ಲಕ್ನೋ: ಇತ್ತೀಚಗೆ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾಗಶಃ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಕುಟುಂಬದಿಂದ ತೊಂದರೆಯಾಗುವುದು ಸಾಮಾನ್ಯವಾಗಿದೆ. ಕೆಲವು ಕುಟುಂಬಸ್ತರು ಮರ್ಯಾದ ಹತ್ಯೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಆತಂಕಕಾರಿ.
ಪ್ರೀತಿಸಿ ಹೆತ್ತವರ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇರುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಸ್ವಂತ ಇಚ್ಛೆಯಿಂದ ವಿವಾಹವಾಗುವ ಜೋಡಿಗೆ ಯಾವುದೇ ಬೆದರಿಕೆ ಇದ್ದರೆ, ಪೊಲೀಸ್ ರಕ್ಷಣೆಯನ್ನು ಹಕ್ಕಿನ ವಿಷಯವಾಗಿ ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಇತ್ತೀಚಗೆ ರಕ್ಷಣೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.
ಹೌದು, ಅರ್ಹ ಪ್ರಕರಣದಲ್ಲಿ ದಂಪತಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು. ಆದರೆ, ಯಾವುದೇ ಗಂಭೀರ ಸ್ವರೂಪದ ಬೆದರಿಕೆ ಇಲ್ಲದಿದ್ದಾಗ, ಅಂತಹ ದಂಪತಿ ಸಮಾಜವನ್ನು ಎದುರಿಸಿ ನಿಲ್ಲುವುದನ್ನು ಕಲಿಯಬೇಕು ಎಂದು ತಿಳಿಸಿದೆ.
ಪೊಲೀಸ್ ರಕ್ಷಣೆ ಮತ್ತು ಪೋಷಕರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ಕೋರಿ ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಪ್ರಕರಣದಲ್ಲಿ ದಂಪತಿಗೆ ಯಾವುದೇ ಗಂಭೀರ ಸ್ವರೂಪದ ಬೆದರಿಕೆ ಇಲ್ಲ ಎಂದು ಗಮನಿಸಿ ಅವರ ರಿಟ್ ಅರ್ಜಿಯನ್ನು ವಜಾ ಮಾಡಿದೆ.
ಲತಾ ಸಿಂಗ್ Vs ಉತ್ತರ ಪ್ರದೇಶ ರಾಜ್ಯ ಪ್ರಕರಣ ಮತ್ತು ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ರಕ್ಷಣೆ ನೀಡಲು ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ. ತಮ್ಮ ಸ್ವಂತ ಇಚ್ಛೆಯಂತೆ ಮದುವೆಯಾಗಲು ಓಡಿಹೋದವರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಟಷ್ಟಪಡಿಸಿದೆ.





