ನವದೆಹಲಿ: ನೀಟ್ (NEET) ಪರೀಕ್ಷೆ ಅಕ್ರಮದ ವಿರುದ್ಧ ದೇಶವ್ಯಾಪಿ ಹೋರಾಟದ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪಕ್ಷದ ವಕ್ತಾರರಾದ ಅಶುತೋಶ್ ರಂಕಾ ಹಾಗೂ ಸೌರವ್ ದಾಸ್ ಮಹತ್ವದ ಸುಳಿವು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೌರವ್ ದಾಸ್, “ಸಕ್ರಿಯ ರಾಜಕೀಯ ಸೇರಿದಂತೆ ಎಲ್ಲ ಆಯ್ಕೆಗಳಿಗೂ ನಾವು ಮುಕ್ತವಾಗಿದ್ದೇವೆ. ಆದರೆ ಸದ್ಯದ ಮಟ್ಟಿಗೆ ನಮ್ಮ ಮೊದಲ ಆದ್ಯತೆ ಪಕ್ಷದ ಸಂಘಟನೆ ಮತ್ತು ಯುವಜನರ ಬಲವಾದ ಜಾಲ ನಿರ್ಮಾಣವೇ ಆಗಿದೆ” ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಈಗಾಗಲೇ ಸುಮಾರು 750 ರಿಂದ 800 ರಾಜಕೀಯ ಪಕ್ಷಗಳು ನೋಂದಾಯಿತವಾಗಿದ್ದರೂ, ಯುವಕರ ಆಶೋತ್ತರಗಳು ಮತ್ತು ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವ ರಾಜಕೀಯ ವೇದಿಕೆಗಳ ಕೊರತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಕಾರಣಕ್ಕೆ ಮೊದಲು ದೇಶಾದ್ಯಂತ ಬೇರುಮಟ್ಟದಲ್ಲಿ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ನೀಟ್ ಹೋರಾಟದ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಸಿಜೆಪಿಯ ಹೋರಾಟಕ್ಕೆ ದೊರೆತ ಅತಿದೊಡ್ಡ ಗೆಲುವು ಎಂದು ಪಕ್ಷದ ನಾಯಕರು ಬಣ್ಣಿಸಿದರು. ಈ ಹೋರಾಟದಿಂದ ವಿದ್ಯಾರ್ಥಿಗಳ ಧ್ವನಿ ದೇಶದಾದ್ಯಂತ ಪ್ರತಿಧ್ವನಿಸಿದ್ದು, ಜನಸಾಮಾನ್ಯರ ಬೆಂಬಲವೇ ತಮ್ಮ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
“ಕಳೆದ ಹಲವು ತಿಂಗಳಿಂದ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳೊಂದಿಗೆ ನಿಂತು ಹೋರಾಟ ನಡೆಸಿದ್ದೇವೆ. ಈಗ ನಮ್ಮ ತಂಡಕ್ಕೆ ಸ್ವಲ್ಪ ವಿಶ್ರಾಂತಿಯೂ ಅಗತ್ಯವಿದೆ. ಆದರೆ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ನಮ್ಮ ಕೆಲಸ ಮುಂದುವರಿಯುತ್ತದೆ” ಎಂದು ಸೌರವ್ ದಾಸ್ ಹೇಳಿದರು.
ದೇಶದ ಏಕತೆ ಮತ್ತು ಸಮಗ್ರತೆ ತಮ್ಮ ಸಂಘಟನೆಯ ಪ್ರಮುಖ ಬದ್ಧತೆಯಾಗಿದೆ ಎಂದು ಒತ್ತಿ ಹೇಳಿದ ಸಿಜೆಪಿ ನಾಯಕರು, “ನಮ್ಮ ಹೋರಾಟವನ್ನು ಯಾವುದೇ ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಪ್ರತಿಭಟನೆಗಳಲ್ಲಿ ಭಾಗವಹಿಸುವ ಯಾವುದೇ ವಿದ್ಯಾರ್ಥಿ ಕಾನೂನು ಸಮಸ್ಯೆಗಳಲ್ಲಿ ಸಿಲುಕಬಾರದು ಎಂಬುದು ತಮ್ಮ ಪ್ರಮುಖ ಕಾಳಜಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಕಾನೂನಾತ್ಮಕ ನೆರವು ಒದಗಿಸುವುದು, ಅವರ ಹಕ್ಕುಗಳ ರಕ್ಷಣೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮುಂದಿನ ದಿನಗಳಲ್ಲೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸಿಜೆಪಿ ರಾಜಕೀಯ ಪಕ್ಷವಾಗಿ ರೂಪುಗೊಳ್ಳುತ್ತದೆಯೇ ಅಥವಾ ಸಾಮಾಜಿಕ-ವಿದ್ಯಾರ್ಥಿ ಚಳವಳಿಯಾಗಿ ಮುಂದುವರಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಕ್ರಿಯ ರಾಜಕೀಯದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚದೇ, “ಎಲ್ಲ ಆಯ್ಕೆಗಳಿಗೂ ನಾವು ಮುಕ್ತ” ಎಂಬ ಸಂದೇಶ ನೀಡಿರುವುದು ಮುಂದಿನ ದಿನಗಳಲ್ಲಿ ಸಂಘಟನೆಯ ನಡೆ ಬಗ್ಗೆ ಕುತೂಹಲ ಹೆಚ್ಚಿಸಿದೆ. ದೇಶದ ಯುವಕರ ನಿರೀಕ್ಷೆಗಳಿಗೆ ಸ್ಪಂದಿಸುವ ಪರ್ಯಾಯ ವೇದಿಕೆಯನ್ನು ನಿರ್ಮಿಸುವ ಗುರಿಯೊಂದಿಗೆ ಸಿಜೆಪಿ ತನ್ನ ಸಂಘಟನೆ ವಿಸ್ತರಣೆಗೆ ಆದ್ಯತೆ ನೀಡುವುದಾಗಿ ನಾಯಕರು ಪುನರುಚ್ಚರಿಸಿದ್ದಾರೆ.





