ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖಾಮುಖಿಯಾಗಿವೆ. ಈ ರೋಮಾಂಚಕಾರಿ ಪಂದ್ಯವನ್ನು ವೀಕ್ಷಿಸಲು ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಟೇಡಿಯಂಗೆ ಆಗಮಿಸಿದ್ದಾರೆ. ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ರಿಷಿ ಸುನಕ್ ಮೈದಾನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ನಿರೂಪಕಿ ಮಯಾಂತಿ ಲ್ಯಾಂಗರ್ ಅವರು ಸುನಕ್ ಅವರೊಂದಿಗೆ ಮಾತನಾಡಿದರು. ಈ ವೇಳೆ ರಿಷಿ ಸುನಕ್ ತಮ್ಮ ಕ್ರಿಕೆಟ್ ಪ್ರೀತಿಯನ್ನು ಉತ್ಸಾಹದಿಂದ ಹಂಚಿಕೊಂಡರು.
ರಿಷಿ ಸುನಕ್ ತಮ್ಮ ಅನುಭವವನ್ನು ವಿವರಿಸುತ್ತಾ, “ನನಗೆ ಇದು ಅದ್ಭುತ ಅನುಭವವಾಗಿದೆ. ನನ್ನ ಜೀವನದಲ್ಲಿ ಕ್ರಿಕೆಟ್ನಿಂದ ಇಷ್ಟು ಆನಂದವನ್ನು ಪಡೆದಿಲ್ಲ. ನಾನು ನನ್ನ ಪತ್ನಿ ಅಕ್ಷತಾ ಜೊತೆಗೆ ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದೇನೆ. ನಾನು ಬೆಂಗಳೂರಿನ ಕುಟುಂಬದ ಹುಡುಗಿಯನ್ನೇ ಮದುವೆಯಾಗಿದ್ದೇನೆ. ಹೀಗಾಗಿ, ಮೊದಲಿನಿಂದಲೂ ನನ್ನ ತಂಡ ಆರ್ಸಿಬಿ. ಮದುವೆಯಾದಾಗ ನನ್ನ ಅತ್ತೆ-ಮಾವನವರು ಮೊದಲ ಸೀಸನ್ನ ಆರ್ಸಿಬಿ ಶರ್ಟ್ ಕೊಟ್ಟಿದ್ದರು. ಇಂದು ರನ್ಗಳು ಸ್ವಲ್ಪ ಕಡಿಮೆಯಾಗಿವೆ, ಆದರೆ ನಮ್ಮ ಬೌಲಿಂಗ್ ತಂಡವೂ ಬಲಿಷ್ಠವಾಗಿದೆ. ಗೆಲುವಿನ ಆಸೆಯಿದೆ,” ಎಂದರು.
“ನಾನು ಹುಬ್ಬಳ್ಳಿ ಮತ್ತು ಬೆಂಗಳೂರಿನ ಜನರಿಗಾಗಿ ಇಲ್ಲಿಗೆ ಬಂದಿದ್ದೇನೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರಲಿ ಅಥವಾ ಆಸ್ಟ್ರೇಲಿಯಾದ ಪ್ರಧಾನಿಯೊಂದಿಗೆ ಇರಲಿ, ರಾಜತಾಂತ್ರಿಕ ಚರ್ಚೆಯ ಮೊದಲು ಕ್ರಿಕೆಟ್ನ ಬಗ್ಗೆ ಸ್ವಲ್ಪ ಮಾತನಾಡಿದರೆ ಸಂಬಂಧಗಳು ಗಟ್ಟಿಯಾಗುತ್ತವೆ. ಇದು ಒಂದು ಒಳ್ಳೆಯ ಆರಂಭವಾಗುತ್ತದೆ,” ಎಂದು ಅವರು ಹೇಳಿದರು.
ಐಪಿಎಲ್ನ ಜಾಗತಿಕ ಪ್ರಭಾವದ ಬಗ್ಗೆ ಮಾತನಾಡುತ್ತಾ, ಸುನಕ್ ಐಸಿಸಿ ಅಧ್ಯಕ್ಷ ಜಯ್ ಶಾ ಜೊತೆಗಿನ ಚರ್ಚೆಯನ್ನು ಉಲ್ಲೇಖಿಸಿದರು. “ಐಪಿಎಲ್ ಜಾಗತಿಕ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆ ತಂದಿದೆ. ಇಂದು ಪ್ರತಿಯೊಬ್ಬ ಕ್ರಿಕೆಟಿಗನೂ ಐಪಿಎಲ್ನಲ್ಲಿ ಆಡುವ ಕನಸು ಕಾಣುತ್ತಾನೆ. ಉದಾಹರಣೆಗೆ, ಜೇಕಬ್ ಬೆಥೆಲ್ ಇಲ್ಲಿ ಆಡಿ ಇಂಗ್ಲೆಂಡ್ಗೆ ಮರಳಿದ್ದಾನೆ. ಇದು ಭಾರತದ ಜಾಗತಿಕ ಕ್ರಿಕೆಟ್ನಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದಕ್ಕೆ ಸಾಕ್ಷಿ,” ಎಂದರು.
ಕ್ರಿಕೆಟ್ನ ಒಲಿಂಪಿಕ್ಸ್ ಸೇರ್ಪಡೆಯ ಬಗ್ಗೆ ಮಾತನಾಡುತ್ತಾ, “ಒಲಿಂಪಿಕ್ಸ್ನಂತಹ ಕ್ರೀಡಾಕೂಟದಲ್ಲಿ ಕ್ರಿಕೆಟ್ಗೆ ಸ್ಥಾನ ಸಿಕ್ಕಿರುವುದಕ್ಕೆ ಭಾರತವೇ ಕಾರಣ. ಭಾರತದ ಕ್ರಿಕೆಟ್ನ ಉತ್ಸಾಹ, ಅಭಿರುಚಿ ಜಾಗತಿಕವಾಗಿ ದೊಡ್ಡ ಪ್ರಭಾವ ಬೀರಿದೆ. ಈ ರಾತ್ರಿಯ ಐಪಿಎಲ್ ಫೈನಲ್ ಇದಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಪ್ರಿಯರಿಗೆ ಇದು ಅತ್ಯುತ್ತಮ ಅನುಭವ,” ಎಂದು ಸುನಕ್ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.





