ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉದ್ಯೋಗ ಸಂಯೋಜಿತ ಪ್ರೋತ್ಸಾಹಕ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿದಿನ ಹೊಸ ಘೋಷಣೆಗಳನ್ನು ಮಾಡುತ್ತಿದ್ದರೂ ಯುವಕರು ಇನ್ನೂ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದು ಮತ್ತೊಂದು ಸುಳ್ಳು ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಲೋಕಸಭೆ ಚುನಾವಣೆ ನಂತರ, ಪ್ರಧಾನಿ ಮೋದಿ “ಉದ್ಯೋಗ ಸಂಬಂಧಿತ ಪ್ರೋತ್ಸಾಹ” ಯೋಜನೆಯನ್ನು ಬಹಳ ಅಬ್ಬರದಿಂದ ಘೋಷಿಸಿದರು, ನಮ್ಮ ದೇಶದ ಯುವಜನತೆಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದರು.
ಯೋಜನೆಯನ್ನು ಘೋಷಿಸಿ ಸುಮಾರು ಒಂದು ವರ್ಷವಾಗಿದೆ, ಸರ್ಕಾರ ಅದನ್ನು ವ್ಯಾಖ್ಯಾನಿಸಿಲ್ಲ ಮತ್ತು ಅದಕ್ಕೆ ನಿಗದಿಪಡಿಸಿದ 10,000 ಕೋಟಿ ರೂಪಾಯಿಗಳನ್ನು ಹಿಂದಿರುಗಿಸಿದೆ. ಇದು ಪ್ರಧಾನಿ ನಿರುದ್ಯೋಗದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ, ದೇಶದ ಯುವಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೊಡ್ಡ ಕಾರ್ಪೊರೇಟ್ಗಳ ಮೇಲೆ ಮಾತ್ರ ಸರ್ಕಾರ ಗಮನಹರಿಸುವುದರಿಂದ, ನ್ಯಾಯಯುತ ವ್ಯವಹಾರಗಳಿಗಿಂತ ಮೋದಿಯವರು ತಮ್ಮ ಆಪ್ತಮಿತ್ರರನ್ನು ಉತ್ತೇಜಿಸುವುದರಿಂದ, ಉತ್ಪಾದನೆಗಿಂತ ತಮಗೆ ಬೇಕಾದವರ ಜೊತೆ ಸೇರಿ ಮಾತುಕತೆ ನಡೆಸುವುದರಿಂದ ಭಾರತದ ಸ್ಥಳೀಯ ಕೌಶಲ್ಯಗಳನ್ನು ನಿರ್ಲಕ್ಷಿಸುವುದರಿಂದ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಮಾರ್ಗವೆಂದರೆ ಎಂಎಸ್ ಎಂಇಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ, ನ್ಯಾಯಯುತ ಮಾರುಕಟ್ಟೆಗಳು, ಸ್ಥಳೀಯ ಉತ್ಪಾದನಾ ಜಾಲಗಳಿಗೆ ಬೆಂಬಲ ಮತ್ತು ಸರಿಯಾದ ಕೌಶಲ್ಯಗಳನ್ನು ಹೊಂದಿರುವ ಯುವಕರು, ಪ್ರಧಾನಿ ಈ ವಿಚಾರಗಳನ್ನು ಒಪ್ಪುವುದಿಲ್ಲ, ನಾನು ಪ್ರಧಾನಿ ಮೋದಿಯವರನ್ನು ನೇರವಾಗಿ ಕೇಳುತ್ತೇನೆ, ನೀವು ಘೋಷಿಸಿದ ಇಎಲ್ ಐ 10,000 ಕೋಟಿ ರೂಪಾಯಿ ಯೋಜನೆ ಎಲ್ಲಿ ಕಣ್ಮರೆಯಾಯಿತು ಎಂದು ಕೇಳಿದ್ದಾರೆ.
ನೀವು ನಮ್ಮ ನಿರುದ್ಯೋಗಿ ಯುವಕರನ್ನು ಕೈಬಿಟ್ಟಿದ್ದೀರಾ, ನೀವು ಪ್ರತಿದಿನ ಹೊಸ ಘೋಷಣೆಗಳನ್ನು ಘೋಷಿಸುತ್ತಿದ್ದರೂ ನಮ್ಮ ಯುವಕರು ಇನ್ನೂ ನಿಜವಾದ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಭಾರತಕ್ಕೆ ತೀರಾ ಅಗತ್ಯವಿರುವ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಲು ನಿಮ್ಮ ತಳಮಟ್ಟದ ಯೋಜನೆ ಏನಿದೆ, ಇದು ಮತ್ತೊಂದು ಸುಳ್ಳೇ ಎಂದು ಕೇಳಿದ್ದಾರೆ.





