ಪತ್ನಿಯನ್ನು ಕೊಂದು ಶವವನ್ನು ಸೂಟ್ಕೇಸ್ನಲ್ಲಿ ಇಟ್ಟಿದ್ದ ಪ್ರಕರಣ ಸಂಬಂಧ ಆರೋಪಿ ರಾಕೇಶ್ ಕಡೇಕರ್ಗೆ ಇದೀಗ 14 ದಿನಗಳ ನ್ಯಾಯಾಂಗ ಬಂಧನ ನೀಡಿ ಆದೇಶಿಸಿಲಾಗಿದೆ. ಹುಳಿಮಾವು ಪೊಲೀಸರು ಬೆಂಗಳೂರಿಗೆ ಕರೆತಂದ ಆರೋಪಿಯನ್ನು ಕೋರಮಂಗಲ NGV ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ರಾಕೇಶ್ ಕಡೇಕರ್ ತನ್ನ ಪತ್ನಿ ಗೌರಿಯನ್ನು ಹತ್ಯೆ ಮಾಡಿದ್ದು, ಬಳಿಕ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಪರಾರಿಯಾಗಿದ್ದನು. ಮಾರ್ಚ್ 27ರಂದು ಮಧ್ಯಾಹ್ನ ರಾಕೇಶ್ ತನ್ನ ಭಾವ ಗೌರಿ ಅಣ್ಣ ಗಣೇಶ್ಗೆ ಕರೆ ಮಾಡಿ, “ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆ” ಎಂದು ಹೇಳಿದ್ದ. ಅಲ್ಲದೆ, ಈ ವಿಚಾರವನ್ನು ತನ್ನ ತಂದೆಗೂ ತಿಳಿಸಿದ್ದಾರೆ. ತನ್ನ ಪತ್ನಿ ಜಗಳ ಮಾಡುತ್ತಿದ್ದಾಳೆ ಎಂಬ ಕಾರಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದನು.
ಕೊಲೆ ಮಾಡಿದ ನಂತರ ಮೊದಲ ದಿನ ರಾಕೇಶ್ ಯಾರಿಗೂ ಈ ವಿಷಯ ತಿಳಿಸಲಿಲ್ಲ. ಎರಡನೇ ದಿನ ತನ್ನ ತಂದೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ. ಈ ನಡುವೆ ಆತ ಕೂಡ ಆತ್ಮಹತ್ಯೆ ಮಾಡಿಕೊಳ್ಳಲಯ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಪ್ರತಿಕ್ರಿಯಿಸಿ, “ಮೃತ ಗೌರಿ ನನ್ನ ಸಹೋದರಿಯ ಮಗಳು. ಈ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಗೌರಿ ನಮ್ಮ ಕುಟುಂಬದ ವಿರೋಧವನ್ನು ಲೆಕ್ಕಿಸದೇ, ರಾಕೇಶ್ ಜೊತೆ ಮದುವೆಯಾಗಿದ್ದಳು. ಆದರೆ ವಿವಾಹದ ಬಳಿಕ, ಗೌರಿ ಮತ್ತು ರಾಕೇಶ್ ನಡುವಿನ ಮನಸ್ತಾಪಗಳು ಹೆಚ್ಚಾಗಿದ್ದವು. ಇವರಿಬ್ಬರ ಜಗಳ ಪೊಲೀಸ್ ಠಾಣೆಯ ಮೇಟ್ಟಿಲೇರಿತ್ತು ಎಂದಿದ್ದಾರೆ.
ರಾಕೇಶ್ ಕೊಲೆ ಮಾಡಿದ ಬಳಿಕ, ಶವವನ್ನು ಟ್ರ್ಯಾಲಿ ಬ್ಯಾಗ್ನಲ್ಲಿ ತುಂಬಿ ಪರಾರಿಯಾಗಿದ್ದನು. ಈ ವೇಳೆ, ಶವ ತುಂಬಿದ ಬ್ಯಾಗ್ ಎಳೆಯುವಾಗ ಹ್ಯಾಂಡಲ್ ಮುರಿದಿದ್ದು, ಹೀಗಾಗಿ ಆತ ಶವವನ್ನು ಅಲ್ಲೇ ಬಿಟ್ಟು, ಕಾರಿನಲ್ಲಿ ಪರಾರಿಯಾಗಿದ್ದನು. ಬಳಿಕ ಆತ ತನ್ನ ಕುಟುಂಬದವರಿಗೆ ಕರೆ ಮಾಡಿ ಕೊಲೆ ನಡೆದ ಬಗ್ಗೆ ಮಾಹಿತಿ ನೀಡಿದ್ದನು.
ಈ ಮಾಹಿತಿ ಪಡೆದ ರಾಕೇಶ್ ತಂದೆ, ತಕ್ಷಣವೇ ಗೌರಿಯ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಸೂಚನೆಯ ಮೇರೆಗೆ ಶಿರವಾಲಾ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಯತ್ನ
ಆರೋಪಿ ರಾಕೇಶ್, ಕೊಲೆ ಮಾಡಿದ ಬಳಿಕ, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಜಿರಳೆ ಔಷಧಿ ಸೇವನೆ ಮಾಡಿದ್ದನು. ಈ ಪರಿಣಾಮದಿಂದ, ಮುಂಬೈನ ಕೇಗಲ್ ಸಮೀಪ ಅಸ್ವಸ್ಥನಾಗಿ ಬಿದ್ದಿದ್ದನು. ಅದನ್ನು ನೋಡಿದ ಸ್ಥಳೀಯರು, ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದರು.
ನಿನ್ನೆ ರಾತ್ರಿ ರಾಕೇಶ್ ಅನ್ನು ಬೆಂಗಳೂರಿಗೆ ಕರೆತಂದ ಪೊಲೀಸರು, ಇಂದು (ಮಾರ್ಚ್ 30) ಕೋರಮಂಗಲ ಎನ್ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು. ಸದ್ಯ, ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.





