ಬೆಂಗಳೂರು: ಕನ್ನಡ ಚಿತ್ರರಂಗದ ಅಪೂರ್ವ ಕೃತಿಗಳಲ್ಲಿ ಒಂದಾದ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರವು ಬಿಡುಗಡೆಯಾಗಿ ಇಂದಿಗೆ (ಸೆಪ್ಟೆಂಬರ್ 6, 2025) 30 ವರ್ಷಗಳು ಕಳೆದಿವೆ. 1995ರಲ್ಲಿ ತೆರೆಕಂಡ ಈ ಚಿತ್ರವು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ. ಈ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಜನಪ್ರಿಯವಾಗಿದ್ದು, ಕರ್ನಾಟಕದ ದೇವಾಲಯಗಳಲ್ಲಿ ಮತ್ತು ಮಠಗಳಲ್ಲಿ ನೀಡು ಶಿವ ನೀಡದಿರು ಶಿವ ಹಾಡು ಭಕ್ತಿಯ ಸಂಕೇತವಾಗಿ ಗುಂಗುತ್ತಿದೆ.
ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳನ್ನು ತಂದಿತು. ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಈ ಚಿತ್ರದ ಗಾಯನಕ್ಕಾಗಿ ಮೊದಲ ಬಾರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು, ಜೊತೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೂ ಈ ಚಿತ್ರದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿತು. ಇದರ ಜೊತೆಗೆ, ಚಿತ್ರದ ನಿರ್ದೇಶಕ ಎಂ.ಎಸ್. ರಾಜಶೇಖರ್ ಅವರಿಗೆ ಅಳಿಲು ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಲಭಿಸಿತು.
ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಯಶಸ್ಸಿನ ಹಿಂದೆ ಹಂಸಲೇಖ ಅವರ ಸಂಗೀತದ ಮಾಂತ್ರಿಕತೆ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದ ಹಾಡುಗಳು ಕನ್ನಡಿಗರಿಗೆ ಶಾಶ್ವತ ಸಂಗೀತ ಕೊಡುಗೆಯಾಗಿದ್ದು, ಇಂದಿಗೂ ಆ ಹಾಡುಗಳು ಜನರ ಮನದಲ್ಲಿ ತಾಜಾವಾಗಿವೆ. ಚಿತ್ರದ ನಿರ್ಮಾಪಕಿ ಪದ್ಮಶ್ರೀ ಚಿಂದೊಡಿ ಲೀಲಾ, ಲೋಕೇಶ್, ಗಿರೀಶ್ ಕಾರ್ನಾಡ್, ಶ್ರೀನಾಥ್ ಸೇರಿದಂತೆ ತಾರಾಬಳಗ, ಮತ್ತು ತಂತ್ರಜ್ಞರ ಕೊಡುಗೆ ಈ ಚಿತ್ರವನ್ನು ಅಮರಗೀತೆಯಾಗಿಸಿದೆ.
30ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ, ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಹಂಸಲೇಖ ಅವರಿಗೆ ಗೌರವ ಸಲ್ಲಿಸಲಾಗಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ಕನ್ನಡಿಗರೆಲ್ಲರಿಗೂ, ಚಿತ್ರರಂಗದ ಕಲಾವಿದರಿಗೆ, ಮತ್ತು ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಿರ್ದೇಶಕ ಚಿಂದೋಡಿ ಬಂಗಾರೇಶ್ ತಿಳಿಸಿದ್ದಾರೆ. ಗಾನಯೋಗಿ ಕನ್ನಡ ಚಿತ್ರರಂಗದ ಒಂದು ಶಾಶ್ವತ ಮೈಲಿಗಲ್ಲಾಗಿ ಉಳಿದಿದೆ.





