ಧಾರವಾಡ: ಭಾರತವು 12ನೇ ಶತಮಾನದಲ್ಲಿ ವಿಶ್ವಗುರುವಾಗಿತ್ತು. ಆದರೆ ಕಾಲಕ್ರಮೇಣ ನಾವು ನಮ್ಮ ಮೌಲ್ಯಗಳನ್ನು ಕಳೆದುಕೊಂಡು ಹಿಂದುಳಿದಿದ್ದೇವೆ. ಇದೀಗ ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಪ್ರೇರಣೆ ಪಡೆದು ಭಾರತವು ಮತ್ತೆ ವಿಶ್ವದಲ್ಲಿ 4ನೇ ಸ್ಥಾನಕ್ಕೇರಿದೆ. ಮುಂದಿನ ದಿನಗಳಲ್ಲಿ ಭಾರತವನ್ನು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಸಮಾಜ ಸೇವಕರು ಹಾಗೂ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಡಾ. ಸಿ.ಹೆಚ್.ವಿ.ಎಸ್.ವಿ ಪ್ರಸಾದ್ ಹೇಳಿದರು.
ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಂಸ್ಕೃತ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ “ವಿವೇಕ ಪ್ರತಿಭಾ ಪುರಸ್ಕಾರ ಸಮಾರಂಭ” ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ತಾವು ನಡೆದು ಬಂದ ಹಾದಿ, ಅನುಭವಿಸಿದ ಸವಾಲುಗಳು ಹಾಗೂ ಸಾಧನೆಯ ಪಯಣವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ತಮ್ಮ ಹೆಜ್ಜೆ ಗುರುತುಗಳನ್ನು ಅನುಸರಿಸಿ ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು. ಅವರ ಮಾತುಗಳಿಂದ ವಿದ್ಯಾರ್ಥಿಗಳು ಪ್ರೇರಿತರಾದರು.
ವಿದ್ಯಾರ್ಥಿಗಳು ಕೇವಲ 98% ಅಥವಾ 99% ಅಂಕಗಳನ್ನು ಪಡೆಯುವುದೇ ಜೀವನದ ಗುರಿಯಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. “ನಾನು ಯಾರಿಗೂ ತೋರಿಸಿಕೊಳ್ಳಲು ಕೆಲಸ ಮಾಡುವುದಿಲ್ಲ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂಬ ನಂಬಿಕೆಯಿಂದ ಒಳ್ಳೆಯ ಕೆಲಸ ಮಾಡುತ್ತೇನೆ” ಎಂಬ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಸತ್ಯನಿಷ್ಠೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಮನದಟ್ಟು ಮಾಡಿದರು.
ಇದೇ ವಿದ್ಯಾರ್ಥಿಗಳ ಜೀವನದ ಮಹತ್ವದ ತಿರುವಾಗಿದ್ದು, ಯಾವುದೇ ನಿರ್ಧಾರವನ್ನು ಒತ್ತಡಕ್ಕೆ ಒಳಗಾಗಿ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ತಂದೆ-ತಾಯಿಯನ್ನು ಗೌರವಿಸುವುದು ಹಾಗೂ ಸ್ವಾವಲಂಬನೆ ಬೆಳೆಸಿಕೊಳ್ಳುವುದು ಇಂದಿನ ಯುವಕರಿಗೆ ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು 260 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 211 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಎಚ್. ವಿ. ಡಂಬಳೆ ಅವರು ವಿದ್ಯಾರ್ಥಿಗಳ ನಡತೆ, ಸಂಸ್ಕೃತಿ ಮತ್ತು ಶಿಸ್ತಿನ ಮಹತ್ವವನ್ನು ವಿವರಿಸಿದರು. ಉತ್ತಮ ಸಂಸ್ಕಾರ ಹಾಗೂ ಸನ್ನಡತೆ ವ್ಯಕ್ತಿಯ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಜ್ಯೋತಿ ಪಾಟೀಲ್ ಮಾತನಾಡಿ, ಭಾರತದ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ದೇಶದ ಅಭಿವೃದ್ಧಿಗೆ ಯುವಜನತೆ ಜ್ಞಾನ, ಸಂಸ್ಕಾರ ಮತ್ತು ದೇಶಭಕ್ತಿಯೊಂದಿಗೆ ಮುಂದಾಗಬೇಕು ಎಂದು ಹೇಳಿದರು.
ಯುವ ವೈದ್ಯರು ಹಾಗೂ ಸಮಾಜ ಸೇವಕ ಡಾ. ಆದರ್ಶ್ ಜಿ.ಎಸ್ ಅವರು, ದಿ.ವಿ.ಜಿ ಅವರ ಚಿಂತನೆಗಳು ಹಾಗೂ ಮೌಲ್ಯಾಧಾರಿತ ಬದುಕಿನ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಫೌಂಡೇಷನ್ ಸಂಸ್ಥಾಪಕ ಶಿವಕುಮಾರ್ ರಟಿಹಳಿ , ಉಪಾಧ್ಯಕ್ಷ ವಿದ್ಯಾನಂದ ಸ್ಟಾವರ್ಮಠ್, ಶಿವಯೋಗಿ ಹಾವೇರಿ, ಚಂದ್ರು, ಅಶ್ವಿನಿ ಅಂಗಡಿ, ಶಿಕ್ಷಕರು, ಪೆÇೀಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.




