ಕೋಲ್ಕತಾ (ಜೂನ್,21): ಕೊಲ್ಕತ್ತಾದ ಶ್ಯಾಮಪ್ರಸಾದ್ ಮುಖರ್ಜಿ ಬಂದರಿನಲ್ಲಿ ಭಾನುವಾರ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಯ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಪ್ರಧಾನಿ ಮೋದಿ ಕೊಲ್ಕತ್ತಾದಲ್ಲಿ ಮೂರು ಸ್ವದೇಶಿ ಯುದ್ಧನೌಕೆಗಳನ್ನು ಲೋಕಾರ್ಪಣೆ
ದುನಗಿರಿ, ಸನ್ಶೋಧಕ್ ಮತ್ತು ಅಗ್ರಾಯ್ ನೌಕೆಗಳು ಸೇರ್ಪಡೆ
75% ಕ್ಕೂ ಹೆಚ್ಚು ಸ್ವದೇಶಿ ತಂತ್ರಜ್ಞಾನ ಬಳಕೆ
ನೌಕಾಪಡೆಯ ಸಮುದ್ರ ಭದ್ರತೆ ಮತ್ತು ಯುದ್ಧ ಸಾಮರ್ಥ್ಯ ವೃದ್ಧಿ
ದೇಶದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಿರ್ಮಿಸಲಾದ ಈ ನೌಕೆಗಳು ‘ದುನಗಿರಿ’, ‘ಸನ್ಶೋಧಕ್’ ಮತ್ತು ‘ಅಗ್ರಾಯ್’ ಎಂಬ ಹೆಸರಿನಿಂದ ನೌಕಾಪಡೆಗೆ ಸೇರ್ಪಡೆಯಾಗಿವೆ.ಈ ಮೂರು ನೌಕೆಗಳನ್ನು ಭಾರತೀಯ ನೌಕಾಪಡೆಯ ವಾರ್ಶಿಪ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ್ದು, ಕೊಲ್ಕತ್ತಾದ ಸಾರ್ವಜನಿಕ ವಲಯದ ಪ್ರಮುಖ ರಕ್ಷಣಾ ಸಂಸ್ಥೆ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ (GRSE) ನಿರ್ಮಿಸಿದೆ. ನೌಕೆಗಳಲ್ಲಿ ಶೇಕಡಾ 75ಕ್ಕಿಂತ ಹೆಚ್ಚಿನ ಪ್ರಮಾಣದ ಸ್ವದೇಶಿ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಲಾಗಿದೆ. ಜೊತೆಗೆ 200ಕ್ಕೂ ಹೆಚ್ಚು MSME ಸಂಸ್ಥೆಗಳು ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿದೆ.
A New Chapter Begins with the commissioning of powerful symbols of Maritime Strength.
Designed, built and integrated in India, Dunagiri, Agray, and Sanshodhak, showcase the power of #AatmanirbharBharat.
From Kolkata to the Indian Ocean, India sails forward with confidence.… pic.twitter.com/B03RXWkTIw
— Ministry of Defence, Government of India (@SpokespersonMoD) June 20, 2026
‘ದುನಗಿರಿ’ಭಾರತೀಯ ನೌಕಾಪಡೆಯ ಪ್ರಮುಖ ಶಕ್ತಿ;
‘ದುನಗಿರಿ’ ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ಆಗಿದ್ದು, ಬ್ರಹ್ಮೋಸ್ ಕ್ಷಿಪಣಿಗಳು, ಮಧ್ಯಮ ವ್ಯಾಪ್ತಿಯ ಮೇಲ್ಮೈ-ವಾಯು ಕ್ಷಿಪಣಿ (MRSAM) ವ್ಯವಸ್ಥೆ ಹಾಗೂ ಸುಧಾರಿತ ಸಂವೇದಕ ತಂತ್ರಜ್ಞಾನಗಳನ್ನು ಹೊಂದಿದೆ. ದೀರ್ಘಾವಧಿಯ ಸಮುದ್ರ ಕಾರ್ಯಾಚರಣೆಗಳು ಮತ್ತು ಬಹುಆಯಾಮದ ಯುದ್ಧ ಪರಿಸ್ಥಿತಿಗಳಿಗೆ ಸೂಕ್ತವಾಗಿ ವಿನ್ಯಾಸಗೊಳಿಸಿರುವ ಈ ನೌಕೆ ಭಾರತೀಯ ನೌಕಾಪಡೆಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ.
‘ಸನ್ಶೋಧಕ್’ ದೇಶದ ನಾಲ್ಕನೇ ದೊಡ್ಡ ಸಮೀಕ್ಷಾ ಹಡಗು:
‘ಸನ್ಶೋಧಕ್’ ದೇಶದ ನಾಲ್ಕನೇ ದೊಡ್ಡ ಸಮೀಕ್ಷಾ ಹಡಗಾಗಿದ್ದು, ಕರಾವಳಿ ಹಾಗೂ ಆಳ ಸಮುದ್ರ ಪ್ರದೇಶಗಳಲ್ಲಿ ಜಲವೈಜ್ಞಾನಿಕ ಸಮೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಸಮುದ್ರದ ಭೌಗೋಳಿಕ ಮತ್ತು ಸಾಗರಶಾಸ್ತ್ರೀಯ ಮಾಹಿತಿಯನ್ನು ಸಂಗ್ರಹಿಸಲು ಅತ್ಯಾಧುನಿಕ ಸಾಧನಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸ್ವಯಂಚಾಲಿತ ಜಲಾಂತರ್ಗಾಮಿ ವಾಹನಗಳು (AUV) ಮತ್ತು ದೂರ ನಿಯಂತ್ರಿತ ವಾಹನಗಳು (ROV) ಕೂಡ ಸೇರಿವೆ.
ಅಪಾಯಗಳನ್ನು ಪತ್ತೆಹಚ್ಚುವ ಸಾವರ್ಥ್ಯ ಹೊಂದಿದ ಅಗ್ರಾಯ್:
ಅಗ್ರಾಯ್ ನೌಕೆ ಅರ್ನಾಲಾ ವರ್ಗದ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆಗಳ ಸರಣಿಯ ನಾಲ್ಕನೇ ನೌಕೆಯಾಗಿದೆ. ಹಗುರ ತೂಕದ ಟಾರ್ಪಿಡೊಗಳು, ಸ್ವದೇಶಿ ರಾಕೆಟ್ ಲಾಂಚರ್ಗಳು ಹಾಗೂ ಸುಧಾರಿತ ಸೋನಾರ್ ವ್ಯವಸ್ಥೆಗಳನ್ನು ಹೊಂದಿರುವ ಇದು ಕರಾವಳಿ ಪ್ರದೇಶಗಳಲ್ಲಿ ನೀರಿನೊಳಗಿನ ಅಪಾಯಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮೂರು ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ ಹಾಗೂ ಸಮುದ್ರ ಭದ್ರತೆ ಮತ್ತಷ್ಟು ಬಲಿಷ್ಠವಾಗಲಿದೆ.





