ಪ್ರತೀ ದಿನ ಒಂದಿಲ್ಲೊಂದು ಕಾರಣಕ್ಕೆ ರಾಕಿಭಾಯ್ ಯಶ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಒಂದ್ಕಡೆ ಟಾಕ್ಸಿಕ್ ಮತ್ತೊಂದ್ಕಡೆ ರಾಮಾಯಣ. ಸದ್ಯ ಬಿಟೌನ್ ರಾಮಾಯಣದಲ್ಲಿ ರಾಕಿಂಗ್ ರಾವಣನ ಕೋಟೆಗೆ ಇಂಟರ್ ನ್ಯಾಷನಲ್ ಬಾಹುಬಲಿಯೊಬ್ಬ ಎಂಟ್ರಿ ಕೊಟ್ಟಿದ್ದಾನೆ.
ಹಿಂದೂ ಪವಿತ್ರ ಗ್ರಂಥ ರಾಮಾಯಣದ ಮೇಲೆ ಎಷ್ಟೇ ಸಿನಿಮಾ, ಸೀರೀಸ್ಗಳು ಬಂದರೂ ಸಹ ಇಂದಿಗೂ ಕೌತುಕತೆಯ ಆಗರ ಈ ರಾಮಾಯಣ. ಅದೇ ಕಾರಣದಿಂದ ಪ್ರತಿ ಜನರೇಷನ್ ಕೂಡ ಬೇರೆ ಬೇರೆ ವರ್ಷನ್ಗಳಲ್ಲಿ ರಾಮಾಯಣವನ್ನು ತೆರೆಗೆ ತರೋದ್ರಲ್ಲಿ ದಶಕಗಳಿಂದಲೂ ಯಶಸ್ವಿಯಾಗ್ತಿದೆ. ಇತ್ತೀಚೆಗೆ ಡಾರ್ಲಿಂಗ್ ಪ್ರಭಾಸ್ರ ಆದಿಪುರುಷ್ ತೆರೆ ಕಂಡಿತ್ತು. ಅದರ ಬೆನ್ನಲ್ಲೀಗ ಬಾಲಿವುಡ್ ಅಂಗಳದಿಂದ ಮತ್ತೊಂದು ರಾಮಾಯಣ ಬರ್ತಿದೆ.
ಯೆಸ್.. ಭಾರತೀಯ ಚಿತ್ರರಂಗದಲ್ಲಿ ತಯಾರಾಗ್ತಿರೋ ಹೊಚ್ಚ ಹೊಸ ರಾಮಾಯಣದಲ್ಲಿ ರಣ್ಬೀರ್ ಕಪೂರ್ ರಾಮನಾದ್ರೆ, ಸೀತಾದೇವಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಇನ್ನು ಲಂಕೇಶ್ವರನಾಗಿ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಮಿಂಚಲಿದ್ದಾರೆ. ದಂಗಲ್ ಖ್ಯಾತಿಯ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿರೋ ಈ ರಾಮಾಯಣ ಒಂದಲ್ಲ ಎರಡೆರಡು ಭಾಗಗಳಲ್ಲಿ ತೆರೆಗೆ ಬರಲಿದೆ.
2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ ಎರಡನೇ ಭಾಗದ ರಾಮಾಯಣ ಪ್ರೇಕ್ಷಕರ ಮುಂದೆ ಬರಲಿದೆ. ಇವೆಲ್ಲವೂ ಗೊತ್ತಿರೋ ವಿಷಯಗಳೇ ಆದ್ರೂ, ಈ ರಾಮಾಯಣಕ್ಕೆ ನಮ್ಮ ಯಶ್ ಬರೀ ಕಲಾವಿದರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಕೆಜಿಎಫ್ನಲ್ಲಿ ರಾಕಿಭಾಯ್ ಸ್ಟೈಲು, ಮ್ಯಾನರಿಸಂ ಕಂಡಿದ್ದ ಚಿತ್ರಪ್ರೇಮಿಗಳಿಗೆ ಇವ್ರ ಪರ್ಸನಾಲಿಟಿ, ಹೈಟು, ವೆಯ್ಟು ಎಲ್ಲವೂ ಪರ್ಫೆಕ್ಟ್ ಆಗಿ ರಾವಣನ ರೋಲ್ಗೆ ಹೇಳಿ ಮಾಡಿಸಿದಂತಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿರೋ ರಾಕಿಭಾಯ್, ಡಿಫರೆಂಟ್ ಹೇರ್ಸ್ಟೈಲ್ ಮಾಡಿಸಿ, ಮತ್ತದೇ ಉದ್ದನೆಯ ಗಡ್ಡದೊಂದಿಗೆ ಮಿಂಚುತ್ತಿದ್ದಾರೆ. ರಾವಣನ ಪಾತ್ರಕ್ಕೂ ಉದ್ದನೆಯ ಗಡ್ಡ ಬೇಕಿರೋದ್ರಿಂದ ಆ ಗಡ್ಡ ಹಾಗೆಯೇ ಮುಂದುವರೆಯಲಿದೆ. ಇನ್ನು ಯಶ್ ಮಾಚೋಮೆನ್ ಆಗಿ ಕಾಣಲಿದ್ದು, ಕೆಜಿ ಗಟ್ಟಲೆ ಕಾಸ್ಟ್ಯೂಮ್ಸ್ ಹಾಗೂ ಆಭರಣಗಳನ್ನ ಹೊರುವಂತಹ ಆಜಾನುಬಾಹುವಾಗಿ ಯಶ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಫಿಟ್ ಅಂಡ್ ಫೈನ್ ಆಗಿದ್ದಾರೆ.
ವಿಶೇಷ ಅಂದ್ರೆ ರಾಕಿಭಾಯ್ ಯಶ್ ಜೊತೆ ಒಬ್ಬ ಆಜಾನುಬಾಹು ಇದ್ದಾರೆ. ಅವ್ರೇ ಅವರ ಅಂಗರಕ್ಷಕ. ರಾಮನ ಜೊತೆ ಹನುಮನಿದ್ದಂತೆ ಸದಾ ಅವರೊಂದಿಗಿರೋ ಈ ವ್ಯಕ್ತಿ ಬೇರೆಯವರನ್ನ ಹತ್ತಿರಕ್ಕೂ ಬಿಡಲ್ಲ. ಏರ್ಪೋರ್ಟ್, ಔಟ್ಡೋರ್ ಪ್ರೋಗ್ರಾಮ್ಸ್, ಶೂಟಿಂಗ್ ವೇಳೆ ಫ್ಯಾನ್ಸ್ ಫೋಟೋಗಳಿಗೆ ಮುಗಿ ಬಿದ್ದಾಗ ಯಶ್ರನ್ನ ಪ್ರೊಟೆಕ್ಟ್ ಮಾಡ್ತಿರೋದೇ ಈ ದೈತ್ಯ ಪ್ರತಿಭೆ.
ಇದೀಗ ಈ ಗನ್ಮ್ಯಾನ್ ಹೊರತಾಗಿ ಮತ್ತೊಬ್ಬ ಆಜಾನುಬಾಹು ಯಶ್ ಸಂಗಡದಲ್ಲಿದ್ದಾರೆ. ಅವರೇ ಈ ಇಂಟರ್ನ್ಯಾಷನಲ್ ಬಾಡಿ ಬ್ಯುಲ್ಡರ್, ವ್ರೆಸ್ಲರ್ ವಿನ್ಸ್ಟನ್. ಹೌದು.. ಅರೇ ಆಲ್ರೆಡಿ ಒಬ್ಬ ಗನ್ಮ್ಯಾನ್ ಇದ್ದಾಗ ಈತನ್ಯಾಕೆ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಇವರು ಯಶ್ ಜೊತೆ ಪರ್ಮನೆಂಟ್ ಆಗಿ ಇರೋಕೆ ಬಂದಿರೋ ಬಾಹುಬಲಿ ಅಲ್ಲ. ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸ್ತಿರೋ ಯಶ್ಗೆ ಡ್ಯೂಪ್ ಹಾಕಲು ಬಂದಿರೋ ಇಂಗ್ಲೆಂಡ್ ಮೂಲದ ಇಂಟರ್ನ್ಯಾಷನಲ್ ಟ್ಯಾಲೆಂಟ್.
ಟಾಕ್ಸಿಕ್ ಸಿನಿಮಾಗಾಗಿ ಈಗಾಗ್ಲೇ ಸಾಕಷ್ಟು ಹಾಲಿವುಡ್ ತಂತ್ರಜ್ಞರು ಹಾಗೂ ಕಲಾವಿದರ ದಂಡು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಾಗಿದೆ. ಇನ್ನು ರಾಮಾಯಣದಲ್ಲೂ ಅಂಥದ್ದೇ ಒಂದು ಬೆಳವಣಿಗೆ ಆಗ್ತಿದ್ದು, ರಣ್ಬೀರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಈ ವಿನ್ಸ್ಟನ್ ಕೂಡ ಸೇರಿಕೊಂಡಿದ್ದಾರೆ. ರಾಕಿಭಾಯ್ ಹೈಟು, ವೆಯ್ಟು ಇರೋ ಈ ವಿನ್ಸ್ಟನ್, ಅವ್ರ ನೆರಳಂತೆ ಸಾಕಷ್ಟು ದೃಶ್ಯಗಳಲ್ಲಿ ಡೂಪ್ ಹಾಕಲು ಸಹಕಾರಿ ಆಗಲಿದ್ದಾರೆ ಎನ್ನಲಾಗ್ತಿದೆ. ಅದೇನೇ ಇರಲಿ, ನಮ್ಮ ಕನ್ನಡಿಗನಿಂದ ಇಂತಹ ವಿನೂತನ ಎಕ್ಸ್ಪೆರಿಮೆಂಟ್ಸ್ ಆಗ್ತಿರೋದು ಪ್ರತಿಯೊಬ್ಬ ಕನ್ನಡಿಗನೂ ಖುಷಿ ಪಡುವಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್