾರವನ್ನ ಇಡೀ ವಿಶ್ವಕ್ಕೆ ಗೊತ್ತಾಗುವಂತಹ ಮಹಾನ್ ಕಾರ್ಯ ಮಾಡಿದೆ ಚಿತ್ರತಂಡ.
ಹೌದು.. ಕೆಸರಲ್ಲಿ ಎರಡು ಕೋಣಗಳ ಜೊತೆ ಒಬ್ಬನ ಕಂಬಳ ಓಟವನ್ನ ನೋಡೋಕೆ ವ್ಹಾವ್ ಅನಿಸುತ್ತೆ. ಆದ್ರೆ ಅದರ ಹಿಂದೆ ಎಷ್ಟೆಲ್ಲಾ ತಯಾರಿ ಇರುತ್ತೆ..? ಕೋಣಗಳನ್ನ ಆತ ಎಷ್ಟು ಪ್ರೀತಿಸ್ತಾನೆ. ಅವುಗಳನ್ನ ಹೇಗೆ ಸಾಕುತ್ತಾನೆ..? ಅದರ ತಯಾರಿ ಹೇಗೆ ನಡೆಯುತ್ತೆ..? ಅಲ್ಲಿರೋ ರಾಜಕೀಯ ಎಂಥದ್ದು..? ಪ್ರತಿಷ್ಠೆಗಾಗಿ ಡೊಡ್ಡವರು ಅನಿಸಿಕೊಂಡವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಅನ್ನೋದೇ ಸಿನಿಮಾ.
- ರಾಜ್ ಶೆಟ್ಟಿ ಕಂಬಳ ಓಟ ಪವರ್.. ಆಪ್ತ‘ಮಿತ್ರ’ ಖದರ್
- ಪ್ರಜ್ವಲ್ ದೇವರಾಜ್ ಕರಿಯರ್ಗೆ ಬಹುದೊಡ್ಡ ತಿರುವು
ಪ್ರಜ್ವಲ್ ದೇವರಾಜ್ ಲೀಡ್ನಲ್ಲಿ ಧನಂಜಯ ಪಾತ್ರದಲ್ಲಿ ಕಾಣಸಿಕ್ರೆ, ಅವರ ತಂದೆ ಮಾವೀರನಾಗಿ ರಾಜ್ ಬಿ ಶೆಟ್ಟಿ ಗಮನ ಸೆಳೆಯುತ್ತಾರೆ. ಅಲ್ಲದೆ, ಈ ಸಿನಿಮಾಗೆ ಇವರಿಬ್ಬರ ಹೊರತಾಗಿ ಮತ್ತೊಬ್ಬ ಹೀರೋ ಇದಾರೆ ಅನ್ನೋದು ಮಿತ್ರ ಅವ್ರ ಮಹಾಬಲ ಪಾತ್ರದಿಂದ ಅರಿವಾಗುತ್ತೆ. ಹೌದು.. ನಟ ಮಿತ್ರ ರಾಗ ಚಿತ್ರದ ಬಳಿಕ ಇಲ್ಲಿ ಹುಬ್ಬೇರಿಸಿ ನೋಡುವಂತ ಪರ್ಫಾಮೆನ್ಸ್ ನೀಡಿದ್ದಾರೆ. ಅಲ್ಲದೆ, ಖಡಕ್ ಖಳನಾಯಕನಾಗಿ ದೊಡ್ಡವ್ರ ಪಾತ್ರದಲ್ಲಿ ರಮೇಶ್ ಇಂದಿರ ಎಂದಿನಂತೆ ಗರ್ಜಿಸಿದ್ದಾರೆ.
ಕರಾವಳಿಯ ಕಂಬಳ ನೋಡೋಕೆ ಒಮ್ಮೆ ಮೈಸೂರು ಮಹಾರಾಜರೇ ಖುದ್ದು ಆಗಮಿಸಿದ್ದರಂತೆ. ಆಗ ಅವರು ಕೂತಿದ್ದಂತಹ ಪ್ರತಿಷ್ಠೆಯ ಕುರ್ಚಿಯನ್ನ ಕಂಬಳದಲ್ಲಿ ಗೆದ್ದವರಿಗೆ ಕೊಡ್ತಾ ಬರಲಾಗುತ್ತೆ. ಆದ್ರೆ 30 ವರ್ಷಗಳಿಂದ ಒಬ್ಬ ಅದನ್ನ ತನ್ನದೇ ಕಪಿಮುಷ್ಠಿಯಲ್ಲಿ ಇಟ್ಕೊಂಡು ಕಂಬಳ ನಡೆಯದಂತೆ ನೋಡಿಕೊಳ್ತಿರ್ತಾನೆ. ಆ 3 ದಶಕದ ಹಿಂದೆ ಕೆಸರಿನ ಕಂಬಳದಲ್ಲಿ ಮಾವೀರ ಹರಿಸಿದ ನೆತ್ತರು, ಕೊನೆಗೆ ಮೋಸದಿಂದ ಸಾವನ್ನಪಿದ ಮಾವೀರನ ಉಸಿರು ಇರಲಿದೆ. ಮಾವೀರನ ಆಪ್ತಮಿತ್ರ ಮಹಾಬಲನ ಕಂಬಳ ಗೆದ್ದು, ರಥಬೀದಿಯಲ್ಲಿ ಮೆರವಣಿಗೆ ಹೋಗುವ ಬಹುದೊಡ್ಡ ಆಸೆಯನ್ನ ನಾಯಕನಟ ಪೂರೈಸುತ್ತಾನಾ ಅನ್ನೋದನ್ನ ನೀವು ಥಿಯೇಟರ್ನಲ್ಲೇ ನೋಡಿ ಉತ್ತರ ಕಂಡುಕೊಳ್ಳಬೇಕಿದೆ.
ನಟಿ ಸಂಪದಾ ಪಶುವೈದ್ಯೆಯಾಗಿ ನಟ ಪ್ರಜ್ವಲ್ ದೇವರಾಜ್ ಮನದನ್ನೆಯಾಗಿ ಕಾಣಸಿಕ್ರೆ, ಏನಮ್ಮಾ ತುಳಸಿ ಖ್ಯಾತಿಯ ನಟಿ ಸುಶ್ಮಿತಾ ಭಟ್ ಭೂಮಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಕಾಮಿಡಿ ಕಿಲಾಡಿ ಗೋವಿಂದೇಗೌಡ ಕೂಡ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಭಿಮನ್ಯು ಸದಾನಂದನ್ ಸಿನಿಮಾಟೋಗ್ರಫಿ, ಸಚಿನ್ ಬಸ್ರೂರು ಸಂಗೀತ ಸಿನಿಮಾಗೆ ಪ್ಲಸ್ ಆಗಿದೆ.
- ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ವಾಯ್ಸ್ ಸಿನಿಮಾಗೆ ಮೈನಸ್
- ಫಾಸ್ಟ್ ಫಾರ್ವರ್ಡ್ ಸ್ಕ್ರೀನ್ಪ್ಲೇ.. ಮನರಂಜನೆಗಿಲ್ಲ ಮೋಸ
ಕರಾವಳಿ ಸಿನಿಮಾದಲ್ಲಿ ಫಾಸ್ಟ್ ಫಾರ್ವರ್ಡ್ ಸ್ಕ್ರೀನ್ಪ್ಲೇ ಇದೆ. ಫಟಾ ಫಟ್ ಆಂತ ನೋಡುಗರನ್ನ ಎಂಗೇಜಿಂಗ್ ಆಗಿ ಹಿಡಿದಿಟ್ಟುಕೊಳ್ಳಲಿದೆ ಸಿನಿಮಾ. ಆದ್ರೆ ರೆಮ್ಯುನರೇಷನ್ ವಿಚಾರ ಚಿತ್ರದ ನಿರ್ಮಾಪಕ ಹಾಗೂ ನಟ ಪ್ರಜ್ವಲ್ ನಡುವೆ ನಡೆದ ವಿವಾದ ಸಿನಿಮಾಗೆ ದೊಡ್ಡ ಹೊಡೆತ ನೀಡಿದೆ. ಪ್ರಜ್ವಲ್ ದೇವರಾಜ್ರಿಂದ ವಾಯ್ಸ್ ಡಬ್ ಮಾಡಿಸದೆ, ಡಬ್ಬಿಂಗ್ ಆರ್ಟಿಸ್ಟ್ ಕೈಯಿಂದ ಮಾಡಿಸಿದರಾದ್ರೂ, ಆ ವಾಯ್ಸ್ನಲ್ಲಿ ಧಮ್ ಇಲ್ಲ. ಅಲ್ಲದೆ, ಪ್ರಜ್ವಲ್ ಕೂಡ ಕಂಬಳ ಓಟಕ್ಕಾಗಿ ದೇಹವನ್ನ ಕಟ್ಟಮಸ್ತಾಗಿ ತಯಾರಿಸಿ, ಸಿಕ್ಸ್ ಪ್ಯಾಕ್ ಮಾಡಿದ್ದಿದ್ರೆ, ಆ ಪಾತ್ರ ಮತ್ತಷ್ಟು ಲೈವ್ಲಿಯಾಗಿ ಹೊರಹೊಮ್ಮುತ್ತಿತ್ತು.
ಮನರಂಜನೆಗೆ ಮೋಸವಿಲ್ಲದಂತೆ ರಿಯಲ್ ಮಳೆಯಲ್ಲೆಲ್ಲಾ ಈ ಸಿನಿಮಾದ ಚಿತ್ರೀಕರಣ ನಡೆಸಿರೋ ಗುರುದತ್ ಗಾಣಿಗ, ನಟ ರಾಜ್ ಬಿ ಶೆಟ್ರನ್ನ ಮತ್ತಷ್ಟು ಪರಿಣಾಮಕಾರಿಯಾಗಿ ಬಳಿಸಿಕೊಳ್ಳಬಹುದಿತ್ತು ಅನಿಸಲಿದೆ. ಇಂತಹ ಸಣ್ಣಪುಟ್ಟ ಮಿಸ್ಟೇಕ್ಗಳನ್ನ ಹೊರತುಪಡಿಸಿ ನೋಡೋದಾದ್ರೆ, ರೊಟೀನ್ ಸಿನಿಮಾಗಳ ನಡುವೆ ಕರಾವಳಿ ಒಂದೊಳ್ಳೆ ಪ್ರಯತ್ನವೇ ಸರಿ. ಇದು ನಿಜಕ್ಕೂ ವಿಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದ ಕಥೆಗಳನ್ನ ಬಯಸೋ ಚಿತ್ರಪ್ರೇಮಿಗಳಿಗೆ ರುಚಿಸಬಲ್ಲ ದೃಶ್ಯಕಾವ್ಯ. ಸೋ.. ಈ ವಾರಾಂತ್ಯಕ್ಕೆ ಥಿಯೇಟರ್ಗೆ ಹೋಗೋರಿಗೆ ಕರಾವಳಿ ಸಿನಿಮಾ ಒಂದೊಳ್ಳೆ ಆಯ್ಕೆಯಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





