ಮುಂಬೈ, ಮಾ.5: ಹೋಳಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣಗಳೊಂದಿಗೆ ಆಟವಾಡುವುದು, ಪರಸ್ಪರ ಬಣ್ಣ ಎರಚುವುದು ಈ ಹಬ್ಬದ ವಿಶೇಷ. ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. 4 ವರ್ಷದ ಮೊಮ್ಮಗನ ಮೇಲೆ ಅಜ್ಜಿಯೊಬ್ಬರು ಕುದಿಯುವ ಬಿಸಿನೀರು ಸುರಿದ ಘಟನೆ ನಡೆದಿದೆ.
ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ಅವನದೇ ಅಜ್ಜಿ ಕುದಿಯುವ ಬಿಸಿನೀರನ್ನು ಸುರಿದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾರ್ಚ್ 3 ರಂದು ಓಂ ಹರೀಶ್ ವಂಗೆ ಎಂಬ ನಾಲ್ಕು ವರ್ಷದ ಬಾಲಕ ತನ್ನ ಮನೆಯ ಹೊರಭಾಗದಲ್ಲಿ ಬಣ್ಣದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಹೋಳಿ ಹಬ್ಬದ ಸಂಭ್ರಮದಲ್ಲಿ ಅವನು ಸುತ್ತಮುತ್ತಲಿನವರ ಮೇಲೆ ಬಣ್ಣ ಎರಚುತ್ತಾ ಖುಷಿಪಡುತ್ತಿದ್ದನು. ಇದೇ ವೇಳೆ ಆಕಸ್ಮಿಕವಾಗಿ ಅವನ ಅಜ್ಜಿ ಸಿಂಧು ಠಾಕ್ರೆ ಅವರ ಮೇಲೆ ಬಣ್ಣ ಎರಚಿದ್ದಾನೆ.
ಕೋಪಗೊಂಡ ಅಜ್ಜಿ ಸಿಂಧು ಠಾಕ್ರೆ ಮನೆಯೊಳಗಿದ್ದ ಬಕೆಟ್ನಲ್ಲಿ ಕುದಿಯುತ್ತಿದ್ದ ಬಿಸಿನೀರನ್ನು ತೆಗೆದುಕೊಂಡು ಬಾಲಕನ ಮೇಲೆ ಸುರಿದಿದ್ದಾರೆ. ಬಿಸಿನೀರು ಸುರಿದ ತಕ್ಷಣ ಬಾಲಕ ನೋವಿನಿಂದ ವಿಲವಿಲನೆ ಒದ್ದಾಡುತ್ತಾ ಕಿರುಚುತ್ತಾ ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಸಿನೀರು ಸುರಿದ ಪರಿಣಾಮ ಬಾಲಕನ ಸೊಂಟದ ಕೆಳಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ವೈದ್ಯರ ಪ್ರಕಾರ, ಬಾಲಕನಿಗೆ ಸುಟ್ಟ ಗಾಯಗಳಾಗಿದ್ದು, ಅವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಕುಟುಂಬದವರು ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಅವನನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
What a MONSTER B!TCH 😡
Goes Full Psycho; Pours boiling Hot Water on 5yr Old kid because he wanted to play Holi with her 🤬 pic.twitter.com/1LuFLcrwcW— Mihir Jha (@MihirkJha) March 4, 2026
ಈ ಅಮಾನವೀಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. “ಹಬ್ಬದ ದಿನವೇ ಇಂತಹ ಕ್ರೂರತೆ ತೋರಿರುವುದು ಮಾನವೀಯತೆಗೆ ವಿರುದ್ಧವಾಗಿದೆ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ಕೋರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜ್ಜಿ ಸಿಂಧು ಠಾಕ್ರೆ ವಿರುದ್ಧ ಮಕ್ಕಳ ಮೇಲಿನ ಕ್ರೌರ್ಯ ಹಾಗೂ ಹಲ್ಲೆ ಪ್ರಕರಣದಡಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.





