ದೊಡ್ಮನೆ ದೊರೆ ಡಾ ಶಿವರಾಜ್ಕುಮಾರ್ ಸಿನಿಯಾನಕ್ಕೆ 4 ದಶಕಗಳ ಸಂಭ್ರಮ. ಅಭಿಮಾನಿಗಳು ಇತ್ತೀಚೆಗೆ ಅವ್ರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡಿಸಿದ್ರು. ಆದ್ರೀಗ ಕರ್ನಾಟಕ ಸಿಎಂ, ಡಿಸಿಎಂ ಸೇರಿದಂತೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೂಡ ಶಿವಣ್ಣಗೆ ಶುಭ ಕೋರಿದ್ದಾರೆ. ಅದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
- ಶಿವಣ್ಣನಿಗೆ ಶುಭ ಕೋರಿದ ಆಂಧ್ರ DCM.. ಕನ್ನಡಿಗರು ಖುಷ್
- ಡಾ. ರಾಜ್ ನನ್ನ ಫೇವರಿಟ್.. ಲೆಗಸಿ ಮುಂದುವರೆಸಿದ ಶಿವಣ್ಣ
- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ದೊಡ್ಮನೆ ದೊರೆಗೆ ವಿಶ್
ಲಿವಿಂಗ್ ಲೆಜೆಂಡ್ ಶಿವರಾಜ್ಕುಮಾರ್ ಬರೀ ಸ್ಟಾರ್ ಅಲ್ಲ, ಕನ್ನಡ ಚಿತ್ರರಂಗದ ಮೇರು ಪರ್ವತ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವ್ರ ಹಿರಿಯ ಮಗ ಕೂಡ ಹೌದು. 90 ವರ್ಷಗಳ ಇತಿಹಾಸವಿರೋ ನಮ್ಮ ಚಂದನವನಕ್ಕಾಗಿ ಶಿವಣ್ಣ ಬರೋಬ್ಬರಿ 40 ವರ್ಷಗಳಿಂದ ಕಲಾ ಸೇವೆ ಮಾಡ್ತಾ ಬರ್ತಿರೋದು ಖುಷಿಯ ವಿಚಾರ. ಆನಂದ್ ಸಿನಿಮಾದಿಂದ ಇಲ್ಲಿಯವರೆಗೆ 140ಕ್ಕೂ ಅಧಿಕ ಚಿತ್ರಗಳನ್ನ ಮಾಡಿರೋ ಶಿವಣ್ಣ, ಇಂದಿಗೂ ಸರಳತೆಯ ಸಾರ್ವಭೌಮ ಆಗಿ, ಮಗುವಿನಷ್ಟೇ ನಿಷ್ಕಲ್ಮಶ ವ್ಯಕ್ತಿತ್ವ ಹೊಂದಿದ್ದಾರೆ.
ಶಿವಣ್ಣನ 40 ವರ್ಷಗಳ ಸಾರ್ಥಕ ಸಿನಿಯಾನಕ್ಕೆ ಅಭಿಮಾನಿ ದೇವರುಗಳು ಇತ್ತೀಚೆಗೆ ನಾಗವಾರದಲ್ಲಿರೋ ಶಿವಣ್ಣನ ಶ್ರೀಮುತ್ತು ನಿವಾಸಕ್ಕೆ ತೆರಳಿ, ಕೇಕ್ ಕಟ್ ಮಾಡಿಸಿ, ಶುಭ ಕೋರಿದ್ರು. ಸಾವನ್ನ ಗೆದ್ದು ಬಂದಿರೋ ಶಿವಣ್ಣನಿಗೆ ಇದೊಂಥರಾ ಮರುಜನ್ಮ ಅಂದ್ರೆ ತಪ್ಪಾಗಲ್ಲ. ಇಂದಿಗೂ ಕಲೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿರೋ ಶಿವಣ್ಣನಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಾಮಾಜಿಕ ಜಾಲತಾಣದ ಮೂಲಕ ಉಪಮುಖ್ಯಮಂತ್ರಿ ಕಚೇರಿಯಿಂದ ಲೆಟರ್ ಹೆಡ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ವೈಯಕ್ತಿಕ ಸೋಶಿಯಲ್ ಮೀಡಿಯಾ ಪೇಜ್ಗಳ ಮೂಲಕವೂ ಅಭಿನಂದಿಸಿದ್ದಾರೆ.
ಸೂಪರ್ ಸ್ಟಾರ್ ಡಾ. ರಾಜ್ಕುಮಾರ್ ಅವರು ನನ್ನ ಫೇವರಿಟ್ ಆ್ಯಕ್ಟರ್. ಅವರ ಲೆಗಸಿಯನ್ನ ಶಿವರಾಜ್ಕುಮಾರ್ ಅವರು ಮುಂದುವರೆಸಿರೋದು ಗ್ರೇಟ್. ನಿಮ್ಮ ಈ ಅಭೂತಪೂರ್ವ ನಾಲ್ಕು ದಶಕಗಳ ಸಿನಿಯಾನಕ್ಕೆ ಶುಭಾಶಯಗಳು. ಆ ದೇವರು ನಿಮಗೆ ಒಳ್ಳೆಯ ಆರೋಗ್ಯದ ಜೊತೆ ಮತ್ತಷ್ಟು ಮೈಲಿಗಲ್ಲುಗಳನ್ನ ಸಾಧಿಸೋ ಶಕ್ತಿ ನೀಡಲಿ ಅಂತ ತುಂಬು ಹೃದಯದಿಂದ ಹಾರೈಸಿದ್ದಾರೆ. ಇದು ಬರೀ ಶಿವಣ್ಣ ಅಥ್ವಾ ದೊಡ್ಮನೆ ಫ್ಯಾನ್ಸ್ಗಷ್ಟೇ ಅಲ್ಲ, ಇಡೀ ಕರುನಾಡಿನ ಜನಕ್ಕೆ ಖುಷಿ ತಂದಿದೆ.
ಇನ್ನೂ ಶಿವಣ್ಣನ ಈ ಮೈಲ್ಸ್ಟೋನ್ ಸಾಧನೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಶುಭ ಕೋರಿದ್ದಾರೆ. ಪಕ್ಕದ ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಶಿವಣ್ಣನಿಗೆ ಅತ್ಯಾಪ್ತ ಗೆಳೆಯ. ಅವರು ಕೂಡ ಅಭಿನಂದನೆ ಸಲ್ಲಿಸಿದ್ರೆ ಇಡೀ ಸೌತ್ ಇಂಡಿಯಾ ಶುಭ ಕೋರಿದಂತಾಗುತ್ತದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





