ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಅಮೆರಿಕಾದ ಫೀನಿಕ್ಸ್ ನಗರದಲ್ಲಿರುವ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರದ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಭದ್ರತೆ ಕಾಪಾಡಿಕೊಳ್ಳಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವ ಅಣ್ಣಾಮಲೈ, ಭಾರತದ ಸೈನಿಕರಿಗೆ ಧೈರ್ಯ ಮತ್ತು ಶಕ್ತಿ ಸಿಗಲೆಂದು ಶ್ರೀ ಕೃಷ್ಣನ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರು.
ಅಣ್ಣಾಮಲೈ ಅವರು ಅಮೆರಿಕಾದಲ್ಲಿ ಕೆಲ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳಿಗಾಗಿ ಪ್ರವಾಸದಲ್ಲಿದ್ದ ವೇಳೆ, ಫೀನಿಕ್ಸ್ನಲ್ಲಿರುವ ಶ್ರೀ ಕೃಷ್ಣ ಮಂದಿರದ ಬಗ್ಗೆ ಸ್ಥಳೀಯ ಸಂಘಟಕರಿಂದ ಮಾಹಿತಿ ಪಡೆದರು. ಈ ಮಾಹಿತಿ ಆಧರಿಸಿ ಅವರು ದೇವಾಲಯಕ್ಕೆ ಭೇಟಿ ನೀಡಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಶ್ರೀ ಪುತ್ತಿಗೆ ಮಠದ ಶಾಖೆಯಾಗಿರುವ ಈ ಮಂದಿರದಲ್ಲಿ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆಯೊಂದನ್ನು ನೆರವೇರಿಸಿದರು.
ಶಾಸ್ತ್ರೋಕ್ತ ವಿಧಾನದಲ್ಲಿ ನಡೆದ ಈ ಪೂಜೆಯಲ್ಲಿ ನೂರಾರು ಭಾರತೀಯ ಮೂಲದ ಭಕ್ತರು ಭಾಗವಹಿಸಿದ್ದರು. ಭಕ್ತರ ನಡತೆಯಲ್ಲೂ ರಾಷ್ಟ್ರಭಕ್ತಿ ಸ್ಪಷ್ಟವಾಗಿ ಮೂಡಿಬಂದಿದ್ದು, “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಗಳೊಂದಿಗೆ ಮಂದಿರವು ದೇಶಭಕ್ತಿಯ ವಾತಾವರಣವಿತ್ತು. ಪೂಜೆಯ ಬಳಿಕ ಅಣ್ಣಾಮಲೈ ಅವರು ದೇವಾಲಯದ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಮೆರಿಕದ ಭೂಮಿಯಲ್ಲಿ ಶ್ರೀ ಕೃಷ್ಣನ ದಿವ್ಯ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ದೊರಕಿದ್ದು ನಾನೇ ಧನ್ಯ. ಈ ಪೂಜೆಯ ಮೂಲಕ ನಾವು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಶಾಲಿ ನಾಯಕತ್ವದಲ್ಲಿ ಭಾರತ ಸಮೃದ್ಧಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಜೊತೆಗೆ, ಭಾರತೀಯ ಸೇನೆಯ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿ, ಅವರಿಗೆ ಶಕ್ತಿ ತುಂಬಲಿ ಎಂದು ಕೋರಿದೆವು,” ಎಂದು ಹೇಳಿದರು.
ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಂದಿರವು ಅಮೆರಿಕಾದ ಭೂಮಿಯಲ್ಲಿ ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಪರಂಪರೆಯ ಉಳಿವಿಗೆ ಪ್ರತಿನಿಧಿಯಾಗಿದ್ದು, ವಿದೇಶದ ನೆಲೆಯಲ್ಲಿಯೂ ಭಾರತೀಯ ಆದರ್ಶಗಳನ್ನು ತಲುಪಿಸಲು ಪ್ರಮುಖ ಪಾತ್ರವಹಿಸುತ್ತಿದೆ. ಈ ಮಂದಿರವು ತನ್ನ ವಿಶಿಷ್ಟ ವಾಸ್ತುಶಿಲ್ಪ, ಸಂಪ್ರದಾಯಬದ್ಧ ಪೂಜಾ ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ಸಮುದಾಯಕ್ಕೆ ಆತ್ಮೀಯತೆ ನೀಡುತ್ತಿದೆ.





