ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ನಾಗೇಶ ರೂಗಿ (50).
ನಾಗೇಶ ರೂಗಿ ಅವರು ಕಲಬುರಗಿ ನಗರದ ಹಿಂದೂಜಾ ಹಣಕಾಸು ಸಂಸ್ಥೆಯಿಂದ ಒಟ್ಟು 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 3.5 ಲಕ್ಷ ರೂಪಾಯಿಯನ್ನು ಅವರು ಈಗಾಗಲೇ ಮರುಪಾವತಿ ಮಾಡಿದ್ದರು. ಆದರೆ, ಉಳಿದ 1.5 ಲಕ್ಷ ರೂಪಾಯಿ ಸಾಲದ ಹಣವನ್ನು ಕಟ್ಟುವಂತೆ ಹಿಂದೂಜಾ ಹಣಕಾಸು ಸಂಸ್ಥೆಯ ಸಿಬ್ಬಂದಿ ಯಾತನೂರ ಗ್ರಾಮದ ಅವರ ಮನೆಗೆ ಬಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಇದರ ಜೊತೆಗೆ, ಸಿಬ್ಬಂದಿ ಮನೆಯ ಗೋಡೆಯ ಮೇಲೆ “ಈ ಮನೆಯನ್ನು ಹಿಂದೂಜಾ ಫೈನಾನ್ಸ್ಗೆ ಅಡಮಾನ ಮಾಡಲಾಗಿದೆ, ಈ ಮನೆ ಮಾರಾಟಕ್ಕೆ ಇದೆ” ಎಂದು ಬರೆದಿದ್ದರು. ಈ ಕಿರುಕುಳಕ್ಕೆ ಬೇಸತ್ತ ನಾಗೇಶ ರೂಗಿ, ಮನೆಯಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆಯ ಬಗ್ಗೆ ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿಂದೂಜಾ ಹಣಕಾಸು ಸಂಸ್ಥೆಯ ಸಿಬ್ಬಂದಿಯ ಕಿರುಕುಳವೇ ಈ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.





