Bigg Boss Kannada 12 ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ವಾರದ ನಾಮಿನೇಶನ್ ಪ್ರಕ್ರಿಯೆ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ರಜತ್ ಹಾಗೂ ಚೈತ್ರಾ ಕುಂದಾಪುರ ಮನೆಯಿಂದ ಹೊರಬಂದಿದ್ದಾರೆ. ಇದಕ್ಕೂ ಜೊತೆಗೆ ಎರಡು ವಾರಗಳ ಕಾಲ ವೋಟಿಂಗ್ ಲೈನ್ ಓಪನ್ ಇರದ ಕಾರಣ, ಈ ವಾರ ಡಬಲ್ ಎಲಿಮಿನೇಶನ್ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಜೋರಾಗಿವೆ. ಇಂತಹ ಸಂದರ್ಭದಲ್ಲೇ ಬಿಗ್ ಬಾಸ್ ನಾಮಿನೇಶನ್ ಪ್ರಕ್ರಿಯೆಗೆ ಭಿನ್ನವಾದ ಟ್ವಿಸ್ಟ್ ನೀಡಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ವಾರದ ನಾಮಿನೇಶನ್ ಆಕ್ಟಿವಿಟಿ ರೂಮ್ನಲ್ಲಿ ನಡೆಯಿತು. ಒಬ್ಬೊಬ್ಬ ಸದಸ್ಯರನ್ನು ಒಳಗೆ ಕರೆಸಿ, ಉಳಿದ ಸದಸ್ಯರು ಯಾರನ್ನು ಹೊರಗೆ ಕಳಿಸಬೇಕು ಎಂದುಕೊಂಡಿದ್ದರೆ ಕೆಂಪು ಬಣ್ಣದ ಬೋರ್ಡ್ ತೋರಿಸಬೇಕಾಗಿತ್ತು. ಜೊತೆಗೆ, ನಾಮಿನೇಶನ್ನಿಂದ ಸೇಫ್ ಆಗಲು ಬಿಗ್ ಬಾಸ್ ವಿಶೇಷ ಅವಕಾಶವನ್ನೂ ನೀಡಿದರು. ಯಾರು ತಮ್ಮ ವಿರುದ್ಧ ಮತ ಹಾಕಿದ್ದಾರೆ ಎಂಬುದನ್ನು ಸರಿಯಾಗಿ ಊಹಿಸಿದರೆ, ಅವರು ನಾಮಿನೇಶನ್ನಿಂದ ಪಾರಾಗುವ ಅವಕಾಶ ಪಡೆದವರು.
ನಾಮಿನೇಶನ್ ವೇಳೆ ಅಶ್ವಿನಿ ಅವರು ಸ್ಪಂದನಾರನ್ನು ನಾಮಿನೇಟ್ ಮಾಡಿದರು. ರಕ್ಷಿತಾ ಅವರು ಧನುಷ್ ಅವರ ಹೆಸರನ್ನು ಮುಂದಿಟ್ಟರು. ಆದರೆ, ಈ ವಾರ ಅತೀ ಹೆಚ್ಚು ಚರ್ಚೆಗೆ ಕಾರಣವಾದದ್ದು ರಾಶಿಕಾ ಅವರ ಹೇಳಿಕೆ. ಅವರು ಗಿಲ್ಲಿ ನಟನ ವಿರುದ್ಧ ಗಂಭೀರ ಆರೋಪ ಮಾಡುತ್ತಾ, “ಗಿಲ್ಲಿ ಪ್ರತಿದಿನ ಒಂದೊಂದು ಪಾತ್ರ ಮಾಡ್ತಾನೆ. ಅವನು ತುಂಬಾ ಕನ್ನಿಂಗ್. ದೊಡ್ಡ ಕುತಂತ್ರಿ” ಎಂದು ನೇರವಾಗಿ ಹೇಳಿದ್ದಾರೆ. ಇದರಿಂದ ಗಿಲ್ಲಿ ನಟ ಮತ್ತೊಮ್ಮೆ ಟಾರ್ಗೆಟ್ ಆಗಿದ್ದಾರೆ.
ಸ್ಪಂದನಾ ವಿಚಾರದಲ್ಲೂ ಮನೆಯಲ್ಲಿ ಅಭಿಪ್ರಾಯ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ ಅಶ್ವಿನಿ ಅವರ ಆಪ್ತ ಸ್ನೇಹಿತೆಯಾಗಿದ್ದ ಜಾಹ್ನವಿ ಕೂಡ ಸ್ಪಂದನಾ ಬಗ್ಗೆ ‘ವೀಕ್ ಕಂಟೆಸ್ಟೆಂಟ್’ ಎನ್ನುವ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಇದೀಗ ಅಶ್ವಿನಿ ಅವರು ನೇರವಾಗಿ ಹೇಳದೇ ಇದ್ದರೂ, ಆಟದ ದೃಷ್ಟಿಯಿಂದ ಸ್ಪಂದನಾ ಎಲ್ಲರಿಗಿಂತ ದುರ್ಬಲ ಸ್ಪರ್ಧಿ ಎಂದು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸ್ಪಂದನಾ ಎಲಿಮಿನೇಶನ್ ಅಪಾಯದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದೆಡೆ, ಗಿಲ್ಲಿ ನಟನ ಆಟದ ಶೈಲಿ ಮನೆಮಂದಿಯ ಅಸಮಾಧಾನಕ್ಕೆ ಕಾರಣವಾಗಿದೆ. “ದಿನವೂ ಒಂದೊಂದು ಕ್ಯಾರೆಕ್ಟರ್ ಪ್ಲೇ ಮಾಡ್ತಾನೆ, ಎಲ್ಲರನ್ನೂ ಮ್ಯಾನಿಪುಲೇಟ್ ಮಾಡ್ತಾನೆ” ಎಂದು ರಾಶಿಕಾ ಕಿಡಿಕಾರಿದ್ದು, ಗಿಲ್ಲಿ ನಟ ಈ ವಾರವೇ ಎಲಿಮಿನೇಟ್ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ-ಭಾನುವಾರ ಸುದೀಪ್ ಅವರ ಲುಕ್, ಅವರ ನೇರ ಮಾತುಗಳು ಹಾಗೂ ಸ್ಪರ್ಧಿಗಳಿಗೆ ಕೊಡುವ ಕ್ಲಾಸ್ ಎಲ್ಲವೂ ಶೋಗೆ ಹೈಲೈಟ್. ಆದರೆ ಈ ವಾರ ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಕಾದಿದೆ. ಈ ಬಾರಿ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ ಎಂದು ಸ್ವತಃ ಅವರು ಘೋಷಿಸಿದ್ದಾರೆ.
ಕಾರಣ, ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಪ್ರಚಾರ ಭರದಿಂದ ನಡೆಯುತ್ತಿದೆ. ಈ ಚಿತ್ರ ಡಿಸೆಂಬರ್ 25ರಂದು ಬಹುಭಾಷೆಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದ್ದು, ಅದರ ಪ್ರಚಾರ ಕಾರ್ಯಕ್ರಮಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಮುಂದಿನ ಕಾರ್ಯಕ್ರಮಗಳೂ ಸಾಲುಗಟ್ಟಿ ನಿಂತಿವೆ. ಇದರಿಂದಾಗಿ ಈ ವಾರ ಮಿಡ್ ವೀಕ್ ಎಲಿಮಿನೇಶನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.





