ಕ್ರಿಕೆಟ್ ಪ್ರಿಯರಿಗೆ ಕಳೆದ ಕೆಲ ದಿನಗಳಿಂದ ಭರ್ಜರಿ ಮನರಂಜನೆ ನೀಡುತ್ತಿರುವ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಗೆ ನಾಳೆ (ಮಾರ್ಚ್ 8) ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ತೆರೆ ಬೀಳಲಿದೆ. ಈ ಬಾರಿ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಎರಡೂ ತಂಡಗಳು ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿವೆ. ಈ ಮಹತ್ವದ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯಕ್ಕೇ ನೆಟ್ಟಿದೆ.
ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ಗೆ ತಲುಪಿವೆ. ಎರಡೂ ತಂಡಗಳಲ್ಲೂ ಅನುಭವಿಗಳಾದ ಆಟಗಾರರು ಹಾಗೂ ಯುವ ಪ್ರತಿಭೆಗಳು ಇದ್ದು, ಕಠಿಣ ಪೈಪೋಟಿ ನಡೆಯಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಅಭಿಮಾನಿಗಳು ಈಗಾಗಲೇ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಆದರೆ ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಮೂಡಿದೆ.. ಒಂದು ವೇಳೆ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಟಿ20 ವಿಶ್ವಕಪ್ ಟ್ರೋಫಿ ಯಾರಿಗೆ ಸಿಗುತ್ತದೆ?
ಈ ಕುರಿತು ಐಸಿಸಿ ಸ್ಪಷ್ಟ ನಿಯಮಗಳನ್ನು ರೂಪಿಸಿದೆ. ಸಾಮಾನ್ಯವಾಗಿ ಟಿ20 ಪಂದ್ಯದಲ್ಲಿ ಫಲಿತಾಂಶ ಬರಲು ಕನಿಷ್ಠ ಒಂದು ತಂಡದ ಇನ್ನಿಂಗ್ಸ್ನಲ್ಲಿ 10 ಓವರ್ಗಳಾದರೂ ನಡೆಯಬೇಕು. ಮಳೆಯ ಕಾರಣದಿಂದ ಪಂದ್ಯ ತಡವಾಗಿ ಆರಂಭವಾದರೆ ಪಂದ್ಯ ಸಮಯವನ್ನು ಗರಿಷ್ಠ 120 ನಿಮಿಷಗಳವರೆಗೆ ವಿಸ್ತರಿಸುವ ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಪಂದ್ಯವನ್ನು ಆರಂಭಿಸಲು ಹಾಗೂ ಪೂರ್ಣಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಾರೆ.
ಒಂದು ವೇಳೆ ಮಳೆ ತೀವ್ರವಾಗಿದ್ದು ಪಂದ್ಯ ನಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಫೈನಲ್ ಪಂದ್ಯಕ್ಕಾಗಿ ಐಸಿಸಿ ಮೀಸಲು ದಿನವನ್ನು (Reserve Day) ಕೂಡ ಘೋಷಿಸಿದೆ. ಮಾರ್ಚ್ 8ರಂದು ನಡೆಯುವ ಪಂದ್ಯದಲ್ಲಿ ಮಳೆ ಅಡ್ಡಿಯಾದರೆ ಮಾರ್ಚ್ 9ರಂದು ಮೀಸಲು ದಿನವಾಗಿ ಪಂದ್ಯ ಮುಂದುವರಿಯಲಿದೆ.
ಪಂದ್ಯ ಮೊದಲ ದಿನವೇ ಆರಂಭವಾಗಿ ಮಧ್ಯದಲ್ಲಿ ಮಳೆ ಬಂದರೆ, ಪಂದ್ಯ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಮೀಸಲು ದಿನದಂದು ಮುಂದುವರಿಸಲಾಗುತ್ತದೆ. ಉದಾಹರಣೆಗೆ ಮೊದಲ ದಿನ ಕೆಲ ಓವರ್ಗಳು ನಡೆದಿದ್ದರೆ, ಎರಡನೇ ದಿನ ಅದೇ ಸ್ಥಾನದಿಂದ ಪಂದ್ಯ ಪುನರಾರಂಭವಾಗುತ್ತದೆ.
ಇನ್ನೊಂದು ನಿಯಮವಿದೆ. ಮೊದಲ ದಿನ ಒಂದು ಎಸೆತವೂ ನಡೆಯದೆ ಪಂದ್ಯ ರದ್ದಾದರೆ, ಮೀಸಲು ದಿನದಂದು ಸಂಪೂರ್ಣ ಪಂದ್ಯವನ್ನು ಹೊಸದಾಗಿ ಆರಂಭಿಸಲಾಗುತ್ತದೆ. ಅಂದರೆ ಎರಡೂ ತಂಡಗಳು ಮತ್ತೆ ಪೂರ್ಣ 20 ಓವರ್ಗಳ ಪಂದ್ಯವನ್ನು ಆಡಲು ಅವಕಾಶ ಸಿಗುತ್ತದೆ.
ಆದರೆ ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಅಡ್ಡಿಯಾದರೆ ಮತ್ತು ಪಂದ್ಯ ನಡೆಯದೇ ಹೋದರೆ, ಐಸಿಸಿ ನಿಯಮದ ಪ್ರಕಾರ ಎರಡೂ ತಂಡಗಳನ್ನು ಸಂಯುಕ್ತ ಚಾಂಪಿಯನ್ಗಳಾಗಿ ಘೋಷಿಸಲಾಗುತ್ತದೆ. ಅಂದರೆ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಟಿ20 ವಿಶ್ವಕಪ್ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗುತ್ತದೆ.
ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಕೂಡ ಅಭಿಮಾನಿಗಳಿಗೆ ಇನ್ನೂ ಒಂದು ಅವಕಾಶ ಉಳಿದಿದೆ. ಮೊದಲ ದಿನ ಪಂದ್ಯ ನಡೆಯದಿದ್ದರೆ ಅಥವಾ ಮಧ್ಯದಲ್ಲಿ ನಿಂತಿದ್ದರೆ, ಮೀಸಲು ದಿನದಲ್ಲಿ ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ ಎರಡೂ ದಿನಗಳಲ್ಲೂ ಮಳೆ ಕಾರಣದಿಂದ ಪಂದ್ಯ ನಡೆಯದಿದ್ದರೆ ಮಾತ್ರ ಎರಡು ತಂಡಗಳು ಚಾಂಪಿಯನ್ ಆಗಿ ಘೋಷಣೆಯಾಗುತ್ತವೆ.





