ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಒಬ್ಬರೇ ಒಬ್ಬ ನಾಗರಿಕನೂ ಮೃತಪಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಈ ದಾಳಿಯಲ್ಲಿ ಮೃತಪಟ್ಟ 26 ಅಮಾಯಕರಿಗೆ ನ್ಯಾಯ ಒದಗಿಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.
ಇಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, “ನಾವು ಕೇವಲ ಭಯೋತ್ಪಾದಕರನ್ನು ಮತ್ತು ಅವರ ನೆಲೆಗಳನ್ನು ಗುರಿಯಾಗಿಸಿದ್ದೇವೆ. ಪಹಲ್ಗಾಮ್ನಲ್ಲಿ ನಮ್ಮ ನಾಗರಿಕರನ್ನು ಕೊಂದವರಿಗೆ ಈ ಕಾರ್ಯಾಚರಣೆಯ ಮೂಲಕ ತಕ್ಕ ಶಿಕ್ಷೆ ನೀಡಲಾಗಿದೆ,” ಎಂದು ಹೇಳಿದರು.
ಆಪರೇಷನ್ ಸಿಂಧೂರ್ನ ಸಂಕ್ಷಿಪ್ತ ವಿವರಣೆಯನ್ನು ನೀಡಿದ ಅವರು, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ದಾಳಿಯನ್ನು ಯೋಜಿಸಿ, ನಿಖರವಾಗಿ ಜಾರಿಗೊಳಿಸಲಾಗಿದೆ. ರಾಮಾಯಣದಲ್ಲಿ ಹನುಮಾನ್ ಜೀ ಅಶೋಕವನವನ್ನು ಧ್ವಂಸಗೊಳಿಸಿದಂತೆ, ಈ ಕಾರ್ಯಾಚರಣೆಯೂ ಭಯೋತ್ಪಾದಕರ ನೆಲೆಗಳನ್ನು ಮಾತ್ರ ಗುರಿಯಾಗಿಸಿದೆ,” ಎಂದು ವಿವರಿಸಿದರು.