‘ರಾಧಾ ರಮಣ’ ಮತ್ತು ‘ಗಾಂಧಾರಿ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕಾವ್ಯ ಗೌಡ ತಮ್ಮ ಕುಟುಂಬದಲ್ಲಿ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳ ಅಂತ್ಯದಲ್ಲಿ ನಡೆದ ಕುಟುಂಬ ಕಲಹ ಈಗ ಹೊಸ ತಿರುವು ಪಡೆದಿದ್ದು, ತಮ್ಮ ಮೇಲೆ ನಡೆದ ಹಲ್ಲೆ ಕುರಿತು ಕಾವ್ಯ ಗೌಡ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕರ ಮುಂದೆ ಹಂಚಿಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ
ರಾಮಮೂರ್ತಿ ನಗರದ ಮಾಜಿ ಕಾರ್ಪೊರೇಟರ್ ಎಂ. ರೇವಣ್ಣ ಅವರ ಮನೆಯಲ್ಲಿ ಗಲಾಟೆ ನಡೆದಿತ್ತು. ರೇವಣ್ಣ ಅವರ ಹಿರಿಯ ಪುತ್ರ ನಂದೀಶ್ ಅವರ ಪತ್ನಿ ಪ್ರೇಮಾ ಹಾಗೂ ಕಿರಿಯ ಪುತ್ರ ಸೋಮಶೇಖರ್ ಅವರ ಪತ್ನಿ ಕಾವ್ಯ ಗೌಡ ನಡುವೆ ಮಾತಿನ ಚಕಮಕಿ ಆರಂಭವಾಗಿ, ನಂತರ ಹಲ್ಲೆ ಮಾಡಲಾಗಿದೆ. ಈ ಘಟನೆ ಬಳಿಕ ಇಬ್ಬರೂ ಪರಸ್ಪರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರೇಮಾ ಮಾಧ್ಯಮಗಳ ಮುಂದೆ ಮಾತನಾಡಿ, ಕಾವ್ಯ ಹಾಗೂ ಅವರ ಪತಿ ಸೋಮಶೇಖರ್ ತಮ್ಮ ಕುಟುಂಬದ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ತಮ್ಮ ತಂಗಿಯ ಮೇಲೆ ಹಲ್ಲೆ ನಡೆದಿದೆ, ತಮ್ಮ ತಂದೆಯನ್ನು ಅವಮಾನಿಸಲಾಗಿದೆ. ಆಸ್ತಿ ವಿಚಾರದಲ್ಲಿ ಕಿರಿಕ್ ಮಾಡಲಾಗಿದೆ ಎಂಬುದಾಗಿ ಪ್ರೇಮಾ ಹೇಳಿಕೆ ನೀಡಿದ್ದರು.
ಸಿಸಿಟಿವಿ ವಿಡಿಯೋದಲ್ಲಿ ಏನು?
ಈಗ ಕಾವ್ಯ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳಲ್ಲಿ ಪ್ರೇಮಾ ತಂಗಿ ಕಾವ್ಯ ಮೇಲೆ ಹಲ್ಲೆ ಮಾಡುತ್ತಿರುವುದು ಹಾಗೂ ಪ್ರೇಮಾ ಚಪ್ಪಲಿ ಎಸೆಯುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತವೆ. ಇದನ್ನು ಹಂಚಿಕೊಂಡು, “ಒನ್ ಸೈಡ್ ಕಥೆ ಮಾತ್ರ ಕೇಳಿದ್ದೀರಾ, ಇದೀಗ ಸತ್ಯದ ಮುಖ ನೋಡಬೇಕು” ಎಂದು ಕಾವ್ಯ ಬರೆದಿದ್ದಾರೆ.
ಕಾವ್ಯ ಗೌಡ ಭಾವುಕ ಪೋಸ್ಟ್
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾವ್ಯ ಗೌಡ ಭಾವುಕವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನಾಲಿಗೆಗೆ ಎಲುಬಿಲ್ಲ ಎಂದುಕೊಂಡು ಯಾರ ಜೀವನದ ಬಗ್ಗೆ ಏನು ಬೇಕಾದರೂ ಮಾತನಾಡುವುದು ಸರಿಯಲ್ಲ. ಮಾತುಗಳಿಗೆ ಜವಾಬ್ದಾರಿ ಇರಬೇಕು. ನಾನು ಯಾವತ್ತೂ ಮಾಧ್ಯಮದ ಮುಂದೆ ಮಾತನಾಡುವವಳಲ್ಲ. ಮೌನವೇ ನನ್ನ ಉತ್ತರ ಎಂದು ನಂಬಿ ಬದುಕಿದವಳು. ಆದರೆ ಇಂದು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ,” ಎಂದು ಅವರು ಬರೆದಿದ್ದಾರೆ.
ತಮ್ಮ ಮೇಲೆ ಬಂದ ಅಪವಾದಗಳು, ಆಸ್ತಿ ವಿಚಾರದಲ್ಲಿ ತಮ್ಮ ಹೆಸರನ್ನು ಹಾಳುಮಾಡಲು ನಡೆದ ಪ್ರಯತ್ನಗಳ ಕುರಿತು ಉಲ್ಲೇಖಿಸಿರುವ ಅವರು, “ನೋವು, ಅವಮಾನ, ಕಣ್ಣೀರು ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ. ನನ್ನ ಕುಟುಂಬ ಮತ್ತು ಮಗುವಿನ ಭವಿಷ್ಯ ನನ್ನಿಗೆ ಮುಖ್ಯವಾಗಿತ್ತು. ಆದರೂ ನಾನು ಸತ್ಯದ ದಾರಿಯನ್ನು ಬಿಟ್ಟಿಲ್ಲ. ಸತ್ಯ ಯಾವತ್ತೂ ಸೋಲುವುದಿಲ್ಲ,” ಎಂದು ಹೇಳಿದ್ದಾರೆ.
“ಇವತ್ತು ಸತ್ಯ ನನ್ನ ಜೊತೆ ನಿಂತಿದೆ. ನಾನು ತಪ್ಪು ಮಾಡಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ. ಸತ್ಯಮೇವ ಜಯತೆ” ಎಂದು ತಮ್ಮ ಹೇಳಿಕೆಯನ್ನು ಕೊನೆಗೊಳಿಸಿದ್ದಾರೆ.
ಹೈಕೋರ್ಟ್ ಮಧ್ಯಂತರ ತಡೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ತನಿಖೆಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ತಡೆ ನೀಡಿದೆ. ಕೌಟುಂಬಿಕ ಕಲಹದ ಹಿನ್ನೆಲೆ ದಾಖಲಾಗಿದ್ದ ಕೌಂಟರ್ ದೂರುಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ. ಇದರಿಂದ ಕಾವ್ಯ ಗೌಡಗೆ ತಾತ್ಕಾಲಿಕವಾಗಿ ನೆಮ್ಮದಿ ಸಿಕ್ಕಿದ್ದು, ಪ್ರಕರಣದ ಮುಂದಿನ ವಿಚಾರಣೆ ಎಲ್ಲರ ಗಮನ ಸೆಳೆಯುತ್ತಿದೆ.




