ಬೆಳಗಾವಿ: ಜಮೀನಿನ ಎನ್ಎ ಪರಿವರ್ತನೆಗಾಗಿ ಹಲವು ತಿಂಗಳಿಂದ ಕಚೇರಿಗಳಲ್ಲಿ ಅಲೆದಾಡಿ ಬೇಸತ್ತ ರೈತನೊಬ್ಬರು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಾಣೇಬೆನ್ನೂರು ತಾಲೂಕಿನ ಅಮ್ಮಿನಬಾವಿಮಠ ಗ್ರಾಮದ ರುದ್ರಯ್ಯ ಎಂಬ ರೈತರು ಈ ಘಟನೆಗೆ ಯತ್ನಿಸಿದ್ದಾರೆ. ರುದ್ರಯ್ಯ ಅವರು ತಮ್ಮ 2 ಎಕರೆ ಜಮೀನನ್ನು ನಾನ್ ಅಗ್ರಿಕಲ್ಚರಲ್ಗೆ ಪರಿವರ್ತಿಸಲು ಹಾವೇರಿ ಜಿಲ್ಲಾ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಲ್ಯಾಂಡ್ ಬದಲಾವಣೆಯಾಗುವವರೆಗೂ ಎನ್ಎ ಮಾಡಲು ಸಾಧ್ಯವಿಲ್ಲ ಎಂದು ಡಿಸಿ ಕಚೇರಿಯಲ್ಲಿ ಹೇಳಿದ್ದರಂತೆ.
ಈ ಹಿನ್ನೆಲೆಯಲ್ಲಿ ರುದ್ರಯ್ಯ ಅವರು ಎರಡು-ಮೂರು ಬಾರಿ ಆರ್ಸಿ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದ್ದರು. ಆದರೂ ನ್ಯಾಯ ಸಿಗದ ಕಾರಣ ಮನನೊಂದಿದ್ದ ರುದ್ರಯ್ಯ, ಇಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತೆ ಜಾನಕಿ ಅವರನ್ನು ಭೇಟಿ ಮಾಡಲು ಕಚೇರಿಗೆ ಆಗಮಿಸಿದ್ದರು.

ಪ್ರಾದೇಶಿಕ ಆಯುಕ್ತೆ ಕಚೇರಿಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಬೇಸರಗೊಂಡ ರುದ್ರಯ್ಯ ಅವರು ಕಚೇರಿಯೊಳಗೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ತಿಳಿದ ತಕ್ಷಣ ಕಚೇರಿ ಸಿಬ್ಬಂದಿ ಅವರನ್ನು ತುರ್ತಾಗಿ ಬೆಳಗಾವಿ ಬಿಎಂಸಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ರುದ್ರಯ್ಯ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರುದ್ರಯ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆಯು ಅಧಿಕಾರಿಗಳ ಅಲಕ್ಷ್ಯ ಮತ್ತು ಭೂಮಿ ಸಂಬಂಧಿತ ಕೆಲಸಗಳಲ್ಲಿ ಉಂಟಾಗುವ ಅನಗತ್ಯ ತಡೆಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ. ರೈತರು ತಮ್ಮ ಸಮಸ್ಯೆಗಳಿಗೆ ಸಕಾಲದಲ್ಲಿ ನ್ಯಾಯ ಸಿಗದೇ ಕಚೇರಿಗಳಲ್ಲಿ ಅಲೆದಾಡುವ ಪರಿಸ್ಥಿತಿ ಬದಲಾಗಬೇಕಿದೆ.





