ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಡಿಎಂಕೆ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದ್ದು, ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ.
ಈ ಚುನಾವಣೆಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೇ ತಮ್ಮ ಸ್ವಕ್ಷೇತ್ರ ಕೊಳತ್ತೂರಿನಲ್ಲಿ ಸೋಲನುಭವಿಸಿದ್ದಾರೆ. ಡಿಎಂಕೆಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಈ ಕ್ಷೇತ್ರದಲ್ಲಿ ಸ್ಟಾಲಿನ್ ಸೋಲಿರುವುದು ಪಕ್ಷದ ಒಳಗಿನ ಹಾಗೂ ಹೊರಗಿನ ಪರಿಸ್ಥಿತಿಗಳ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಟಿವಿಕೆ ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ಅವರು ಇಲ್ಲಿ ಭಾರೀ ಮತಾಂತರದಿಂದ ಗೆಲುವು ಸಾಧಿಸಿದ್ದಾರೆ.
2011ರಿಂದ ನಿರಂತರವಾಗಿ ಕೊಳತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸ್ಟಾಲಿನ್ ಅವರಿಗೆ ಈ ಬಾರಿ ಜನತೆ ತಿರುಗೇಟು ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ, ಆಡಳಿತ ಶೈಲಿ ಮತ್ತು ಹಲವು ವಿವಾದಗಳು ಈ ಸೋಲಿಗೆ ಕಾರಣವಾಗಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ, ಇದೇ ಮೊದಲ ಬಾರಿ ಚುನಾವಣೆಗೆ ಕಾಲಿಟ್ಟಿರುವ ವಿಜಯ್ ಅವರ ಟಿವಿಕೆ ಪಕ್ಷ ರಾಜ್ಯಾದ್ಯಂತ ಭಾರೀ ಅಲೆ ಸೃಷ್ಟಿಸಿದೆ. ಟಿವಿಕೆ ಪಕ್ಷವು 105ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟವಾಗಿ ಜನಮನ್ನಣೆ ಗಳಿಸಿರುವುದು ಕಂಡುಬರುತ್ತಿದೆ. ವಿಜಯ್ ಅವರು ತಾವು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ವಿಜಯ್ ಅವರ ಜನಪ್ರಿಯತೆ, ಯುವಜನರ ಬೆಂಬಲ ಹಾಗೂ ಪರ್ಯಾಯ ರಾಜಕೀಯದ ವಾಗ್ದಾನ ಈ ಜಯಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಬೇಸರಗೊಂಡ ಜನತೆ ಹೊಸ ಆಯ್ಕೆಯತ್ತ ಮುಖ ಮಾಡಿರುವುದು ಸ್ಪಷ್ಟವಾಗಿದೆ. ಇದು ಕೇವಲ ಒಂದು ಚುನಾವಣಾ ಜಯವಲ್ಲ, ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಹೇಳಬಹುದು.
ಇದಕ್ಕೂ ಮಧ್ಯೆ, ಎಐಎಡಿಎಂಕೆ ಪಕ್ಷವು 59 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ ತೃತೀಯ ಶಕ್ತಿಯಾಗಿ ಮುಂದುವರಿದಿದೆ. ಆದರೆ ಮುಖ್ಯ ಹೋರಾಟ ಡಿಎಂಕೆ ಮತ್ತು ಟಿವಿಕೆ ನಡುವೆ ನಡೆದಿದ್ದು, ಟಿವಿಕೆ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ.





