ಬೆಂಗಳೂರು, ಮಾರ್ಚ್ 19: ಹಿಂದೂಗಳ ಹೊಸ ವರ್ಷದ ಪ್ರಾರಂಭವೆಂದು ಪರಿಗಣಿಸುವ ಯುಗಾದಿ ಹಬ್ಬವನ್ನು 2026ರಲ್ಲಿ ಮಾರ್ಚ್ 19ರಂದು ಅಂದರೆ ಇಂದು ರಾಜ್ಯಾದ್ಯಂತ ಹಾಗೂ ದೇಶದ ಹಲವು ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಚಾಂದ್ರಮಾನ ಪದ್ಧತಿಯ ಪ್ರಕಾರ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಈ ಶುಭದಿನದಂದು ಹಳೆಯ ನೋವುಗಳನ್ನು ಮರೆತು ಹೊಸ ಹರ್ಷಕ್ಕೆ ಸಿದ್ಧರಾಗಬೇಕೆಂಬುದು ಹಿರಿಯರ ಆಶೀರ್ವಾದ.
ಹಬ್ಬದ ಸಿದ್ಧತೆಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಮನೆಗಳನ್ನು ಸ್ವಚ್ಛಗೊಳಿಸುವುದು, ಮಾವಿನ ಎಲೆ ಹಾಗೂ ಹೂವಿನ ತೋರಣಗಳಿಂದ ಅಲಂಕರಿಸುವುದು, ಹೊಸ ಬಟ್ಟೆಗಳನ್ನು ಖರೀದಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಆದರೆ ಈ ಪವಿತ್ರ ದಿನದಂದು ಕೆಲವು ಕೆಲಸಗಳನ್ನು ಮಾಡಿದ್ರೆ ಶುಭ ಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಹಾಗೆಯೇ ಕೆಲವು ಕೆಲಸಗಳನ್ನು ಮಾಡಬಾರದು ಎಂಬ ಸಲಹೆಯನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಬನ್ನಿ, ಈ ಸುದಿನ ಯಾವ ಕೆಲಸ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಯುಗಾದಿಯಂದು ಪಾಲಿಸಬೇಕಾದ ಆಚರಣೆಗಳು
ಯುಗಾದಿ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದ ಆಚರಣೆಗಳು ಇಡೀ ವರ್ಷದ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬ ನಂಬಿಕೆ ಇದೆ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಿ: ಯುಗಾದಿ ದಿನ ಬೆಳಗ್ಗೆ ಬೇಗನೆ ಎದ್ದು, ಬ್ರಾಹ್ಮಿ ಮುಹೂರ್ತದಲ್ಲಿ (ಸೂರ್ಯೋದಯಕ್ಕೆ ಮುನ್ನ) ಸ್ನಾನ ಮಾಡುವುದು ವಿಶೇಷ ಫಲದಾಯಕವಾಗಿದೆ.
ಎಣ್ಣೆ ಸ್ನಾನ ಮತ್ತು ಪೂಜೆ: ಎಳ್ಳೆಣ್ಣೆ ಹಚ್ಚಿಕೊಂಡು ಅರಿಶಿನ ನೀರಿನಿಂದ ಸ್ನಾನ ಮಾಡುವ ಸಂಪ್ರದಾಯವಿದೆ. ನಂತರ ಹೊಸ ಮತ್ತು ಶುಭ್ರ ಬಟ್ಟೆಗಳನ್ನು ಧರಿಸಿ, ಕುಂಕುಮ ಧರಿಸಿ ದೇವರ ಪೂಜೆ ಮಾಡುವುದನ್ನು ಶ್ರೇಷ್ಠವೆಂದು ಹೇಳಲಾಗುತ್ತದೆ.
ಬೇವು-ಬೆಲ್ಲ ಸೇವನೆ: ಯುಗಾದಿಯ ಪ್ರಮುಖ ಆಕರ್ಷಣೆ ಎಂದರೆ ಬೇವು-ಬೆಲ್ಲ. ಜೀವನದಲ್ಲಿ ಸುಖ-ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಇದು ನೀಡುತ್ತದೆ. ಕಹಿ-ಸಿಹಿಯ ಸಂಯೋಜನೆಯ ಈ ಪದಾರ್ಥವು ಹಬ್ಬದ ಪ್ರಮುಖ ಸಂಪ್ರದಾಯವಾಗಿದೆ.
ಮನೆ ಅಲಂಕಾರ: ಮನೆಗಳನ್ನು ಹೂವು ಹಾಗೂ ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸುವುದು ಹಬ್ಬದ ವಿಶೇಷ ಆಕರ್ಷಣೆಯಾಗಿರುತ್ತದೆ. ರಂಗೋಲಿ ಹಾಕಿ ಮನೆಯನ್ನು ಸಿಂಗರಿಸಬೇಕು.
ಯುಗಾದಿಯಂದು ತಪ್ಪಿಸಬೇಕಾದ ಕೆಲಸಗಳು
ಹೊಸ ವರ್ಷದ ಮೊದಲ ದಿನವಾದ ಕಾರಣ, ಈ ದಿನದ ನಡೆ-ನುಡಿಗಳು ಇಡೀ ವರ್ಷದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಕೆಳಗಿನ ಕೆಲಸಗಳನ್ನು ಮಾಡದಿರಲು ಜ್ಯೋತಿಷ್ಯ ಶಾಸ್ತ್ರ ಸೂಚಿಸುತ್ತದೆ.
ಜಗಳ ಮತ್ತು ವಾದ-ವಿವಾದಗಳಿಂದ ದೂರವಿರಿ: ಯುಗಾದಿಯಂದು ಜಗಳ, ವಾದ-ವಿವಾದಗಳಿಂದ ದೂರವಿರಬೇಕು. ಕೋಪ, ಅಸೂಯೆ, ದ್ವೇಷ ಮುಂತಾದ ನಕಾರಾತ್ಮಕ ಭಾವನೆಗಳನ್ನು ದೂರವಿಡಬೇಕು.
ಹಣಕಾಸು ವ್ಯವಹಾರ ಬೇಡ: ಸಾಲ ಕೊಡುವುದು ಅಥವಾ ಪಡೆಯುವುದನ್ನು ತಪ್ಪಿಸುವಂತೆ ಹಿರಿಯರು ಸಲಹೆ ನೀಡುತ್ತಾರೆ. ಹಣಕಾಸಿನ ವ್ಯವಹಾರಗಳನ್ನು ಈ ದಿನ ಮಾಡಬಾರದು.
ಮಾಂಸಾಹಾರ ಮತ್ತು ಮದ್ಯಪಾನ ವರ್ಜ್ಯ: ಮಾಂಸಾಹಾರ ಸೇವನೆ, ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವುದು ಉತ್ತಮ ಎಂದು ಹೇಳಲಾಗಿದೆ. ಸಾತ್ವಿಕ ಆಹಾರ ಸೇವನೆ ಮಾಡಬೇಕು.
ಕೂದಲು, ಗಡ್ಡ, ಉಗುರು ಕತ್ತರಿಸಬೇಡಿ: ಈ ದಿನ ಕೂದಲು, ಗಡ್ಡ, ಉಗುರು ಕತ್ತರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಹರಿದ ಅಥವಾ ಅಶುದ್ಧ ಬಟ್ಟೆ ಧರಿಸಬೇಡಿ: ಹರಿದ ಅಥವಾ ಅಶುದ್ಧ ಬಟ್ಟೆಗಳನ್ನು ಧರಿಸಬಾರದು. ಹೊಸ ಬಟ್ಟೆ ಅಥವಾ ಚೆನ್ನಾಗಿ ತೊಳೆದ ಶುಚಿಯಾದ ಬಟ್ಟೆಗಳನ್ನು ಮಾತ್ರ ಧರಿಸಬೇಕು.
ಯುಗಾದಿಯನ್ನು ಪವಿತ್ರ ಹಬ್ಬವೆಂದು ಪರಿಗಣಿಸುವುದರಿಂದ ಈ ದಿನವನ್ನು ಸಂತೋಷದಿಂದ, ಶಾಂತಿಯಿಂದ ಕಳೆಯುವುದು ಮುಖ್ಯ. ಇತರರಿಗೆ ಗೌರವ ನೀಡುವುದು, ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ಹಾಗೂ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ಹಬ್ಬದ ಸಾರ್ಥಕತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಯುಗಾದಿಯನ್ನು ಎರಡು ದಿನಗಳ ಕಾಲ ಆಚರಿಸುವ ಪದ್ಧತಿಯಿದ್ದು, ಮೊದಲ ದಿನ ಸಿಹಿ ಊಟ ಹಾಗೂ ಎರಡನೇ ದಿನ ಬಾಡೂಟವನ್ನು ಸವಿಯುವುದು ವಿಶೇಷವಾಗಿದೆ.





