ನವದೆಹಲಿ: 77ನೇ ಗಣರಾಜೋತ್ಸವದ ಹಿನ್ನೆಲೆ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಭವ್ಯ ಪರೇಡ್ಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಭದ್ರತೆ ತೀವ್ರಗೊಳಿಸಿದ್ದಾರೆ. ಜನವರಿ 26ರಂದು ಲಕ್ಷಾಂತರ ಜನರು ಭಾಗವಹಿಸುವ ಈ ಮಹತ್ವದ ಸಮಾರಂಭದ ಭದ್ರತೆಗಾಗಿ ದೆಹಲಿ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ.
ಈ ಬಾರಿ ಮೊದಲ ಬಾರಿಗೆ ದೆಹಲಿ ಪೊಲೀಸರು AI ಸಕ್ರಿಯಗೊಂಡ ಸ್ಮಾರ್ಟ್ ಕನ್ನಡಕಗಳು ಹಾಗೂ ಉನ್ನತ ಮಟ್ಟದ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಕಾರ್ಯಾಚರಣೆಯಲ್ಲಿ ಬಳಸುತ್ತಿದ್ದಾರೆ. ಇದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಈ ತಂತ್ರಜ್ಞಾನವು ಅನುಮಾನಾಸ್ಪದ ವ್ಯಕ್ತಿಗಳು, ಅಪರಾಧ ಹಿನ್ನೆಲೆ ಹೊಂದಿರುವವರು ಮತ್ತು ಕಳ್ಳತನಗೊಂಡ ವಾಹನಗಳನ್ನು ಕ್ಷಣಾರ್ಧದಲ್ಲಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.
AI ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆ ಮುಖದ ವಿನ್ಯಾಸ, ಕಣ್ಣು, ಮೂಗು, ಗಡ್ಡ, ಕೂದಲು ಶೈಲಿ, ಮುಖ ಮುಚ್ಚುವಿಕೆ, ಟೋಪಿ ಅಥವಾ ಮೆಕಪ್ ಇದ್ದರೂ ವ್ಯಕ್ತಿಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಾವಿರಾರು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಈ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆಗೆ ಸಂಪರ್ಕಿಸಲಾಗಿದೆ. ಇದರ ಮೂಲಕ ನವದೆಹಲಿ ಮತ್ತು ಕರ್ತವ್ಯ ಪಥದ ಸುತ್ತಮುತ್ತಲ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ.
ಸುಮಾರು 10,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅರೆಸೈನಿಕ ಪಡೆಗಳು, ಕಮಾಂಡೋ ತಂಡಗಳು, ಆಂಟಿ-ಡ್ರೋನ್ ಘಟಕಗಳು ಮತ್ತು ಕಟ್ಟಡಗಳ ಮೇಲ್ಭಾಗದಲ್ಲಿ ನಿಯೋಜಿಸಲಾದ ಸ್ನೈಪರ್ ತಂಡಗಳು ಭದ್ರತೆಯಲ್ಲಿ ಭಾಗವಹಿಸುತ್ತಿವೆ. ಯಾವುದೇ ಅನಾಹುತ ಸಂಭವಿಸದಂತೆ ಕಠಿಣ ನಿಗಾವಹಿಸಲಾಗುತ್ತಿದೆ. ಡ್ರೋನ್ಗಳ ಮೂಲಕ ಅಕ್ರಮ ಚಟುವಟಿಕೆ ನಡೆಯದಂತೆ ತಡೆಯಲು ವಿಶೇಷ ತಂತ್ರಜ್ಞಾನ ಬಳಕೆಯಲ್ಲಿದೆ.
ಇದಕ್ಕೆ ಪೂರಕವಾಗಿ, ಗುಪ್ತಚರ ಸಂಸ್ಥೆಗಳ ಮಾಹಿತಿ ಆಧಾರದಲ್ಲಿ ದೆಹಲಿ ಪೊಲೀಸರು ಕೆಲವು ಭಯೋತ್ಪಾದನಾ ಶಂಕಿತರ ಚಿತ್ರಗಳನ್ನು ಒಳಗೊಂಡ ಅಲರ್ಟ್ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ಆತ ಅಲ್-ಖೈದಾ ಇನ್ ಇಂಡಿಯನ್ ಸಬ್ಕಾಂಟಿನೆಂಟ್ (AQIS) ಸಂಘಟನೆಯ ಸದಸ್ಯ ಎನ್ನಲಾಗಿದೆ. ಗಣರಾಜೋತ್ಸವದ ದಿನ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸಮಾರಂಭ ಸ್ಥಳಕ್ಕೆ ಬರುವ ನಾಗರಿಕರಿಗೂ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಬ್ಯಾಗ್, ಆಹಾರ-ಪಾನೀಯ, ನೀರಿನ ಬಾಟಲ್, ಪವರ್ ಬ್ಯಾಂಕ್, ಛತ್ರಿ, ಪರ್ಪ್ಯೂಮ್, ಬ್ರಿಫ್ಕೇಸ್, ಯಾವುದೇ ಲೋಹದ ವಸ್ತುಗಳು, ಚೂಪಾದ ಉಪಕರಣಗಳು, ಉರಿಯಬಹುದಾದ ವಸ್ತುಗಳು ಹಾಗೂ ಸ್ಪೋಟಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕರ್ತವ್ಯ ಪಥದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ವಿಧಿಸಲಾಗಿದ್ದು, ಜನಸಂದಣಿ ನಿಯಂತ್ರಣಕ್ಕಾಗಿ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.





