ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯದಲ್ಲಿ ನೆಲೆಸಿದ್ದ 4,800 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಗಡಿ ಭದ್ರತೆಯೇ ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, “ಭಾರತ-ಬಾಂಗ್ಲಾದೇಶದ ಗಡಿಯನ್ನು ಸುರಕ್ಷಿತಗೊಳಿಸುವುದು ಮತ್ತು ಅಕ್ರಮ ವಲಸೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ” ಎಂದು ಹೇಳಿದ್ದಾರೆ.
4,800 ವಲಸಿಗರ ಗಡಿಪಾರು, 836 ಪ್ರಕ್ರಿಯೆಯಲ್ಲಿದೆ
ರಾಜ್ಯದ ಗಡಿ ಜಿಲ್ಲೆಗಳ ವಸತಿ ಕೇಂದ್ರಗಳಿಂದ ಈಗಾಗಲೇ ಸುಮಾರು 4,800 ಅಕ್ರಮ ಬಾಂಗ್ಲಾ ವಲಸಿಗರನ್ನು ಯಶಸ್ವಿಯಾಗಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ. ಇನ್ನುಳಿದ 836 ಜನರ ಸ್ವದೇಶಕ್ಕೆ ವಾಪಸಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದರು. ಅಕ್ರಮ ವಲಸಿಗರನ್ನು ಗುರುತಿಸಲು ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗಡಿ ಭದ್ರತೆಗೆ ತಡೆಗೋಡೆ ನಿರ್ಮಾಣ
ಗಡಿ ರಕ್ಷಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ತಡೆಗೋಡೆ ನಿರ್ಮಾಣ ಬಾಕಿ ಇರುವ 556 ಕಿ.ಮೀ ವ್ಯಾಪ್ತಿಯ ಪೈಕಿ 100 ಕಿ.ಮೀ ಭೂಮಿಯನ್ನು ಈಗಾಗಲೇ ಭದ್ರತಾ ಪಡೆಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ಉತ್ತರ ಬಂಗಾಳದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಚಿಕನ್ಸ್ ನೆಕ್ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
ಜನಗಣತಿ ಕಾರ್ಯಕ್ಕೆ ಚಾಲನೆ
ರಾಜ್ಯದಲ್ಲಿ ಪಾರದರ್ಶಕ ಆಡಳಿತ ತರಲು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆಗಸ್ಟ್ 1 ರಿಂದ ಆಗಸ್ಟ್ 15 ರವರೆಗೆ ಮನೆ-ಮನೆ ಸಮೀಕ್ಷೆ ನಡೆಯಲಿದೆ. ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಗಡಿ ವಿಂಗಡಣೆ ಕಾರ್ಯಗಳು ನಡೆಯಲಿವೆ. ಇದರಿಂದ ಅಕ್ರಮ ವಲಸಿಗರನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಅನ್ನಪೂರ್ಣ ಯೋಜನೆಯಲ್ಲಿ 50 ಲಕ್ಷ ಮಹಿಳೆಯರಿಗೆ ನೆರವು
ಹಿಂದಿನ ಸರ್ಕಾರದ ‘ಲಕ್ಷ್ಮೀರ್ ಭಂಡಾರ್’ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಮಹಿಳೆಯರ ಸಬಲೀಕರಣಕ್ಕಾಗಿ ‘ಅನ್ನಪೂರ್ಣ ಯೋಜನೆ’ ತರಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರಸ್ತುತ 50 ಲಕ್ಷ ಮಹಿಳೆಯರು ತಲಾ 3,000 ರೂಪಾಯಿಗಳ ಆರ್ಥಿಕ ನೆರವನ್ನು ಪಡೆದಿದ್ದಾರೆ. ಯೋಜನೆ ಜಾರಿಯಾದ ಮೊದಲ ದಿನವೇ 28 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ.
27 ಲಕ್ಷ ನಕಲಿ ಫಲಾನುಭವಿಗಳ ಹೊರಗಿಡುವಿಕೆ
ಫಲಾನುಭವಿಗಳ ಪಟ್ಟಿಯಲ್ಲಿದ್ದ ಸುಮಾರು 27 ಲಕ್ಷ ಹೆಸರುಗಳು ಮತದಾರರ ಪಟ್ಟಿಯಲ್ಲೇ ಇರಲಿಲ್ಲ ಎಂದು ಸಿಎಂ ಆರೋಪಿಸಿದರು. ಮಹಿಳೆಯರಿಗಾಗಿ ಮೀಸಲಾದ ಯೋಜನೆಯಲ್ಲಿ ಸುಮಾರು ಮೂರು ಲಕ್ಷ ಪುರುಷರು ಅಕ್ರಮವಾಗಿ ಸೌಲಭ್ಯ ಪಡೆದಿದ್ದರು.





