ಏಪ್ರಿಲ್ 24, ಗಾನ ಗಂಧರ್ವ, ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಆ ಶುಭದಿನದಂದು ವಿನಯ್ ವಾಸುದೇವ್ ನಿರ್ದೇಶನದ “ದಿ” ಸಿನಿಮಾದ ವತಿಯಿಂದ ಡಾ ರಾಜಕುಮಾರ್ ಸ್ಮಾರಕದ ಬಳಿ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಸ್ರಾರು ಅಭಿಮಾನಿಗಳು ಇದರಲ್ಲಿ ಭಾಗಿಯಾಗಿದ್ದರು.
ಹೊಸ ಕನಸನ್ನು ಹೊತ್ತು ಬರುವ ನಮ್ಮಂತಹ ಹೊಸತಂಡಕ್ಕೆ ಡಾ. ರಾಜಕುಮಾರ್ ಅವರು ಆದರ್ಶ. ಅಂತಹ ಮೇರುನಟನ ಜನ್ಮದಿನದಂದು ನಮ್ಮ ಚಿತ್ರತಂಡದ ಸದಸ್ಯರೆಲ್ಲರೂ ಸೇರಿ ರಾಜಕುಮಾರ್ ಅವರ ಸ್ಮಾರಕದ ಬಳಿ ಅನ್ನದಾನ ಮಾಡುವ ಮೂಲಕ ಡಾ. ರಾಜಕುಮಾರ್ ಅವರ ಆಶೀರ್ವಾದ ಪಡೆದುಕೊಂಡೆವು ಎಂದು “ದಿ” ಚಿತ್ರದ ನಿರ್ದೇಶಕ ಹಾಗೂ ನಾಯಕ ವಿನಯ್ ವಾಸುದೇವ್ ತಿಳಿಸಿದ್ದಾರೆ. ಡಾಲಾ ಶರಣ್, ಅಭಯ್ ಗಣೇಶ್, ಸತೀಶ್ ಕುಮಾರ್ ಟಿ.ಎಲ್, ಛಾಯಾಗ್ರಾಹಕ ಅಲೆನ್ ಭರತ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ದಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆಯ ಹಂತ ತಲುಪಿದೆ. ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ್ ಆರ್ ನಾಯಕ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ.





