ಆರ್ಸಿಬಿ (Royal Challengers Bengaluru) ತಂಡದ ಸಹ-ಮಾಲಕಿ ಹಾಗೂ ಖ್ಯಾತ ಉದ್ಯಮಿ ಅನನ್ಯಾ ಬಿರ್ಲಾ ಅವರು ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಸ್ವತಃ ಮುಂದಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುವುದಕ್ಕಿಂತ ನೇರವಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿರುವ ಅವರ ನಡೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಈ ವರ್ಷ ಅಸ್ಸಾಂ ರಾಜ್ಯ ಭಾರೀ ಪ್ರವಾಹದ ಸಂಕಷ್ಟವನ್ನು ಎದುರಿಸುತ್ತಿದೆ. ನಿರಂತರ ಮಳೆಯಿಂದ ಹಲವು ಜಿಲ್ಲೆಗಳು ಜಲಾವೃತಗೊಂಡಿದ್ದು, ಲಕ್ಷಾಂತರ ಜನರು ತಮ್ಮ ಮನೆ, ಆಸ್ತಿ ಹಾಗೂ ಜೀವನೋಪಾಯ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಅನನ್ಯಾ ಬಿರ್ಲಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ತಮ್ಮ ಅನನ್ಯಾ ಬಿರ್ಲಾ ಫೌಂಡೇಶನ್ ಮೂಲಕ ಅವರು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಡಳಿತದೊಂದಿಗೆ ಕೈಜೋಡಿಸಿ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಕೇವಲ ಆರ್ಥಿಕ ನೆರವಿಗೆ ಸೀಮಿತವಾಗದೇ, ಜೋರ್ಹತ್, ಶಿವಸಾಗರ್ ಸೇರಿದಂತೆ ಹಲವು ಪ್ರವಾಹಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂತ್ರಸ್ತರ ಸಂಕಷ್ಟವನ್ನು ಆಲಿಸಿ, ಅಗತ್ಯ ನೆರವು ತಲುಪಿಸುವ ಕಾರ್ಯವನ್ನು ಅವರ ತಂಡ ಸಮರ್ಪಕವಾಗಿ ನಿರ್ವಹಿಸಿದೆ.
ಅನನ್ಯಾ ಬಿರ್ಲಾ ಅವರ ಈ ಸೇವಾ ಕಾರ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಮಕ್ಕಳೊಂದಿಗೆ ಬೆರೆತು ಮಾತನಾಡುವುದು, ಹಿರಿಯರನ್ನು ಸಮಾಧಾನಪಡಿಸುವುದು ಹಾಗೂ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ದೃಶ್ಯಗಳು ನೆಟ್ಟಿಗರ ಮನಸ್ಸು ಗೆದ್ದಿವೆ.
ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ ದೇಶದ ವಿವಿಧ ನಗರಗಳಿಂದ ಸಹಾಯ ಸಂಗ್ರಹಿಸುವ ಉದ್ದೇಶದಿಂದ ಬೆಂಗಳೂರು, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಜುಲೈ 28ರಿಂದ ಆಗಸ್ಟ್ 2ರವರೆಗೆ ವಿಶೇಷ ಪರಿಹಾರ ಸಾಮಗ್ರಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಸಾರ್ವಜನಿಕರು ನೀಡಿದ ನೆರವು ಸಾಮಗ್ರಿಗಳನ್ನು ಸಂಗ್ರಹಿಸಿ ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಫೌಂಡೇಶನ್ ಯಶಸ್ವಿಯಾಗಿ ನಡೆಸಿದೆ.
ಸಂತ್ರಸ್ತರಿಗೆ ಅಗತ್ಯವಿರುವ ಹಲವು ವಸ್ತುಗಳನ್ನು ವಿತರಿಸಲಾಗಿದೆ. ಇದರಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಒಣ ಆಹಾರ ಕಿಟ್ಗಳು, ಸೋಪು, ಟೂತ್ಪೇಸ್ಟ್, ಸ್ಯಾನಿಟರಿ ಪ್ಯಾಡ್ಗಳನ್ನು ಒಳಗೊಂಡ ಆರೋಗ್ಯ ಮತ್ತು ನೈರ್ಮಲ್ಯ ಕಿಟ್ಗಳು, ಸೊಳ್ಳೆ ಪರದೆಗಳು, ಟಾರ್ಪಾಲಿನ್ಗಳು ಹಾಗೂ ಮಕ್ಕಳಿಗಾಗಿ ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳು ಸೇರಿವೆ. ಸಂಕಷ್ಟದ ಸಮಯದಲ್ಲಿ ಈ ನೆರವು ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ.
ಅಸ್ಸಾಂ ಪ್ರವಾಸ ಮುಗಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಪಾಪರಾಜಿಗಳು ಅವರ ಈ ಕಾರ್ಯವನ್ನು ಶ್ಲಾಘಿಸಿದರು. ಅದಕ್ಕೆ ಅತ್ಯಂತ ಸರಳವಾಗಿ ಪ್ರತಿಕ್ರಿಯಿಸಿದ ಅನನ್ಯಾ ಬಿರ್ಲಾ, “ಇದು ನನ್ನ ಕರ್ತವ್ಯ” ಎಂದು ಹೇಳುವ ಮೂಲಕ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದರು. ಅವರ ಈ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅಸ್ಸಾಂ ಜನರ ಧೈರ್ಯ, ಸಹನೆ ಮತ್ತು ಸ್ಥಿತಿಸ್ಥಾಪಕತ್ವ ತಮ್ಮನ್ನು ತುಂಬಾ ಪ್ರೇರೇಪಿಸಿದೆ ಎಂದು ಅನನ್ಯಾ ಬಿರ್ಲಾ ತಿಳಿಸಿದ್ದಾರೆ. ಸಂಕಷ್ಟದ ನಡುವೆಯೂ ಬದುಕಿನ ಮೇಲಿನ ಅವರ ವಿಶ್ವಾಸ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.





