ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಉದ್ವಿಗ್ನತೆಯಿಂದ ಕೂಡಿದೆ. ಈಗಾಗಲೇ ಐಸಿಸಿ (ICC) ಯಿಂದ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ಎದುರಾದ ಬೆನ್ನಲ್ಲೇ, ಭಾರತೀಯ ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ತೆಗೆದುಕೊಂಡ ಗಟ್ಟಿ ನಿರ್ಧಾರ ನೆರೆಯ ರಾಷ್ಟ್ರವನ್ನು ಇನ್ನಷ್ಟು ಕಂಗಾಲಾಗಿಸಿದೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಟೂರ್ನಿಯಿಂದ ರಿಧಿಮಾ ಪಾಠಕ್ ಸ್ವಯಂಪ್ರೇರಿತವಾಗಿ ಹಿಂದೆ ಸರಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಡಿದ ವದಂತಿ
ರಿಧಿಮಾ ಪಾಠಕ್ ಅವರನ್ನು ಬಿಪಿಎಲ್ನಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರತೀಯ ನಿರೂಪಕಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಕೈಬಿಟ್ಟಿದೆ ಎಂಬ ಊಹಾಪೋಹಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು.
ಆದರೆ ಈ ಎಲ್ಲ ವದಂತಿಗಳಿಗೆ ಸ್ವತಃ ರಿಧಿಮಾ ಪಾಠಕ್ ಅವರು ತೆರೆ ಎಳೆದಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮೌನ ಮುರಿದಿದ್ದಾರೆ. “ನನ್ನನ್ನು ಬಿಪಿಎಲ್ನಿಂದ ತೆಗೆದುಹಾಕಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ಈಗಿನ ರಾಜಕೀಯ ಹಾಗೂ ಕ್ರಿಕೆಟ್ ಪರಿಸ್ಥಿತಿಗಳನ್ನು ಗಮನಿಸಿ, ನಾನು ಸ್ವತಃ ಲೀಗ್ನಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
‘ದೇಶವೇ ಮೊದಲು’: ರಿಧಿಮಾ ಸ್ಪಷ್ಟ ಸಂದೇಶ
ತಮ್ಮ ಪೋಸ್ಟ್ನಲ್ಲಿ ರಿಧಿಮಾ, “ನನ್ನ ದೇಶ ಯಾವಾಗಲೂ ನನಗೆ ಮೊದಲ ಆದ್ಯತೆ. ಕ್ರಿಕೆಟ್ ಮತ್ತು ದೇಶದ ಗೌರವ ನನಗೆ ಮುಖ್ಯ. ನಾನು ಪ್ರಾಮಾಣಿಕತೆ, ಸ್ಪಷ್ಟತೆ ಮತ್ತು ಆಟದ ಆತ್ಮವನ್ನು ನಂಬುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ, “ನಿಮ್ಮ ಸಂದೇಶಗಳು ನನಗೆ ತುಂಬಾ ಅರ್ಥಪೂರ್ಣವಾಗಿವೆ. ಈ ವಿಷಯದ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದ್ದಾರೆ.
ರಿಧಿಮಾ ಪಾಠಕ್ ಯಾರು?
ರಿಧಿಮಾ ಪಾಠಕ್ ಅವರು ಭಾರತೀಯ ಕ್ರೀಡಾ ನಿರೂಪಣಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್, ಸೋನಿ ಸ್ಪೋರ್ಟ್ಸ್ ಸೇರಿದಂತೆ ಪ್ರಮುಖ ಪ್ರಸಾರ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಅನುಭವ ಅವರದ್ದು. ಐಪಿಎಲ್ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಅವರು, ದೇಶೀಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲೂ ನಿರೂಪಕಿಯಾಗಿ ಹೆಸರು ಮಾಡಿದ್ದಾರೆ.
ವಿವಾದದ ಮೂಲ ಏನು?
ಭಾರತ–ಬಾಂಗ್ಲಾದೇಶ ಕ್ರಿಕೆಟ್ ವಿವಾದದ ಶುರುವಾಗಿದ್ದು, ಬಿಸಿಸಿಐ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು.
ಇದರಿಂದ ಕೋಪಗೊಂಡ ಬಾಂಗ್ಲಾದೇಶ ಸರ್ಕಾರ, ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ತನ್ನ ಪಂದ್ಯಗಳನ್ನು ಭಾರತದಲ್ಲಿ ನಡೆಸಬಾರದು ಎಂದು ಒತ್ತಾಯಿಸಿ, ಶ್ರೀಲಂಕಾವನ್ನು ಪರ್ಯಾಯ ಆತಿಥ್ಯ ದೇಶವಾಗಿ ಸೂಚಿಸಿತ್ತು. ಆದರೆ ಈ ಬೇಡಿಕೆಯನ್ನು ಐಸಿಸಿ ಸ್ಪಷ್ಟವಾಗಿ ತಿರಸ್ಕರಿಸಿತು.





