ಬೆಂಗಳೂರು (ಮೇ 30): ನಾಳೆ (ಮೇ 31) ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 19ನೇ ಆವೃತ್ತಿಯ ಬಹುನಿರೀಕ್ಷಿತ ಫೈನಲ್ ಪಂದ್ಯ ಜರುಗಲಿದೆ. ಕ್ರಿಕೆಟ್ ಅಭಿಮಾನಿಗಳ ಕಣ್ಮನ ಸೆಳೆಯುವ ಈ ಪಂದ್ಯದ ಹಿನ್ನೆಲೆ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮದ್ಯಪಾನ ವಾಹನ ಚಾಲನೆಗೆ ನಿಷೇಧ
ಸಂಚಾರ ವಿಭಾಗ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಆದೇಶಿಸಲಾಗಿದೆ. ರಾತ್ರಿಯಿಡೀ ನಾಕಬಂಧಿ ಹಾಕಿ, ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಪೊಲೀಸರು ನೀಡಿರುವ ಪ್ರಮುಖ ಸೂಚನೆಗಳು
-
ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ.
-
ವೀಲಿಂಗ್ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದರೆ ತೀವ್ರ ದಂಡ.
-
ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ರೀತಿಯ ವಿಜಯೋತ್ಸವ ಆಚರಣೆಗೆ ಅವಕಾಶವಿಲ್ಲ.
-
ಪಾದಚಾರಿ ಮಾರ್ಗಗಳು, ರಸ್ತೆ ಮಧ್ಯೆ ಅನಗತ್ಯವಾಗಿ ವಾಹನ ನಿಲುಗಡೆ ಮಾಡಬಾರದು.
-
ಸಂಭ್ರಮಾಚರಣೆಯ ನೆಪದಲ್ಲಿ ಅತಿಯಾದ ಹಾರ್ನ್, ವಾಹನಗಳ ಶಬ್ದ ಮಾಡಿದರೆ ದಂಡ.
-
ಕಾರಿನ ಸನ್ರೂಫ್ ತೆಗೆದು ಅಪಾಯಕಾರಿಯಾಗಿ ವಾಹನ ಚಾಲನೆ ಸಂಪೂರ್ಣ ನಿಷೇಧ.
-
ಸಂಚಾರ ಪೊಲೀಸರು ನೀಡುವ ಮಾರ್ಗ ಬದಲಾವಣೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.
ಐಪಿಎಲ್ ಇತಿಹಾಸದಲ್ಲಿ RCB ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2025ರಲ್ಲಿ ಮೊದಲ ಬಾರಿ ಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಈ ಬಾರಿಯೂ ಡಿಫೆಂಡಿಂಗ್ ಚಾಂಪಿಯನ್ಸ್ ಎನಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ RCB, ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಐಪಿಎಲ್ ಆರಂಭಿಕ ಆವೃತ್ತಿಗಳಿಂದಲೂ ದಿಗ್ಗಜ ಆಟಗಾರರನ್ನು ಹೊಂದಿದ್ದರೂ ಮೂರು ಬಾರಿ ಫೈನಲ್ನಲ್ಲಿ ಎಡವಿ ಪ್ರಶಸ್ತಿ ವಂಚಿತವಾಗಿದ್ದ ತಂಡಕ್ಕೆ “ಮನರಂಜನೆಯಷ್ಟೇ ನೀಡುವ ಫ್ರಾಂಚೈಸಿ” ಎಂಬ ಹಣೆಪಟ್ಟಿಯಿತ್ತು. ಆದರೆ 2025ರಲ್ಲಿ ರಜತ್ ಪಾಟೀದಾರ್ ನೇತೃತ್ವದಲ್ಲಿ ಮೊದಲ ಟ್ರೋಫಿ ಗೆಲ್ಲುವ ಮೂಲಕ ತಂಡ ಆ ಅಪವಾದವನ್ನು ತೊಡೆದುಹಾಕಿತು. ಈ ಸೀಸನ್ನಲ್ಲೂ ಅಭಿಮಾನಿಗಳಲ್ಲಿ ಮತ್ತದೇ ಭರವಸೆ ಮೂಡಿದ್ದು, “ಈ ಸಲನೂ ಕಪ್ ನಮ್ಮೆ” ಎಂದು ಸಾರುತ್ತಿದ್ದಾರೆ. ನಾಳಿನ ಫೈನಲ್ ಪಂದ್ಯದೊಂದಿಗೆ RCB ಮತ್ತೊಂದು ಇತಿಹಾಸ ಬರೆಯಬಹುದೇ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಸಾರ್ವಜನಿಕರಿಗೆ ಮನವಿ
ಸಂಚಾರ ಪೊಲೀಸರು ಸಾರ್ವಜನಿಕರು ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿ ಪಂದ್ಯವನ್ನು ಆಸ್ವಾದಿಸಬೇಕೆಂದು ಮನವಿ ಮಾಡಿದ್ದಾರೆ. ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆ ಬಳಸುವಂತೆ ಸಲಹೆ ನೀಡಲಾಗಿದೆ.





