ರಾಯಚೂರು: ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಆಹಾರ ಕಲಬೆರಕೆ, ರಾಸಯನಿಕಗಳ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ರಾಯಚೂರಿನ 20ಕ್ಕೂ ಹೆಚ್ಚು ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಟೀ ಅಂಗಡಿಗಳ ಮೇಲೆ ದಾಳಿ ನಡೆದಿದೆ. ತಹಶಿಲ್ದಾರ್ ನೇತೃತ್ವದಲ್ಲಿ ರಾಯಚೂರು ಎಸಿ ಗಜಾನನ ಬಾಳೆ ದಿಢೀರ್ ದಾಳಿ ನಡೆಸಿದ್ದಾರೆ.
ಹೋಟೆಲ್ ದಾಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ಕಬಾಬ್ ಮತ್ತು ಕಲರ್..ಕಲರ್ ತಿನಿಸು ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ನಂತರ ಅಧಿಕಾರಿಗಳು ಹೋಟೆಲ್ಗಳ ಮೂಲೆ ಮೂಲೆಗಳನ್ನು ಜಾಲಾಡಿದ್ದಾರೆ. ಈ ವೇಳೆ ವಿವಿಧ ಬಣ್ಣಗಳು, ಪ್ಲಾಸ್ಟಿಕ್, ಕಲಬೆರಕೆ ಆಹಾರ ಪದಾರ್ಥಗಳು ದೊರೆತಿವೆ. ಇದರೊಟ್ಟಿಗೆ ಹೊಟೆಲ್ಗಳಲ್ಲಿ ಯಾವುದೇ ಸ್ವಚ್ಛತೆ ನಿರ್ವಹಣೆ ಮಾಡಿಲ್ಲದಿರುವುದು ಕಂಡಿದೆ.
ಅಧಿಕಾರಿಗಳು ದಾಳಿ ಮಾಡಿದ ಹೋಟೇಲ್ಗಳಲ್ಲಿ ಕಲಬೆರಕೆ ಮಾಡಿದ ಆಹಾರ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿದ ವಿವಿಧ ಬಗೆಯ ನಾನ್ ವೆಜ್ ಐಟಮ್ಸ್, ಸಂಬಾರ್ ಸೇರಿ ಹಲವಾರು ಸ್ಯಾಂಪಲ್ಗಳ ಸಂಗ್ರಹ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ಹೋಟೆಲ್ ಮಾಲೀಕರಿಗೆ 5 ಸಾವಿರದಿಂದ 50 ಸಾವಿರದವರೆಗೆ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೋಟೆಲ್ಗಳಲ್ಲಿ ಗೃಹ ಬಳಕೆ ಗ್ಯಾಸ್ಗಳು ಪತ್ತೆಯಾಗಿದ್ದು, ಈ ಗ್ಯಾಸ್ ಉಪಯೋಗಿಸಿದ್ದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಆಹಾರಗಳ ಸ್ಯಾಂಪಲ್ ವರದಿ ಆಧರಿಸಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.





