ಬೆಂಗಳೂರು, ಆಗಸ್ಟ್ 2: ರಾಜ್ಯದಲ್ಲಿ (Karnataka) ಮುಂಗಾರು ಮಳೆಯ (Monsoon Rain) ಅಭಾವ ಮತ್ತು ಏರಿಳಿತದಿಂದಾಗಿ ಭತ್ತದ ಬಿತ್ತನೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಅಕ್ಕಿ (Rice) ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ದರಗಳು ಗಗನಕ್ಕೇರಿವೆ. ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಕಿಯ ಬೆಲೆಯು ಬರೋಬ್ಬರಿ ಶೇ.35 ರಷ್ಟು ಹೆಚ್ಚಳವಾಗಿದ್ದು, ಗ್ರಾಹಕರಿಗೆ ದೊಡ್ಡ ಆಘಾತವನ್ನು ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಶೇ.35 ರಷ್ಟು ಮಳೆ ಕೊರತೆಯಾಗಿದ್ದು, ಇದು ಕೃಷಿ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಬೆಲೆ ಏರಿಕೆಗೆ ಕಾರಣಗಳೇನು?
ರಾಜ್ಯದ ಪ್ರಮುಖ ಕೃಷಿ ವಲಯಗಳಲ್ಲಿ ಭತ್ತದ ಇಳುವರಿಯು ನಿರೀಕ್ಷಿತ ಪ್ರಮಾಣಕ್ಕಿಂತ ಕುಸಿದಿದೆ. ಸಾಕಷ್ಟು ಮಳೆಯಾಗದ ಕಾರಣ ನೀರಾವರಿ ಸಮಸ್ಯೆ ಉಂಟಾಗಿದ್ದು, ರೈತರು ಕಡಿಮೆ ಪ್ರಮಾಣದಲ್ಲಿ ಭತ್ತವನ್ನು ಬೆಳೆದಿದ್ದಾರೆ. ಪರಿಣಾಮವಾಗಿ, ಮಾರುಕಟ್ಟೆಗೆ ಅಕ್ಕಿಯ ಆಗಮನವು ಗಣನೀಯವಾಗಿ ಕಡಿಮೆಯಾಗಿದೆ. ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಅಕ್ಕಿಯ ಅಭಾವ ಸೃಷ್ಟಿಯಾಗಿದ್ದು, ದಿನನಿತ್ಯದ ಬೇಡಿಕೆಯನ್ನು ಪೂರೈಸಲು ವರ್ತಕರು ಪರದಾಡುವಂತಾಗಿದೆ. ಯಶವಂತಪುರದ APMC ಮಾರುಕಟ್ಟೆಗೆ ನಿತ್ಯ ಸುಮಾರು 50 ಲೋಡ್ ಅಕ್ಕಿ ಆಗಮಿಸುತ್ತಿತ್ತು. ಆದರೆ, ಇಳುವರಿ ಕೊರತೆಯಿಂದಾಗಿ ಈಗ ಕೇವಲ 35-40 ಲೋಡ್ಗಳು ಮಾತ್ರ ಆಗಮಿಸುತ್ತಿವೆ.
ಅಕ್ಕಿ ತಳಿಗಳ ದರ ಏರಿಕೆ ವಿವರ
ಸಾಮಾನ್ಯ ಜನರು ನಿತ್ಯ ಬಳಸುವ ಪ್ರಮುಖ ಅಕ್ಕಿ ತಳಿಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಪ್ರತಿ ಕೆಜಿಗೆ ₹10 ರಿಂದ ₹20 ರಷ್ಟು ಹೆಚ್ಚಳವಾಗಿದೆ. ವಿವಿಧ ತಳಿಗಳ ಪ್ರಸ್ತುತ ಬೆಲೆಗಳು ಹೀಗಿವೆ.
-
ದಪ್ಪ ಅಕ್ಕಿ: ₹37 – ₹42 ಪ್ರತಿ ಕೆಜಿ
-
ಬಾಯ್ಡ್ ಅಕ್ಕಿ (Boiled Rice): ₹30 – ₹34 ಪ್ರತಿ ಕೆಜಿ
-
ಸೋನಾ ಸ್ಟೀಮ್ ಅಕ್ಕಿ: ₹46 – ₹64 ಪ್ರತಿ ಕೆಜಿ
-
ಸೋನಾ ಮಸೂರಿ ರಾ ಅಕ್ಲೊ (Raw): ₹54 – ₹70 ಪ್ರತಿ ಕೆಜಿ
-
ಕೋಲಂ ಅಕ್ಕಿ (Kolam Rice): ₹75 – ₹84 ಪ್ರತಿ ಕೆಜಿ
ಸೋನಾ ಮಸೂರಿ, ಸ್ಟೀಮ್ ರೈಸ್, ಬುಲೆಟ್ ಅಕ್ಕಿ ಮತ್ತು ಕೋಲಂ ಅಕ್ಕಿ ತಳಿಗಳು ದುಬಾರಿಯಾಗಿವೆ. ಈ ತಳಿಗಳು ಸಾರ್ವಜನಿಕರಲ್ಲಿ ಹೆಚ್ಚು ಬೇಡಿಕೆಯಲ್ಲಿವೆ, ಆದ್ದರಿಂದ ಬೆಲೆ ಏರಿಕೆಯು ಸಾಮಾನ್ಯ ಜನರ ಜೇಬಿಗೆ ಹೆಚ್ಚು ಆಘಾತ ಉಂಟುಮಾಡಿದೆ.
ವ್ಯಾಪಾರಿಗಳ ಅಭಿಪ್ರಾಯ
ಯಶವಂತಪುರ APMCಯ ಅಕ್ಕಿ ವ್ಯಾಪಾರಿಗಳ ಪ್ರಕಾರ, “ನಿರೀಕ್ಷಿತ ಅಕ್ಕಿ ಲೋಡ್ಗಳು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಕಡೆ ಲೋಡ್ಗಳ ಸಂಖ್ಯೆ ಕಡಿಮೆಯಾಗಿದ್ದರೆ, ಇನ್ನೊಂದು ಕಡೆ ಪೂರೈಕೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಈ ಸಮಸ್ಯೆ ಮುಂದುವರೆಯುವ ಸಾಧ್ಯತೆಯಿದೆ” ಎಂದಿದ್ದಾರೆ. ಅಲ್ಲದೇ, ಮುಂಬರುವ ದಿನಗಳಲ್ಲಿಯೂ ಮಳೆಯ ಕೊರತೆ ಹೀಗೆಯೇ ಮುಂದುವರಿದರೆ, ಅಕ್ಕಿ ಬೆಲೆಯು ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.





