ಬೆಂಗಳೂರು, (ಜುಲೈ 29): ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚನೆ ನೀಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಕುಡಿಯುವ ಕಾವೇರಿ ನೀರಿನ ದುರ್ಬಳಕೆಯ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಠಿಣ ಕ್ರಮ ಕೈಗೊಂಡಿದೆ.
- ಕಾವೇರಿ ನೀರು ದುರ್ಬಳಕೆ ಮಾಡಿದ 692 ಮಂದಿಗೆ ಬೆಂಗಳೂರು ಜಲಮಂಡಳಿ ದಂಡ
- ತಲಾ ₹5,000ರಂತೆ ಒಟ್ಟು ₹34.60 ಲಕ್ಷ ದಂಡ ವಸೂಲಿ
- ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರು ಬಳಸಿದವರ ವಿರುದ್ಧ ಕ್ರಮ.
ನಗರದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿದ ಜಲಮಂಡಳಿ ಅಧಿಕಾರಿಗಳು, ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಬಳಸಿದ್ದ 692 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ತಲಾ 5,000 ರೂ ಗಳಂತೆ ಒಟ್ಟು 34.60 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ವಲಯವಾರು ಪರಿಶೀಲನೆಯಲ್ಲಿ ದಕ್ಷಿಣ ವಲಯದಲ್ಲಿ 206 ಮಂದಿ, ಪಶ್ಚಿಮ ವಲಯದಲ್ಲಿ 165 ಮಂದಿ, ಕೇಂದ್ರ ವಲಯದಲ್ಲಿ 135 ಮಂದಿ, ಪೂರ್ವ ವಲಯದಲ್ಲಿ 100 ಮಂದಿ ಹಾಗೂ ಉತ್ತರ ವಲಯದಲ್ಲಿ 86 ಮಂದಿ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಕಾವೇರಿ ನೀರಿನ ಕೊರತೆ ಹಿನ್ನೆಲೆ ಕುಡಿಯುವ ನೀರನ್ನು ಅತ್ಯಗತ್ಯ ಬಳಕೆಗಳಿಗೆ ಮಾತ್ರ ಬಳಸುವಂತೆ ಜಲಮಂಡಳಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಜುಲೈ 31ರಂದು ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ
ಇದರ ನಡುವೆ, ಕಾವೇರಿ ನೀರು ಸರಬರಾಜು ಯೋಜನೆ–5ನೇ ಹಂತದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 31ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ಸಂಬಂಧಿತ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು BWSSB ಪ್ರಕಟಿಸಿದೆ.
ನಿರ್ವಹಣಾ ಕಾಮಗಾರಿಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಈ ಅವಧಿಯಲ್ಲಿ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು, ಲಭ್ಯವಿರುವ ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸುವಂತೆ ಜಲಮಂಡಳಿ ಮನವಿ ಮಾಡಿದೆ.
ನಗರದ ನಿರಂತರ ಮತ್ತು ವಿಶ್ವಾಸಾರ್ಹ ನೀರು ಪೂರೈಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಲಮಂಡಳಿ ತಿಳಿಸಿದೆ.





