ನವೆಂಬರ್ ೧ ಕನ್ನಡಿಗರಿಗೆ ಸಡಗರ, ಸಂಭ್ರಮ ಮತ್ತು ಸ್ವಾಭಿಮಾನದ ದಿನ. ಭಾರತವು ಗಣರಾಜ್ಯವಾದ ನಂತರ ಭಾಷಾವಾರು ರಾಜ್ಯಗಳ ರಚನೆಗೆ ಮಾರ್ಗ ಮಾಡಿಕೊಡಲಾಯಿತು.1956 ರ ನವೆಂಬರ್ 1 ರಂದು ದಕ್ಷಿಣ ಭಾರತದಲ್ಲಿದ್ದ ಕನ್ನಡಭಾಷಿ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚನೆಯಾಯಿತು. ನಂತರ 1972ರ ನವೆಂಬರ್ 1ರಂದು, ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನೀಡಿ, ಕನ್ನಡಿಗರ ದೀರ್ಘಕಾಲದ ಕನಸನ್ನು ನನಸಾಗಿಸಿದರು.
ಕರ್ನಾಟಕವು ರಚನೆಯಾದ ನಂತರ ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ೧೯೭೩ರಲ್ಲಿ ಬಂಡೀಪುರ ಹುಲಿ ಯೋಜನೆ ಆರಂಭವಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ಹೊಸ ಅಧ್ಯಾಯ ಬರೆಯಿತು. ಐಐಎಂಬಿ (IIM-B) ಮತ್ತು ಜಯದೇವ ಆಸ್ಪತ್ರೆ ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖ ಸಾಧನೆಗಳಾಗಿವೆ.
ಕೃಷಿ ಮತ್ತು ಸಹಕಾರಿ ಚಳುವಳಿಯಲ್ಲಿ ಕೆಎಂಎಫ್ (KMF) ರಾಜ್ಯದಲ್ಲಿ ಕ್ಷೀರ ಕ್ರಾಂತಿಯನ್ನುಂಟು ಮಾಡಿದೆ. ಭೂಸುಧಾರಣೆ ಕಾಯ್ದೆ ಮತ್ತು ಹಾವನೂರು ವರದಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ದಿಶೆಯಲ್ಲಿ ಮಹತ್ವದ ಕ್ರಮಗಳಾಗಿವೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ನಡೆದ ಗೋಕಾಕ್ ಚಳವಳಿ ಮತ್ತು ದಲಿತ ಸಂಘರ್ಷ ಸಮಿತಿಯ ಹೋರಾಟಗಳು ರಾಜ್ಯದ ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ವಿಶ್ವ ಕನ್ನಡ ಸಮ್ಮೇಳನ ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಲು ಸಹಾಯಕವಾಗಿದೆ.
ಸಿನಿಮಾ ರಂಗದಲ್ಲಿ, ಕೆಜಿಎಫ್ ಮತ್ತು ಕಾಂತಾರಾ ಚಿತ್ರಗಳು ಜಾಗತಿಕ ಮನ್ನಣೆ ಗಳಿಸಿವೆ. 2008 ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ದರ್ಜೆ ದೊರಕಿದ್ದು ಮತ್ತೊಂದು ಹೆಮ್ಮೆಯ ಘಟನೆ. 12ನೇ ಶತಮಾನದ ಸಮಾಜಸುಧಾರಕ ಬಸವಣ್ಣನವರು ಕರ್ನಾಟಕದ ‘ಸಾಂಸ್ಕೃತಿಕ ರಾಯಭಾರಿ’ ಹೆಸರನ್ನು 2024 ರಲ್ಲಿ ಪಡೆದುಕೊಂಡರು.
ಕರ್ನಾಟಕ ರಾಜ್ಯೋತ್ಸವವು ನಮ್ಮ ಐಕ್ಯತೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ಆಚರಿಸುವ ದಿನ. ಈ ದಿನವು ನಮಗೆಲ್ಲರಿಗೂ ಹೆಮ್ಮೆ ತರುವ ಸಾಧನೆಗಳನ್ನು ನೆನಪಿಸುತ್ತದೆ ಮತ್ತು ಭವಿಷ್ಯದ ಕಡೆಗೆ ಸಾಗಲು ಪ್ರೇರೇಪಿಸುತ್ತದೆ.





