ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಯೋಜಿಸಿರುವ ಗ್ರಾಹಕರು ಮುಂಚಿತವಾಗಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಹಬ್ಬಗಳ ಸರಣಿ, ವಾರಾಂತ್ಯದ ಸಾಮಾನ್ಯ ರಜೆಗಳು ಹಾಗೂ ಪ್ರಾದೇಶಿಕ ಆಚರಣೆಗಳ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ ಆಗಸ್ಟ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸುವ ಅಧಿಕೃತ ರಜಾ ಕ್ಯಾಲೆಂಡರ್ಗೆ ಅನುಗುಣವಾಗಿ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳು ಹಾಗೂ ರಾಷ್ಟ್ರೀಯ ಆಚರಣೆಗಳ ಹಿನ್ನೆಲೆ ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗುತ್ತದೆ. ಹೀಗಾಗಿ ಚೆಕ್ ಠೇವಣಿ, ಡಿಮ್ಯಾಂಡ್ ಡ್ರಾಫ್ಟ್ (DD), ದಾಖಲೆಗಳ ಪರಿಶೀಲನೆ, ಸಾಲ ಸಂಬಂಧಿತ ಕೆಲಸಗಳು ಹಾಗೂ ಹೆಚ್ಚಿನ ಮೊತ್ತದ ನಗದು ವ್ಯವಹಾರಗಳನ್ನು ನಡೆಸಲು ಬಯಸುವ ಗ್ರಾಹಕರು ತಮ್ಮ ಶಾಖೆಯ ರಜಾ ವೇಳಾಪಟ್ಟಿಯನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಒಳಿತು.
ಆಗಸ್ಟ್ ತಿಂಗಳಲ್ಲಿ ಐದು ಭಾನುವಾರಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿ ಒಟ್ಟು ಏಳು ದಿನಗಳು ದೇಶಾದ್ಯಂತ ಸಾಪ್ತಾಹಿಕ ರಜೆಯಾಗಿರಲಿದೆ. ಇದಲ್ಲದೆ ವಿವಿಧ ರಾಜ್ಯಗಳ ಪ್ರಾದೇಶಿಕ ಹಬ್ಬಗಳು ಮತ್ತು ರಾಷ್ಟ್ರೀಯ ದಿನಾಚರಣೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಏಳು ದಿನಗಳ ಕಾಲ ಕೆಲವು ನಗರಗಳಲ್ಲಿ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಯುಪಿಐ (UPI), ಗೂಗಲ್ ಪೇ, ಫೋನ್ಪೇ, ಪೇಟಿಎಂ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳು ಎಂದಿನಂತೆ 24 ಗಂಟೆಗಳ ಕಾಲ ಲಭ್ಯವಿರುತ್ತವೆ. ಹಣ ವರ್ಗಾವಣೆ, ಬಿಲ್ ಪಾವತಿ, ಬ್ಯಾಲೆನ್ಸ್ ಪರಿಶೀಲನೆ, ಎಟಿಎಂ ಮೂಲಕ ಹಣ ಹಿಂಪಡೆಯುವುದು ಸೇರಿದಂತೆ ಬಹುತೇಕ ಡಿಜಿಟಲ್ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಲಿವೆ.
ಆಗಸ್ಟ್ ತಿಂಗಳ ಸಾಪ್ತಾಹಿಕ ಬ್ಯಾಂಕ್ ರಜೆಗಳು
- ಆಗಸ್ಟ್ 2 – ಭಾನುವಾರ
- ಆಗಸ್ಟ್ 8 – ಎರಡನೇ ಶನಿವಾರ
- ಆಗಸ್ಟ್ 9 – ಭಾನುವಾರ
- ಆಗಸ್ಟ್ 16 – ಭಾನುವಾರ
- ಆಗಸ್ಟ್ 22 – ನಾಲ್ಕನೇ ಶನಿವಾರ
- ಆಗಸ್ಟ್ 23 – ಭಾನುವಾರ
- ಆಗಸ್ಟ್ 30 – ಭಾನುವಾರ
ಹಬ್ಬಗಳ ಹಿನ್ನೆಲೆ ಬ್ಯಾಂಕ್ ರಜೆಗಳು
- ಆಗಸ್ಟ್ 4 (ಮಂಗಳವಾರ): ಕೆರ್ ಪೂಜೆ – ಅಗರ್ತಲಾ (ತ್ರಿಪುರಾ)
- ಆಗಸ್ಟ್ 13 (ಗುರುವಾರ): ಪೇಟ್ರಿಯಾಟ್ಸ್ ಡೇ – ಇಂಫಾಲ್ (ಮಣಿಪುರ)
- ಆಗಸ್ಟ್ 15 (ಶನಿವಾರ): ಸ್ವಾತಂತ್ರ್ಯ ದಿನಾಚರಣೆ – ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ರಜೆ
- ಆಗಸ್ಟ್ 19 (ಬುಧವಾರ): ಮಹಾರಾಜ ಬೀರ್ ಬಿಕ್ರಮ್ ಜಯಂತಿ – ಅಗರ್ತಲಾ
- ಆಗಸ್ಟ್ 25 (ಮಂಗಳವಾರ): ಮೊದಲ ಓಣಂ ಹಾಗೂ ಮಿಲಾದ್-ಎ-ಶರೀಫ್ – ಕೊಚ್ಚಿ, ತಿರುವನಂತಪುರಂ ಹಾಗೂ ವಿಜಯವಾಡ
- ಆಗಸ್ಟ್ 26 (ಬುಧವಾರ): ಈದ್-ಎ-ಮಿಲಾದ್ ಹಾಗೂ ತಿರುವೋಣಂ – ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳು
- ಆಗಸ್ಟ್ 28 (ಶುಕ್ರವಾರ): ರಕ್ಷಾಬಂಧನ ಹಾಗೂ ಶ್ರೀ ನಾರಾಯಣ ಗುರು ಜಯಂತಿ – ಅಹಮದಾಬಾದ್, ಭೋಪಾಲ್, ಜೈಪುರ, ಲಖನೌ ಹಾಗೂ ಕೇರಳದ ಪ್ರಮುಖ ನಗರಗಳು





