ಐಪಿಎಲ್ 2026ರ ಲೀಗ್ ಹಂತವು ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಬೆಂಗಳೂರಿನಲ್ಲಿ ನಡೆಯಲಿರುವ ಈ ಸೀಸನ್ನ ಕೊನೆಯ ಲೀಗ್ ಪಂದ್ಯ ಇದಾಗಿದ್ದು, ತವರು ಅಭಿಮಾನಿಗಳಿಗೆ ಗೆಲುವಿನ ವಿದಾಯ ಹೇಳಲು ಆರ್ಸಿಬಿ ಸಜ್ಜಾಗಿದೆ.
ಆರ್ಸಿಬಿಗೆ ‘ಪಂಚ ಪಾಂಡವರ’ ಬಲ:
ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್ಸಿಬಿ ಭರ್ಜರಿ ಫಾರ್ಮ್ನಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ ಮತ್ತು ಟಿಮ್ ಡೇವಿಡ್ ಅವರು ‘ಪಂಚ ಪಾಂಡವರಂತೆ’ ಎದುರಾಳಿಗಳನ್ನು ಧೂಳೀಪಟ ಮಾಡುತ್ತಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೇಕಬ್ ಡಫಿ ವಿಕೆಟ್ ಬೇಟೆಯಾಡುತ್ತಿದ್ದರೆ, ಕೃನಾಲ್ ಪಾಂಡ್ಯ ಹಾಗೂ ಸುಯೇಷ್ ಶರ್ಮಾ ಎಂಬ ‘ಸ್ಪಿನ್ ಟ್ವಿನ್ಸ್’ ಜೋಡಿ ಮ್ಯಾಜಿಕ್ ಸೃಷ್ಟಿಸುತ್ತಿದೆ.
ಟೈಟನ್ಸ್ ಸವಾಲು ಸಣ್ಣದಿಲ್ಲ:
ಇತ್ತ ಗುಜರಾತ್ ಟೈಟನ್ಸ್ ಕೂಡ ಪ್ರಬಲವಾಗಿಯೇ ಇದೆ. ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಸ್ಫೋಟಕ ಆರಂಭ ಹಾಗೂ ಸಾಯ್ ಸುದರ್ಶನ್ ಅವರ ಸ್ಥಿರತೆ ತಂಡಕ್ಕೆ ಬಲ ನೀಡಿದೆ. ಬೌಲಿಂಗ್ನಲ್ಲಿ ಕಗಿಸೋ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ವೇಗಿಗಳು ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಬ್ಯಾಟರ್ಗಳಿಗೆ ಸವಾಲಾಗುವ ಸಾಧ್ಯತೆಯಿದೆ.
ಈ ಋತುವಿನಲ್ಲಿ ಚಿನ್ನಸ್ವಾಮಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಬೆಂಗಳೂರು 3ರಲ್ಲಿ ಗೆದ್ದು ಬೀಗಿದೆ. ತವರಿನ ಈ ವರ್ಷದ ಕೊನೆಯ ಲೀಗ್ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಿ, ಪ್ಲೇ ಆಫ್ಗೆ ಭರ್ಜರಿ ಎಂಟ್ರಿ ನೀಡಲು ಆರ್ಸಿಬಿ ತುಡಿಯುತ್ತಿದೆ. ಚಿನ್ನಸ್ವಾಮಿಯ ರನ್ ಭೂಮಿಯಲ್ಲಿ ಇಂದು ಸಿಕ್ಸರ್-ಬೌಂಡರಿಗಳ ಮಳೆ ಸುರಿಯುವುದಂತೂ ಖಚಿತ.





