ಚಿಕ್ಕಮಗಳೂರು, ಜೂನ್ 30: ಕಾಫಿನಾಡು ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಸಾಧಾರಣ ಮಳೆಯಿಂದಾಗಿ ಈ ವರ್ಷ ಮೊದಲ ಬಾರಿಗೆ ತುಂಗಾ ನದಿ (Tunga River) ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಕುದುರೆಮುಖ, ಕೆರೆಕಟ್ಟೆ ಮತ್ತು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ನಾಡಿನ ಜೀವನದಿಯಾದ ತುಂಗಾ ನದಿಯ ಹರಿವಿನ ಪ್ರಮಾಣ ರಾತ್ರೋರಾತ್ರಿ ಹೆಚ್ಚಾಗಿದೆ. ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತರು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ..
ಶೃಂಗೇರಿಯಲ್ಲಿ ತುಂಗಾ ನದಿ ಉಕ್ಕಿಹರಿದಿದೆ
ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಬಳಿ ತುಂಗಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ. ನಿನ್ನೆ ಮಧ್ಯಾಹ್ನದಿಂದಲೂ ಶೃಂಗೇರಿ, ಕೆರೆಕಟ್ಟೆ ಮತ್ತು ಸುತ್ತಮುತ್ತಲಿನ ಘಟ್ಟಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ತುಂಗಾ ನದಿಗೆ ನೀರಿನ ಆಗಮನ ಹೆಚ್ಚಾಗಿದೆ. ಈ ವೇಳೆಗಾಗಲೇ ತುಂಬಿ ಹರಿಯಬೇಕಿದ್ದ ನದಿಗಳು ಬರಿದಾಗಿದ್ದವು. ಆದರೆ, ಈಗ ಸುರಿದ ಮಳೆಯು ನದಿಯ ಒಡಲಿಗೆ ಹೊಸ ಜೀವವನ್ನು ತುಂಬಿದೆ.
3-4 ದಶಕಗಳ ಬಳಿಕ ಜೂನ್ ಅಂತ್ಯದಲ್ಲಿ ಬಿರುಬಿಸಿಲು
ಕಳೆದ 3-4 ದಶಕಗಳಲ್ಲಿ ಮೊದಲ ಬಾರಿಗೆ ಜೂನ್ ಅಂತ್ಯದ ವೇಳೆಗೆ ಮಲೆನಾಡಿನಲ್ಲಿ ಬಿರುಬಿಸಿಲು ಕಂಡುಬಂದಿತ್ತು. ಇದರಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬೇಸಿಗೆ ಮುಗಿದರೂ ಮಳೆಯ ಮುನ್ಸೂಚನೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತರ್ಜಲ ಕುಸಿದು, ಬೆಳೆಗಳು ಒಣಗುವ ಸ್ಥಿತಿ ತಲುಪಿತ್ತು. ಆದರೆ, ನಿನ್ನೆಯಿಂದ ಪ್ರಾರಂಭವಾದ ಸಾಧಾರಣ ಮಳೆಯು ಮಲೆನಾಡಿನ ಜನರ ಬದುಕಿನಲ್ಲಿ ಭರವಸೆಯನ್ನು ಮೂಡಿಸಿದೆ. ನದಿಗಳು, ತೊರೆಗಳು ಮತ್ತು ಕೆರೆಗಳಿಗೆ ನೀರು ತುಂಬುತ್ತಿರುವ ದೃಶ್ಯ ಈಗ ಕಂಗೊಳಿಸುತ್ತಿದೆ.
ಭದ್ರಾ ನದಿಯ ಅಬ್ಬರಕ್ಕೆ ಕ್ರೇನ್ ಮುಳುಗಿದ ಘಟನೆ
ತುಂಗಾ ನದಿಯ ಜೊತೆಗೆ ಭದ್ರಾ ನದಿಯಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಭದ್ರಾ ನದಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ನದಿ ದಡದಲ್ಲಿ ಕ್ರೇನ್ ಅನ್ನು ಬಿಟ್ಟು ಹೋಗಲಾಗಿತ್ತು. ನೀರು ಕಡಿಮೆ ಇದ್ದ ಕಾರಣ ಚಾಲಕರು ಕ್ರೇನ್ ಅನ್ನು ನದಿಯಲ್ಲೇ ಬಿಟ್ಟು ಹೋಗಿದ್ದರು. ಆದರೆ, ನಿನ್ನೆಯಿಂದ ಸುರಿದ ನಿರಂತರ ಮಳೆಯಿಂದ ನದಿಯ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕ್ರೇನ್ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದೆ. ಅಧಿಕಾರಿಗಳು ಈಗ ಕ್ರೇನ್ ಅನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಲೆನಾಡಿನ ಐದು ತಾಲೂಕುಗಳಲ್ಲಿ ಮಳೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಐದು ತಾಲೂಕುಗಳಲ್ಲಿ ಕುದುರೆಮುಖ, ಕಳಸ, ಶೃಂಗೇರಿ, ಮೂಡಿಗೆರೆ ಮತ್ತು ನರಸಿಂಹರಾಜಪುರ ಉತ್ತಮ ಮಳೆಯಾಗಿದೆ. ಈ ತಾಲೂಕುಗಳಲ್ಲಿನ ಕೆರೆಗಳು, ಕುಂಟೆಗಳು ಮತ್ತು ಅಣೆಕಟ್ಟುಗಳಿಗೂ ನೀರು ಹರಿದು ಬರುತ್ತಿದೆ. ರೈ





