ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್.ಟಿ.ಆರ್ ಅವರು ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ. ನಗರದ ಮಹದೇವಪುರ ಪ್ರದೇಶದಲ್ಲಿರುವ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಅವರು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಭಾನುವಾರ ನಡೆದ ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್.ಟಿ.ಆರ್ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದ್ದಂತೆ, ಸಾವಿರಾರು ಅಭಿಮಾನಿಗಳು ಆಸ್ಪತ್ರೆ ಸುತ್ತಮುತ್ತ ಸೇರುತ್ತಿದ್ದರು. ಕಾರ್ಯಕ್ರಮದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಪ್ರಚಾರ ಮಾಡದಿದ್ದರೂ, ತಮ್ಮ ನೆಚ್ಚಿನ ನಟನನ್ನು ನೇರವಾಗಿ ನೋಡಬೇಕೆಂಬ ಆಸೆಯಿಂದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದ್ದರು.
ಅಭಿಮಾನಿಗಳು ಆಸ್ಪತ್ರೆಯ ಒಳಭಾಗಕ್ಕೂ ಪ್ರವೇಶಿಸಲು ಪ್ರಯತ್ನಿಸಿದ ಕಾರಣ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಈ ವೇಳೆ ಆಸ್ಪತ್ರೆಯ ಎಸ್ಕಲೇಟರ್ಗೆ ಹಾನಿಯಾಗಿದ್ದು, ಅದು ಮುರಿದು ಹೋಗಿದೆ ಎಂದು ತಿಳಿದುಬಂದಿದೆ.
ಅಭಿಮಾನಿಗಳ ಅತಿಯಾದ ಉತ್ಸಾಹದಿಂದಾಗಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಮೊದಲಿಗೆ ಜನರನ್ನು ಮನವೊಲಿಸುವ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದರೂ, ಜನಸ್ತೋಮ ಕಡಿಮೆಯಾಗದ ಕಾರಣ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ನಂತರ ಪೊಲೀಸರು ಜನರನ್ನು ಹಿಂದಕ್ಕೆ ಸರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಕಿಮ್ಸ್ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೂನಿಯರ್ ಎನ್.ಟಿ.ಆರ್ ಬೆಂಗಳೂರಿಗೆ ಆಗಮಿಸಿದ್ದರು. ಅವರು ಸ್ಥಳಕ್ಕೆ ಬಂದ ತಕ್ಷಣ ಅಭಿಮಾನಿಗಳು ಜೋರಾಗಿ ಘೋಷಣೆ ಕೂಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ನಟನನ್ನು ನೋಡಲು ಆಗಮಿಸಿದ್ದ ಜನರಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಆಸ್ಪತ್ರೆ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅಚಾನಕ್ವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನಿಯಂತ್ರಣ ಕಷ್ಟಕರವಾಯಿತು. ಈ ನಡುವೆ, ಪರಿಸ್ಥಿತಿ ಸ್ವಲ್ಪ ಶಾಂತವಾದ ಬಳಿಕ ಜೂನಿಯರ್ ಎನ್.ಟಿ.ಆರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಬಳಿಕ ಅವರು ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿ ಅಲ್ಲಿಂದ ತೆರಳಿದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕ್ಷಣಕಾಲವಾದರೂ ನೋಡಿದ ಸಂತಸವನ್ನು ವ್ಯಕ್ತಪಡಿಸಿದರು.
ಘಟನೆಯ ಸಂದರ್ಭದಲ್ಲಿ ಯಾವುದೇ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





