ಶಿವಮೊಗ್ಗ : ಕಾರು ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದಲ್ಲಿ ನಡೆದಿದೆ. ರಿಪ್ಪನ್ಪೇಟೆಯ ನಿವಾಸಿಯಾದ ಕಬೀರ್ (54) ಎಂಬುವವರು ಮೃತ ದುರ್ದೈವಿಯಾಗಿದ್ದಾರೆ.
ಕಬೀರ್ ಅವರು ರಿಪ್ಪನ್ಪೇಟೆಯಿಂದ ಶಿವಮೊಗ್ಗಕ್ಕೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಯನೂರು ಸರ್ಕಲ್ ಬಳಿ ತಲುಪಿದಾಗ, ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ, ಕಬೀರ್ ಅವರು ತಮ್ಮ ಪಕ್ಕದ ಸೀಟಿನಲ್ಲಿದ್ದ ಸಹಪ್ರಯಾಣಿಕನಿಗೆ ಎದೆನೋವಿನ ಕುರಿತು ತಿಳಿಸಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಅವರಿಗೆ ಪ್ರಜ್ಞೆ ತಪ್ಪಿತ್ತು, ಅವರು ಕಾರು ಚಲಾಯಿಸುತ್ತಿರುವಾಗಲೇ ಕುಸಿದು ಬಿದ್ದರು. ಈ ಸಂದರ್ಭದಲ್ಲಿ, ಸಹಪ್ರಯಾಣಿಕ ತಕ್ಷಣವೇ ಕಾರನ್ನು ನಿಯಂತ್ರಿಸಿ, ರಸ್ತೆಯ ಒಂದು ಬದಿಗೆ ತಂದು ನಿಲ್ಲಿಸಿದ್ದಾರೆ. ಇದರಿಂದ ದೊಡ್ಡ ಅನಾಹುತವೇ ತಪ್ಪಿತ್ತು.
ಸ್ಥಳೀಯರು ತಕ್ಷಣ ಕಬೀರ್ ಅವರನ್ನು ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ, ಕಬೀರ್ ಅವರ ಕುಟುಂಬಸ್ಥರು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದೊಯ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಕಬೀರ್ ಅವರನ್ನು ಪರೀಕ್ಷಿಸಿದಾಗ, ಅವರು ಈಗಾಗಲೇ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಹೃದಯಾಘಾತವೇ ಕಬೀರ್ ಅವರ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.