ನಾದಬ್ರಹ್ಮ ಹಂಸಲೇಖ 37 ವರ್ಷಗಳ ಕನಸು ಕೊನೆಗೂ ನನಸಾಗ್ತಿದೆ. ಡೈರೆಕ್ಟರ್ ಆಗೋಕೆ ಬಂದವರು ಮ್ಯೂಸಿಕ್ ಕಂಪೋಸರ್ ಆದರು. ಒಂದಲ್ಲ ಎರಡಲ್ಲ ಮೂರು ಬಾರಿ ಡೈರೆಕ್ಟರ್ ಆಗಲು ಹೋಗಿ ವಿಫಲವಾಗಿದ್ರು. ಇದೀಗ ನೇರವಾಗಿ ಸಿಎಂ ಮನೆಯಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮುಹೂರ್ತ ಇಟ್ಟಿದ್ದಾರೆ.
ನಾದಬ್ರಹ್ಮ ಹಂಸಲೇಖ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ. ಸಂಗೀತದ ಮಹಾ ಸಮುದ್ರ. ರಾಗಗಳ ರಾಜ. ಮ್ಯೂಸಿಕ್ ಯೂನಿವರ್ಸಿಟಿ. 37 ವರ್ಷಗಳ ಕರಿಯರ್ನಲ್ಲಿ ಸಾವಿರಾರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನೂರಾರು ಹಾಡುಗಳಿಗೆ ಸಾಹಿತ್ಯವೂ ರಚಿಸಿದ್ದಾರೆ. ಒಂದಷ್ಟು ಸಿನಿಮಾಗಳಿಗೆ ಬರವಣಿಗೆ ಕೂಡ ಮಾಡಿದ್ದಾರೆ. ಆದ್ರೆ ಇಲ್ಲಿಯವರೆಗೂ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ.
ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಬರೋಬ್ಬರಿ 4 ದಶಕಗಳ ನಂತ್ರ ತಮ್ಮ ಚೊಚ್ಚಲ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಈ ಮ್ಯೂಸಿಕ್ ಮಾಂತ್ರಿಕ ಹಂಸಲೇಖ. ಮಹಾಗುರುಗಳಾಗಿ ಚಿತ್ರರಂಗದಲ್ಲಿ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗಿರೋ ಇವರು ಸ್ಫೂರ್ತಿಯ ಚಿಲುಮೆಯೂ ಹೌದು. ಇವರಲ್ಲಿ ತಾನು ಡೈರೆಕ್ಟರ್ ಆಗಲಿಲ್ಲ ಅನ್ನೋ ಕೊರಗಿತ್ತು. ಅದು ಸಾಕಾರವಾಗುವ ದಿನ ಬಂದೇ ಬಿಟ್ಟಿದೆ. ಇದೇ ಜೂನ್ 23ರ ಬೆಳಗ್ಗೆ ಸೋಮವಾರದಂದು ತಮ್ಮ ಮೊದಲ ನಿರ್ದೇಶನದ ಓಕೆ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ.
ಸಿಎಂ ಸಿದ್ದರಾಮಯ್ಯಮನವರ ಕೃಷ್ಣ ನಿವಾಸದಲ್ಲೇ ಮುಹೂರ್ತ ಪೂಜೆ ಆಯೋಜಿಸಿರುವುದು ಇಂಟರೆಸ್ಟಿಂಗ್. ಸಿಎಂ ಸಿದ್ದು ಚಿತ್ರಕ್ಕೆ ಚಾಲನೆ ನೀಡಲಿದ್ದು, ಈ ಬಾರಿ ಶತಾಯ ಗತಾಯ ಸಿನಿಮಾ ಡೈರೆಕ್ಟ್ ಮಾಡಿ, ರಿಲೀಸ್ ಮಾಡೋ ಮೂಲಕ ಚಿತ್ರ ನಿರ್ದೇಶಕನ ಪಟ್ಟ ಧರಿಸಲೇಬೇಕು ಅಂತ ಮನಸ್ಸು ಮಾಡಿದ್ದಾರೆ ಹಂಸಲೇಖ. ಯಾಕಂದ್ರೆ ಹಂಸಲೇಖ ಸಂಗೀತ ಸಂಯೋಜಕರಾಗೋಕೆ ಮುನ್ನ ಡೈರೆಕ್ಟರ್ ಆಗುವ ಕನಸು ಕಂಡಿದ್ರು. ಡೈರೆಕ್ಟರ್ ಆಗ್ಬೇಕು ಅಂತಲೇ ಚಿತ್ರರಂಗಕ್ಕೆ ಬಂದಿದ್ರು. ಒಂದಲ್ಲ ಎರಡಲ್ಲ ಮೂರು ಬಾರಿ ಆ ಕನಸು ವಿಘ್ನಗೊಂಡಿದೆ.
ರಾಹುಚಂದ್ರ ಅನ್ನೋ ಸಿನಿಮಾಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ರು. ನಂತರ ಸುಗ್ಗಿ ಅನ್ನೋ ಸಿನಿಮಾನ ಅನೌನ್ಸ್ ಮಡಿದ್ರು. ಅದಾದ ಬಳಿಕ ಶಾಕುಂತಲೆ ಚಿತ್ರ ಮಾಡೋದಾಗಿ ಘೋಷಿಸಿದ್ರು. ಆದ್ರೆ ಈ ಮೂರೂ ಸಿನಿಮಾಗಳು ಬೆಳ್ಳಿತೆರೆಗೆ ಬರಲೇ ಇಲ್ಲ.
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೂಡಿ ಹಂಸಲೇಖ ಗ್ರೇಟ್ ಕಾಂಬೋ ಆಗಿ ಕಮಾಲ್ ಮಾಡಿದ್ರು. ಸಂಗೀತ ಲೋಕದಲ್ಲಿ ಪ್ರೇಮಲೋಕ ಸೃಷ್ಠಿಸಿದ್ರು. ಆದ್ರೂ ಅವ್ರಲ್ಲಿರೋ ನಿರ್ದೇಶನದ ಹಸಿವು ಹಾಗೇ ಇದೆ. ಅದೀಗ ನನಸಾಗ್ತಿರೋದು ಅವ್ರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.