ಬೆಂಗಳೂರು : ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ವೀಕ್ಷಣೆ ಪಡೆಯುವ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್–12 ತನ್ನ ಅಂತಿಮ ಘಟ್ಟ ತಲುಪಿದ್ದು, ಇಂದು ರಾತ್ರಿ 11 ಗಂಟೆಗೆ ವಿಜೇತರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ, ಕುತೂಹಲ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಫಿನಾಲೆ ದಿನವಾಗಿರುವುದರಿಂದ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ಈಗಾಗಲೇ ಜಮಾಯಿಸಿದ್ದು, ಪೊಲೀಸ್ ಇಲಾಖೆ ಹೈ ಅಲರ್ಟ್ಗೆ ಹೋಗಿದೆ.
ಬಿಗ್ ಬಾಸ್ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಎದುರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀನಿವಾಸ ಗೌಡ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಅಭಿಮಾನಿಗಳ ಸಂಖ್ಯೆಯು ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರಿಸಲು ಹೆಚ್ಚುವರಿ ಪೊಲೀಸ್ ಪಡೆ, ಕಮಾಂಡೋ ದಳ ಹಾಗೂ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.
ಇಂದು ವಿಜೇತರ ಹೆಸರು ಘೋಷಣೆಯಾದ ಕೂಡಲೇ ಅಭಿಮಾನಿಗಳ ಸಂಭ್ರಮಾಚರಣೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬಿಗ್ ಬಾಸ್ ಆಡಳಿತ ಮಂಡಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದು, ವಿಜೇತರಾಗುವ ಸ್ಪರ್ಧಿಯನ್ನು ಇಂದೇ ಸಾರ್ವಜನಿಕವಾಗಿ ಹೊರಗೆ ಬಿಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜೇತರನ್ನು ಬೆಳಗ್ಗೆವರೆಗೂ ಬಿಗ್ ಬಾಸ್ ಮನೆಯೊಳಗೆಯೇ ಇರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವಿಜೇತ ಹೊರಬಂದ ತಕ್ಷಣ ಅಭಿಮಾನಿಗಳ ಉತ್ಸಾಹ ನಿಯಂತ್ರಣ ಮೀರುವ ಸಾಧ್ಯತೆ ಹೆಚ್ಚಿದೆ. ಅಭಿಮಾನಿಗಳು ಗುಂಪುಗೂಡಿ ಸಂಭ್ರಮಾಚರಣೆ ನಡೆಸುವ ವೇಳೆ ಅಹಿತಕರ ಘಟನೆಗಳು, ತಳ್ಳಾಟ, ರಸ್ತೆ ತಡೆ ಅಥವಾ ಗಲಾಟೆಗಳು ಸಂಭವಿಸಬಹುದೆಂಬ ಆತಂಕವಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವಿಜೇತರನ್ನು ಸಾರ್ವಜನಿಕವಾಗಿ ಕಾಣಿಸದಂತೆ ನಿರ್ಬಂಧ ಹೇರಲಾಗಿದೆ.
ಇದೇ ವೇಳೆ, ಜಾಲಿವುಡ್ ಸ್ಟುಡಿಯೋ ಸುತ್ತಲಿನ ರಸ್ತೆಗಳಲ್ಲೂ ಸಂಚಾರ ನಿಯಂತ್ರಣ ಜಾರಿಯಲ್ಲಿದ್ದು, ಅನಗತ್ಯವಾಗಿ ಗುಂಪು ಸೇರುವುದನ್ನು ಪೊಲೀಸರು ತಡೆಹಿಡಿಯುತ್ತಿದ್ದಾರೆ. ಕೆಲವೆಡೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಅನುಮತಿ ಇಲ್ಲದೆ ಒಳಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಅಭಿಮಾನಿಗಳು ಶಾಂತಿ ಕಾಪಾಡುವಂತೆ, ಯಾವುದೇ ಪ್ರಚೋದನೆಗೆ ಒಳಗಾಗದಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಬಿಗ್ ಬಾಸ್ ಸೀಸನ್–12 ಈ ಬಾರಿ ಅಪಾರ ಜನಪ್ರಿಯತೆ ಗಳಿಸಿದ್ದು, ಪ್ರತಿಯೊಬ್ಬ ಫೈನಲಿಸ್ಟ್ಗೂ ದೊಡ್ಡ ಅಭಿಮಾನಿ ಬಳಗವಿದೆ. ಇದೇ ಕಾರಣದಿಂದ ಫಿನಾಲೆ ದಿನ ವಿಶೇಷ ಭದ್ರತಾ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.





