ನೋಯ್ಡಾ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರನೆ ಕಾಣಿಸಿಕೊಂಡ ಬೆಂಕಿಯಿಂದಾಗಿ, ಕಾರಿನಿಂದ ಹೊರಬರಲಾಗದೆ 46 ವರ್ಷದ ಉದ್ಯಮಿಯೊಬ್ಬರು ಕಾರಿನೊಳಗೆ ಸುಟ್ಟು ಕರಕಲಾದ ಘಟನೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ:
ಮೃತರನ್ನು ಬಣ್ಣದ ವ್ಯವಹಾರ ನಡೆಸುತ್ತಿದ್ದ ರಾಜ್ ಕುಮಾರ್ ಸಿಂಘಾಲ್ ಎಂದು ಗುರುತಿಸಲಾಗಿದೆ. ತಡರಾತ್ರಿ ಸಿಂಘಾಲ್ ಅವರು ತಮ್ಮ ಕೆಲಸ ಮುಗಿಸಿ ಪಾರ್ಥಲಾ ಚೌಕ್ ಕಡೆಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೋರ್ಖಾ ಗ್ರಾಮದ ಸಮೀಪ ಕಾರು ಚಲಿಸುತ್ತಿದ್ದಾಗ, ಏಕಾಏಕಿ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹೊಗೆಯಿಂದ ಕಾರಿನಲ್ಲೇ ಉಸಿರುಬಿಟ್ಟ ಉದ್ಯಮಿ
ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಾರನ್ನು ಆವರಿಸಿಕೊಂಡಿದೆ. ಕಾರಿನ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಜಾಮ್ ಆಗಿದೆ ಅಥವಾ ಬೆಂಕಿಯ ಹೊಗೆಯಿಂದ ಉದ್ಯಮಿ ಪ್ರಜ್ಞೆ ತಪ್ಪಿ ಕಾರಿನಲ್ಲೇ ಉಳಿದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ಅವರು ಒಳಗೆ ಸಿಲುಕಿಕೊಂಡಿದ್ದಾರೆ. ಬಳಿಕ ರಸ್ತೆಯಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆ:
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ,ಪೊಲೀಸಲು ಸ್ಥಳಕ್ಕೆ ಬರುವ ಮೊದಲೇ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸಿಂಘಾಲ್ ಅವರು ಕಾರಿನ ಸೀಟಿನಲ್ಲೇ ಸುಟ್ಟು ಕರಕಲಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ನಂತರ, ಕಾರಿನೊಳಗಿದ್ದ ಮೃತದೇಹವನ್ನು ಹೊರತೆಗೆಯಲಾಯಿತು.
ಬೆಂಕಿ ವೇಗವಾಗಿ ಹರಡಲು ಕಾರಣವೇನು ?
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಟೇಷನ್ ಹೌಸ್ ಅಧಿಕಾರಿ ಕೃಷ್ಣ ಗೋಪಾಲ್ ಶರ್ಮಾ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದೆ. ಮೃತರು ಬಣ್ಣದ ವ್ಯಾಪಾರಿಯಾಗಿದ್ದರಿಂದ, ಕಾರಿನೊಳಗೆ ಬಣ್ಣದ ಡಬ್ಬಿಗಳು ಅಥವಾ ಇತರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರಾಸಾಯನಿಕ ವಸ್ತುಗಳು ಇದ್ದಿರಬಹುದು. ಇದು ಇಡೀ ವಾಹನಕ್ಕೆ ಬೆಂಕಿ ಅತಿ ವೇಗವಾಗಿ ಹರಡಲು ಪ್ರಮುಖ ಕಾರಣವಾಗಿರಬಹುದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಬೇರೆ ಯಾವುದಾದರೂ ತಾಂತ್ರಿಕ ದೋಷವಿದೆಯೇ ಎಂಬ ಬಗ್ಗೆ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.





