ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ದಂಪತಿಯ ಮೊಬೈಲ್ ಫೋನ್ ಹ್ಯಾಕ್ ಪ್ರಕರಣದಲ್ಲಿ ಬಿಹಾರ ಮೂಲದ ಹ್ಯಾಕರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಕಾಸ್ ಕುಮಾರ್ ಎಂಬುವವನನ್ನು ಅರೆಸ್ಟ್ ಮಾಡಲಾಗಿದೆ.
ಉಪೇಂದ್ರ ಅವರ ಮೊಬೈಲ್ ಸಂಖ್ಯೆಯಿಂದ ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಅಭಿಮಾನಿಗಳ ಮೊಬೈಲ್ಗೆ “ಅರ್ಜೆಂಟ್ ಹಣ ಬೇಕು, ಈ ಖಾತೆಗೆ ಕಳುಹಿಸಿ” ಎಂಬ ರೀತಿಯ ಸಂದೇಶಗಳು ಬರುತ್ತಿದ್ದವು. ಇದೇ ರೀತಿ ಪ್ರಿಯಾಂಕಾ ಅವರ ಸಂಖ್ಯೆಯಿಂದಲೂ ಮೆಸೇಜ್ಗಳು ಹೋಗುತ್ತಿದ್ದವು. ಆದರೆ ಈ ಸಂದೇಶಗಳನ್ನು ಕಳುಹಿಸುತ್ತಿದ್ದವರು ಉಪೇಂದ್ರ ಅಥವಾ ಪ್ರಿಯಾಂಕಾ ಅಲ್ಲ, ಬದಲಿಗೆ ಅವರ ಫೋನ್ ಸಂಖ್ಯೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.
ಈ ಬಗ್ಗೆ ಮಾಹಿತಿ ಬಂದ ತಕ್ಷಣ ಉಪೇಂದ್ರ ದಂಪತಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದ್ದರು. “ನನ್ನ ಮತ್ತು ನನ್ನ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಸಂಖ್ಯೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ನಮ್ಮ ಹೆಸರಿನಲ್ಲಿ ಯಾರಿಗೂ ಮೆಸೇಜ್ ಕಳುಹಿಸಿ ಹಣ ಕೇಳುತ್ತಿದ್ದಾರೆ. ದಯವಿಟ್ಟು ಯಾರೂ ಹಣ ವರ್ಗಾಯಿಸಬೇಡಿ. ಇದು ಹ್ಯಾಕ್ ಆಗಿದೆ” ಎಂದು ಉಪೇಂದ್ರ ಆ ವೀಡಿಯೊದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತಕ್ಷಣವೇ ಉಪೇಂದ್ರ ದಂಪತಿಗಳು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಸೈಬರ್ ತಜ್ಞರ ಸಹಾಯ ಪಡೆದು ತಾಂತ್ರಿಕ ತನಿಖೆ ನಡೆಸಿದಾಗ, ಹ್ಯಾಕಿಂಗ್ ಹಿಂದೆ ಬಿಹಾರ ಮೂಲದ ಆರೋಪಿಗಳಿದ್ದಾರೆ ಎಂಬ ಮಾಹಿತಿ ದೊರಕಿತು. ಈ ತಂಡವು ಸಿಮ್ ಕಾರ್ಡ್ ಕ್ಲೋನಿಂಗ್ ಮತ್ತು ಒಟಿಪಿ ಹ್ಯಾಕಿಂಗ್ ತಂತ್ರಗಳನ್ನು ಬಳಸಿಕೊಂಡು ಉಪೇಂದ್ರ ದಂಪತಿಗಳ ಫೋನ್ ಸಂಖ್ಯೆಗಳ ಮೇಲೆ ನಿಯಂತ್ರಣ ಸಾಧಿಸಿದ್ದರು.
ತನಿಖೆಯನ್ನು ತೀವ್ರಗೊಳಿಸಿದ ಸದಾಶಿವನಗರ ಪೊಲೀಸರು ವಿಶೇಷ ತಂಡ ರಚಿಸಿ ಬಿಹಾರಕ್ಕೆ ಕಳುಹಿಸಿದರು. ಬಿಹಾರದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಡೆಸಿದ ದಾಳಿಯಲ್ಲಿ ಮುಖ್ಯ ಆರೋಪಿ ವಿಕಾಸ್ ಕುಮಾರ್ನ್ನು ಬಂಧಿಸಲಾಯಿತು. ಆತನ ಬಳಿ ಹಲವು ಸಿಮ್ ಕಾರ್ಡ್ಗಳು, ಮೊಬೈಲ್ ಫೋನ್ಗಳು ಮತ್ತು ಹ್ಯಾಕಿಂಗ್ಗೆ ಬಳಸುತ್ತಿದ್ದ ಉಪಕರಣಗಳು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದು ಏನೆಂದರೆ, ವಿಕಾಸ್ ಕುಮಾರ್ ಮತ್ತು ಆತನ ತಂಡವು ದೇಶದಾದ್ಯಂತ ಹಲವು ಪ್ರಮುಖ ವ್ಯಕ್ತಿಗಳ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಿ, ಅವರ ಸಂಪರ್ಕ ಪಟ್ಟಿಯಲ್ಲಿರುವವರಿಂದ ಹಣ ವಸೂಲಿ ಮಾಡುತ್ತಿದ್ದರು.





