ನಟ ಶ್ರೀಮುರಳಿ ಹಾಗೂ ವಿಜಯ್ ರಾಘವೇಂದ್ರ ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ. ಹೌದು.. ಹಿರಿಯ ನಿರ್ಮಾಪಕ ಚಿನ್ನೇಗೌಡ್ರ ಧರ್ಮಪತ್ನಿ ಜಯಮ್ಮ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಆ ಜೀವ, ಇಂದು ಕೊನೆಯುಸಿರೆಳೆದಿದೆ. ಜಯಮ್ಮನ ಅಗಲಿಕೆಗೆ ದೊಡ್ಮನೆ ಸೇರಿದಂತೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇದರ ಫುಲ್ ಡೆಟೇಲ್ಸ್ ಇಲ್ಲಿದೆ ನೋಡಿ..
- ಮುರಳಿ, ರಾಘುಗೆ ಮಾತೃವಿಯೋಗ.. ತಾಯಿಗೆ ಏನಾಗಿತ್ತು?
- ಅಮ್ಮನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಉಗ್ರಂ ಸ್ಟಾರ್ ಶ್ರೀಮುರಳಿ..!
- ಸ್ಪಂದನ ನೋವು ಮಾಸುವ ಮುನ್ನ ಚಿನ್ನಾರಿ ಮುತ್ತಗೆ ಆಘಾತ
- ಶಿವಣ್ಣ, ಧ್ರುವ, ಡಾ. ರಾಜ್ ಕುಟುಂಬದಿಂದ ಅಂತಿಮ ನಮನ
ಯಾವ ಕುಟುಂಬ ಸದಾ ನಗು-ನಗುತ್ತಾ ಇಡೀ ಚಿತ್ರರಂಗಕ್ಕೆ ಮಾದರಿಯಾಗಿತ್ತೋ, ಇಂದು ಅದೇ ಮನೆಯ ಅಂಗಳದಲ್ಲಿ ಕಣ್ಣೀರಿನ ಮಹಾಪೂರ ಹರಿಯುತ್ತಿದೆ. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಅರ್ಧಾಂಗಿ, ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ಹೆತ್ತ ಕರುಳು ಜಯಮ್ಮ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಯ ಬೆಡ್ ಮೇಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆ ತಾಯಿ, ಮಕ್ಕಳ ಪ್ರೀತಿ, ವೈದ್ಯರ ಚಿಕಿತ್ಸೆ ಯಾವುದಕ್ಕೂ ಸ್ಪಂದಿಸದೇ ಕಣ್ಣು ಮುಚ್ಚಿದ್ದಾರೆ. ಮಗನ ಯಶಸ್ಸನ್ನು ನೋಡಿ ಸಂಭ್ರಮಿಸುತ್ತಿದ್ದ ಆ ಕಣ್ಣುಗಳು ಇಂದು ಸದಾಕಾಲಕ್ಕೆ ಮುಚ್ಚಿಕೊಂಡಿರುವುದು ಇಡೀ ಗಾಂಧಿನಗರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಈಗಾಗಲೇ ಹೆಂಡತಿ ಸ್ಪಂದನಳನ್ನು ಕಳೆದುಕೊಂಡು, ಒಂಟಿತನ ಹಾಗೂ ಭರಿಸಲಾಗದ ನೋವಿನ ನರಕದಲ್ಲಿದ್ದ ವಿಜಯ್ ರಾಘವೇಂದ್ರ ಅವರಿಗೆ ತಾಯಿಯ ಸಾವು ಚೇತರಿಸಿಕೊಳ್ಳಲಾಗದ ಆಘಾತ ನೀಡಿದೆ. ಬೆಳ್ಳಿತೆರೆಯ ಮೇಲೆ ಅಬ್ಬರಿಸುವ, ನೂರಾರು ಜನ ರೌಡಿಗಳನ್ನು ಧೂಳೀಪಟ ಮಾಡುವ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಅಮ್ಮನ ಪಾರ್ಥೀವ ಶರೀರದ ಮುಂದೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಹೌದು, ಶ್ರೀಮುರಳಿ ಅವರಿಗೆ ಜಯಮ್ಮ ಕೇವಲ ತಾಯಿಯಾಗಿರಲಿಲ್ಲ, ಅವರ ಪ್ರತಿ ಉಸಿರಾಗಿದ್ದರು. ಸಿನಿಮಾದ ಸೋಲು-ಗೆಲುವಿನ ದಿನಗಳಲ್ಲಿ, ಬದುಕಿನ ಏಳುಬೀಳುಗಳಲ್ಲಿ ಶ್ರೀಮುರಳಿಯ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿದ್ದ ಈ ದೇವತೆ ಇಂದು ಮಣ್ಣಾಗಲು ಹೊರಟಿದ್ದಾರೆ. ತಾಯಿಯ ಪಾದಗಳನ್ನು ಹಿಡಿದು ಕಣ್ಣೀರು ಹಾಕುತ್ತಿರುವ ಆ ಇಬ್ಬರು ನಟರನ್ನು ನೋಡಿ ಅಲ್ಲಿ ನೆರೆದಿದ್ದವರ ಕರುಳು ಹಿಂಡಿ ಬಂದಿದೆ.
ಜಯಮ್ಮ ಅಂದ್ರೆ ಕೇವಲ ಇಬ್ಬರು ಸ್ಟಾರ್ ನಟರ ತಾಯಿಯಲ್ಲ, ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕಿ. ಖುಷಿ, ಸೇವಂತಿ ಸೇವಂತಿಯಂತಹ ಎವರ್ಗ್ರೀನ್ ಸಿನಿಮಾಗಳನ್ನು ನೀಡಿ ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಧೀಮಂತ ಮಹಿಳೆ. ಇಂದು ಆ ತಾಯಿಯ ಅಂತಿಮ ದರ್ಶನ ಪಡೆಯಲು ಇಡೀ ಚಿತ್ರರಂಗವೇ ಹರಿದು ಬಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕುಟುಂಬ, ಧ್ರುವ ಸರ್ಜಾ, ಜಯಮಾಲಾ, ದೊಡ್ಡಣ್ಣ, ಸುಂದರ್ ರಾಜ್ ಸೇರಿದಂತೆ ರಾಜಕುಮಾರ್ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಬಂದು ಜಯಮ್ಮ ಅವರ ಅಂತಿಮ ದರ್ಶನ ಪಡೆದರು.
ಕಾಲ ಉರುಳುತ್ತಿದೆ.. ಇತ್ತ ಹೆತ್ತ ತಾಯಿಯ ಅಂತಿಮ ವಿದಾಯಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಜಯಮ್ಮ ಅವರ ಪಾರ್ಥೀವ ಶರೀರವನ್ನು ಹೆಬ್ಬಾಳದ ಚಿತಾಗಾರಕ್ಕೆ ರವಾನಿಸಿದರು. ಚಿತಾಗಾರದ ಬಳಿಯೇ ಶಿವಣ್ಣ ದಂಪತಿ ಸೇರಿದಂತೆ ಚಿತ್ರರಂಗದ ಆಪ್ತ ವಲಯ ಕೊನೆಯದಾಗಿ ಆ ತಾಯಿಯ ಮುಖವನ್ನು ಕಣ್ತುಂಬಿಕೊಂಡರು. ಸಂಜೆ ವೇಳೆಗೆ ಕುಟುಂಬದ ಸಂಪ್ರದಾಯದಂತೆ, ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇಬ್ಬರು ಮಹಾನ್ ನಟರನ್ನು ಚಿತ್ರರಂಗಕ್ಕೆ ಕೊಟ್ಟು, ಸದ್ದಿಲ್ಲದೇ ಹೊರಟುಹೋದ ಆ ಮಹಾತಾಯಿಯ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





