ಉಡುಪಿ, ನವೆಂಬರ್ 28: ಕರ್ನಾಟಕದ ಕರಾವಳಿಯಲ್ಲಿ ಇಂದು ನಮೋ ಅಬ್ಬರ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ಶ್ರೀ ಕೃಷ್ಣ ಮಠದ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದು, ಕೃಷ್ಣನೂರಿನಲ್ಲಿ ಲಕ್ಷಾಂತರ ಜನರ ಉತ್ಸಾಹದ ಹೆಚ್ಚಾಗಿದೆ.
ಬೆಳಗ್ಗೆ 10:25ಕ್ಕೆ ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಯು.ಟಿ. ಖಾದರ್, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಸೇರಿದಂತೆ ಹಲವು ಗಣ್ಯರು ಭಾರತೀಯ ಸೇನೆಯ ಗೌರವ ವಂದನೆಯೊಂದಿಗೆ ಪ್ರಧಾನಿಗೆ ಭರ್ಜರಿ ಸ್ವಾಗತ ಕೋರಿದರು.
ವಿಮಾನ ನಿಲ್ದಾಣದಿಂದಲೇ ಪ್ರಧಾನಿ ಮೋದಿ ವಾಯುಪಡೆಯ ಸೇನಾ ಹೆಲಿಕಾಪ್ಟರ್ನಲ್ಲಿ 11:15ಕ್ಕೆ ಉಡುಪಿಗೆ ಪ್ರಯಾಣ ಬೆಳೆಸಿದರು. 11:30ಕ್ಕೆ ಉಡುಪಿ ರಾಜಾಂಗಣ ಹೈಸ್ಕೂಲ್ ಮೈದಾನದ ಹೆಲಿಪ್ಯಾಡ್ಗೆ ಬಂದಿಳಿದ ಪ್ರಧಾನಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಪು ಶಾಸಕ ಕಿರಣ್ ಕುಮಾರ್ ಸೇರಿದಂತೆ ಪಕ್ಷದ ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಹೆಲಿಪ್ಯಾಡ್ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಭವ್ಯ ರೋಡ್ ಶೋ ಆರಂಭಿಸಿದರು. ಬನ್ನಂಜೆ ನಾರಾಯಣ ಗುರು ವೃತ್ತದಿಂದ ಕಲ್ಸಂಕ ಜಂಕ್ಷನ್ ವರೆಗೆ ಸುಮಾರು 4 ಕಿ.ಮೀ. ಉದ್ದದ ಮಾರ್ಗದಲ್ಲಿ ನಡೆಯುತ್ತಿರುವ ಈ ರೋಡ್ ಶೋಗೆ ಲಕ್ಷಾಂತರ ಜನರಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ “ಮೋದಿ… ಮೋದಿ…”, “ಜೈ ಶ್ರೀ ಕೃಷ್ಣ”, “ಜೈ ಶ್ರೀ ರಾಮ್” ಘೋಷಣೆಗಳು ಮೊಳಗುತ್ತಿವೆ. ಮಹಿಳೆಯರು ಆರತಿ ಬೆಳಗಿ, ಮಕ್ಕಳು ರಂಗೋಲಿ ಹಾಕಿ, ಯುವಕರು ಕೇಸರಿ ಶಾಲು ಹಾಕಿಕೊಂಡು ಪ್ರಧಾನಿಯನ್ನು ಸ್ವಾಗತಿಸುತ್ತಿದ್ದಾರೆ.
ವಿಶೇಷವೆಂದರೆ, ರೋಡ್ ಶೋ ಮಾರ್ಗವು ಉಡುಪಿಯ ಪ್ರಸಿದ್ಧ ಅಷ್ಟ ಮಠಗಳ ರಥಬೀದಿಯನ್ನು ದಾಟುತ್ತದೆ. ಈ ಐತಿಹಾಸಿಕ ರಥಬೀದಿಯಲ್ಲಿ ಪ್ರಧಾನಿ ಮೋದಿ ಅವರ ವಾಹನ ಸಾಗುತ್ತಿರುವ ದೃಶ್ಯ ಅಪೂರ್ವವಾಗಿದೆ. ರಸ್ತೆಯುದ್ದಕ್ಕೂ ಸಾವಿರಾರು ಪೊಲೀಸ್ ಸಿಬ್ಬಂದಿ, ಎಸ್ಪಿಜಿ ಕಮಾಂಡೋಗಳು, ಡ್ರೋನ್ ನಿಗಾ ಸೇರಿದಂತೆ ಬಿಗಿ ಭದ್ರತೆ ವಹಿಸಲಾಗಿದೆ.
ರೋಡ್ ಶೋ ಬಳಿಕ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ, 2 ಕೋಟಿ ವೆಚ್ಚದ ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ ಮಾಡಲಿದ್ದಾರೆ. ಇದರೊಟ್ಟಿಗೆ ಚಿನ್ನದ ಕವಚದ ಕನಕನ ಕಿಂಡಿ ಲೋಕಾರ್ಪಣೆಯೂ ಮಾಡಿ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ.
ನಂತರ ಮಧ್ಯಾಹ್ನ 1 ಗಂಟೆಗೆ ಐತಿಹಾಸಿಕ “ಲಕ್ಷ ಕಂಠ ಭಗವದ್ಗೀತಾ ಪಾರಾಯಣ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಒಟ್ಟಾಗಿ ಗೀತಾ ಪಠಿಸುತ್ತಿರುವ ಈ ಅದ್ಭುತ ಕ್ಷಣಕ್ಕೆ ಪ್ರಧಾನಿ ಸಾಕ್ಷಿಯಾಗಲಿದ್ದಾರೆ. ಸ್ವತಃ ಮೋದಿ ಅವರು ಗೀತೆಯ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಪೇಜಾವರ, ಆದಿಮರಳು ಸೇರಿದಂತೆ ಎಲ್ಲ ಅಷ್ಟ ಮಠಾಧೀಶರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.





