ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲು ಪೊಲೀಸರು ಸೂಚನೆ ನೀಡಿದ್ದಕ್ಕೆ ಕಲ್ಲು ತೂರಾಟ ಮಾಡಲಾಗಿದೆ. ಶುಕ್ರವಾರ ರಾತ್ರಿ ನಯಾ ಮೊಹಲ್ಲಾದಲ್ಲಿ ಪೊಲೀಸ್ ಹೊರಠಾಣೆ ಮೇಲೆ ದಾಳಿ ನಡೆಸಿದ ಗುಂಪೊಂದು, ವ್ಯಾಪಕ ಕಲ್ಲು ತೂರಾಟ ಮತ್ತು ಧ್ವಂಸಕ್ಕೆ ಮುಂದಾಗಿದೆ.
ಘಟನೆ ಹೇಗೆ ಆರಂಭವಾಯಿತು?
ಅಸನ್ಸೋಲ್ನ ಜಹಾಂಗಿರಿ ಮೊಹಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ರೈಲ್ಪರ್ ಪ್ರದೇಶಕ್ಕೆ ಆಗಮಿಸಿ, ಮಸೀದಿ ಮತ್ತು ದೇವಾಲಯಗಳಲ್ಲಿ ಧ್ವನಿವರ್ಧಕಗಳ ಧ್ವನಿಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಈ ಸೂಚನೆಯನ್ನು ಮಸೀದಿ ಸಮಿತಿಗೆ ತಿಳಿಸಲು ಪೊಲೀಸರು ಹೋದಾಗ, ಶುಕ್ರವಾರದ ಪ್ರಾರ್ಥನೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಹರಡಿತು.
ವದಂತಿಯಿಂದ ಆಕ್ರೋಶಗೊಂಡ ಗುಂಪೊಂದು ಪೊಲೀಸ್ ಹೊರಠಾಣೆಗೆ ಮುತ್ತಿಗೆ ಹಾಕಿತು. ಮಸೀದಿ ಸಮಿತಿ ಸದಸ್ಯರು ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ ಹಿಂಸಾಚಾರ ಭುಗಿಲೆದ್ದಿತು. ಗಲಭೆಕೋರರು ಕಲ್ಲು ತೂರಾಟ ಆರಂಭಿಸಿದರು, ಪೊಲೀಸ್ ಠಾಣೆಯೊಳಗೆ ನುಗ್ಗಿ ವ್ಯಾಪಕ ವಿಧ್ವಂಸಕ ಕೃತ್ಯಗಳನ್ನು ಎಸಗಿದರು.
ಪೊಲೀಸ್ ಠಾಣೆ ಮತ್ತು ವಾಹನಗಳು ಧ್ವಂಸ
ಗಲಭೆಕೋರರು ಪೊಲೀಸ್ ಠಾಣೆಯ ಒಳಗಿನ ಎಲ್ಲವನ್ನೂ ಧ್ವಂಸಗೊಳಿಸಿದರು. ಕಚೇರಿ ಪೀಠೋಪಕರಣಗಳು, ಕಂಪ್ಯೂಟರ್ಗಳು, ದಾಖಲೆಗಳು – ಎಲ್ಲವನ್ನೂ ನಾಶಪಡಿಸಲಾಯಿತು. ಠಾಣೆಯ ಹೊರಗೆ ನಿಲ್ಲಿಸಿದ್ದ ಪೊಲೀಸ್ ವಾಹನಗಳು ಮತ್ತು ಸುತ್ತಮುತ್ತಲಿನ ಬೀದಿಗಳಲ್ಲಿದ್ದ ಸಾರ್ವಜನಿಕ ವಾಹನಗಳಿಗೂ ಹಾನಿಯುಂಟುಮಾಡಲಾಯಿತು. ದಾಳಿಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ಘಟನೆ ವರದಿಯಾದ ಕೂಡಲೇ, ಹೆಚ್ಚುವರಿ ಪೊಲೀಸ್ ಪಡೆ ಮತ್ತು ಕೇಂದ್ರ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ದಾಳಿಕೋರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆ, ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಹಲವಾರು ಗಲಭೆಕೋರರನ್ನು ಬಂಧಿಸಲಾಗಿದ್ದು, ಇನ್ನುಳಿದವರ ಗುರುತಿಗಾಗಿ ತನಿಖೆ ನಡೆಯುತ್ತಿದೆ.
ಸ್ಥಳೀಯ ಶಾಸಕರ ಹೇಳಿಕೆ
ಅಸನ್ಸೋಲ್ ಉತ್ತರ ಶಾಸಕ ಕೃಷ್ಣೇಂದು ಮುಖರ್ಜಿ ಮಾತನಾಡಿ, “ಮಸೀದಿಯ ಆವರಣದಲ್ಲಿ ಧ್ವನಿವರ್ಧಕದ ಸೌಂಡ್ ಅನ್ನು ಕಡಿಮೆ ಮಾಡುವಂತೆ ಮಸೀದಿ ಸಮಿತಿಯನ್ನು ಕೇಳಿಕೊಳ್ಳಲು ಪೊಲೀಸರು ಹೋಗಿದ್ದರು. ಆದರೆ ಶುಕ್ರವಾರದ ಪ್ರಾರ್ಥನೆಯನ್ನು ನಿಲ್ಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಯೇ ಹಿಂಸಾಚಾರಕ್ಕೆ ಕಾರಣವಾಯಿತು” ಎಂದು ತಿಳಿಸಿದ್ದಾರೆ.





