ಪುರಿ (ಒಡಿಶಾ), (ಜುಲೈ 16): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ-2026 ವೇಳೆ ಭಾರೀ ಜನಸಂದಣಿ ಉಂಟಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂಬ ವರದಿಗಳು ತಿಳಿಸಿದೆ.
ಇಂದು ಗುರುವಾರ ಪುರಿಯ ಬಡಾ ದಂಡ (ಗ್ರ್ಯಾಂಡ್ ರೋಡ್) ಪ್ರದೇಶದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಜನದಟ್ಟಣೆ ಹೆಚ್ಚಾಗಿ ಕೆಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ವಿಶೇಷ ರಕ್ಷಣಾ ಘಟಕ (SRU) ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಅಸ್ವಸ್ಥಗೊಂಡ ಭಕ್ತರನ್ನು ಜನಸಂದಣಿ ಪ್ರದೇಶದಿಂದ ಸುರಕ್ಷಿತವಾಗಿ ಹೊರತೆಗೆದು ಪುರಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಹಾಗೂ ಇತರ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಲಾಯಿತು. ಮೂಲಗಳ ಪ್ರಕಾರ, ಉಸಿರುಗಟ್ಟುವಿಕೆಯಿಂದ ಪ್ರಜ್ಞಾಹೀನರಾಗಿದ್ದ ಒಬ್ಬ ಭಕ್ತರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಯಾವುದೇ ಅನಾಹುತ ಮರುಕಳಿಸದಂತೆ ಗ್ರ್ಯಾಂಡ್ ರಸ್ತೆಯಲ್ಲಿ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತುರ್ತು ವೈದ್ಯಕೀಯ ತಂಡಗಳನ್ನು ಕೂಡ ಸಜ್ಜುಗೊಳಿಸಲಾಗಿದೆ.
ಗುಂಡಿಚಾ ದೇವಸ್ಥಾನದ ಕಡೆಗೆ ವಾರ್ಷಿಕ ಪ್ರಯಾಣದ ಸಮಯದಲ್ಲಿ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ಅವರ ದೈವಿಕ ವಾರ್ಷಿಕ ವಾಸ್ತವ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತ ಭಕ್ತನ ವಿವರಗಳು ಮತ್ತು ಗುರುತು ಮತ್ತು ಘಟನೆಯ ನಿಖರವಾದ ಕಾರಣದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ-2026ಗೆ ಇಂದು (ಜುಲೈ 16) ಒಡಿಶಾದ ಪುರಿಯಲ್ಲಿ ಅತ್ಯಂತ ಭಕ್ತಿಭಾವ ಮತ್ತು ವೈಭವದೊಂದಿಗೆ ಚಾಲನೆ ದೊರೆತಿದೆ. ದೇಶ-ವಿದೇಶಗಳಿಂದ ಆಗಮಿಸಿರುವ ಲಕ್ಷಾಂತರ ಭಕ್ತರು “ಜೈ ಜಗನ್ನಾಥ” ಘೋಷಣೆಗಳ ನಡುವೆ ಈ ಐತಿಹಾಸಿಕ ಉತ್ಸವದಲ್ಲಿ ಭಾಗವಹಿಸಿದ್ದು, ಇಡೀ ಪುರಿ ನಗರ ಧಾರ್ಮಿಕ ಸಂಭ್ರಮದಲ್ಲಿ ತೇಲುತ್ತಿದೆ.
ಜುಲೈ 16ರಿಂದ ಜುಲೈ 24ರವರೆಗೆ ನಡೆಯಲಿರುವ ಈ ಒಂಬತ್ತು ದಿನಗಳ ಉತ್ಸವವು ಹಿಂದೂ ಧರ್ಮದ ಅತ್ಯಂತ ಮಹತ್ವದ ಆಚರಣೆಗಳಲ್ಲಿ ಒಂದಾಗಿದೆ. ಸಂಪ್ರದಾಯದಂತೆ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ.




