ಇವನು ಯಾರಿಗೇನೂ ಕಮ್ಮಿ ಇಲ್ಲ. ಕಪ್ಪು ಕನ್ನಡಕ ಧರಿಸಿ, ಬುಲೆಟ್ನಲ್ಲಿ ಹೊರಟ ಅಂದರೆ, ಯಾವ ಹಿರೋನು ನನ್ನ ಮುಂದಿಲ್ಲ ಅಂತಾನೆ. ಹಾಗೇನೇ ಖಡಕ್ ಷರಟು ಜೀನ್ಸ್ ಪ್ಯಾಂಟ್ ಹಾಕೊಂಡು ಹೊರಟ್ರೆ ಸ್ಟಾರ್ ತರನೇ ಕಾಣ್ತಾನೆ. ಆದ್ರೆ ಆ ಸ್ಟಾರ್ ಹಿಂದಿನ ಕಥೆ ಕೇಳಿದ್ರೆ ಅಯ್ಯೋ ಇವನಾ ? ಇವನ ಕೆಲಸ ಇದಾ ? ಥೂ ಉಗಿ ಅವನ ಮುಖಕ್ಕೆ ಅಂತ ನೀವು ಹೇಳ್ದೆ ಇರೋದೇ ಇಲ್ಲ…
ಅವನ್ಯಾರು ಎಂದು ನಿಮಗೆ ನೋಡಲೇಬೇಕು ಅಂತ ಅನ್ನಿಸತ್ತೆ ಅಲ್ಲವಾ ? ಇವನೇ ಅವನು. ಇವನ ಹೆಸರು ಡಿ ಪ್ರಸಾದ್ ಬಾಬು ಅಲಿಯಾಸ್ ಪ್ರಸಾದ್ , ಆಂಧ್ರ ಪ್ರದೇಶದ ಗೋವರ್ಧನ ಗಿರಿ ಗ್ರಾಮದವನು. ವಯಸ್ಸು ಇನ್ನೂ 32, ಆದ್ರೆ ವಯಸ್ಸಿಗೆ ಮೀರಿದ ಕೆಲಸನೇ ಮಾಡ್ತಿದ್ದ.
ಬೇಗ ಹಣ ಮಾಡಬೇಕು, ಒಂದಷ್ಟು ಮೋಜು ಮಸ್ತಿ ಮಾಡಲೇಬೇಕು ಅನ್ನೋದು ಇವನ ನಿತ್ಯದ ಕಾಯಕ. ಹಾಗೆಂದು ಈತ ಬೆವರು ಸುರಿಸಿ ಏನು ದುಡಿತಾ ಇರಲಿಲ್ಲ. ಬದಲಿಗೆ ಮಾಡಬಾರದನ್ನ ಮಾಡ್ತಿದ್ದ.
ಇಲ್ಲೇ ಇರೋದು ನೋಡ್ರಿ ಇವನ ಕರಾಮತ್ತು
ಇವನ ಕಣ್ಣಿಗೆ ಯಾವ ಟೂ ವೀಲರ್ ಬೀಳೋ ಹಾಗೇ ಇರಲಿಲ್ಲ. ಒಮ್ಮೆ ಬಿದ್ರೆ ಅಷ್ಟೆ ಅದು ನನ್ನದೇ ಅಂತ ಅಂದುಕೊಂಡು ತಗೊಂಡು ಹೋಗಿಬಿಡ್ತಿದ್ದ. ಅವನ ಬಳಿ ಗಾಡಿ ಕೀ ಇರ್ತಾ ಇರಲಿಲ್ಲ. ಗಾಡಿನೂ ಅವನದಲ್ಲ. ಆದ್ರೂ ಆ ಟೂ ವೀಲರ್ ಮಾತ್ರ ತಗೊಂಡು ಹೊರಟು ಬಿಡ್ತಿದ್ದ. ಅಂದ್ರೆ ಅಲ್ಲಿ ಅದು ಕ್ಷಣಾರ್ಧದಲ್ಲಿ ಮಾಯವಾಗಿಬಿಡ್ತಿತ್ತು.
ಇವನು ಚಾಲಾಕಿತನ ತೋರ್ತಾ ಇದ್ದದ್ದು ಬರೀ ಒಂದು ಗಾಡಿ ಮೇಲಲ್ಲ. ಹತ್ತು ಇಪ್ಪತ್ತು ಅಲ್ಲ…ಸೆಂಚುರಿ ಹೊಡೆದ ತರ ಬರೋಬ್ಬರಿ ನೂರು ಟೂ ವೀಲರ್ಗಳು..
ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತ ಒಂದು ಬಜಾಜ್ ಪಲ್ಸರ್ ಕಳವು ಮಾಡಿದ್ದ..ಇನ್ಸ್ಪೆಕ್ಟರ್ ರಾಮಮೂರ್ತಿ, ತಂಡ ಪಿಎಸ್ಐ ಪ್ರದೀಪ್ ಗೌಡ, ಮಹೇಶ್, ಸಿಬ್ಬಂದಿಗಳಾದ ಧನಂಜಯ್, ವೆಂಕಟೇಶ್, ಶ್ರೀಧರ್, ಕುಮಾರ್, ಲಕ್ಷ್ಮಣ್ ರಾಥೋಡ್, ಬಾಲಾಜಿ, ಶಿವಕುಮಾರ್, ಪ್ರದೀಪ್, ಹನುಮಂತ ನಾಯಕ್, ಜಯಣ್ಣ, ಶಿಹಾಸ್, ಹಾಗೂ ಮಂಜುಳಾ ಇವರ ತಂಡ ಆರೋಪಿ ಬಲೆ ಬೀಸಿದ್ರು. ಯಾಕೆ ಅಂದ್ರೆ ಇವರ ವ್ಯಾಪ್ತಿಯಲ್ಲೇ ಟೂ ವೀಲರ್ ತುಂಬಾ ಕಳ್ಳತನ ಆಗ್ತಾ ಇತ್ತು. ಅಂತೂ ಇಂತೂ ಇವನನ್ನ ಖೆಡ್ದಾಗೆ ಕೆಡವಿಕೊಂಡಾಗ ಈ ಶೋಕಿಲಾಲಾನಿಂದ ನೂರು ಟೂವೀಲರ್ಗಳು ಪತ್ತೆಯಾದವು.
ಹೀಗೆ ಕಳವು ಮಾಡಿದ ಈ ಟೂ ವೀಲರ್ಗಳನ್ನ ಆರೋಪಿ ಪ್ರಸಾದ್ ಬಾಬು ಆಂಧ್ರಪ್ರದೇಶದ ಚಿತ್ತೂರು, ಬಂಗಾರುಪಾಳ್ಯಂ, ಪಲಮನೇರು, ಕಡೆಗಳಲ್ಲಿ ಮಾರಾಟ ಮಾಡಿದ್ದ. ಹೆಚ್ಚು ಕಡಿಮೆ ವಶಪಡಿಸಿಕೊಂಡ ಟೂ ವೀಲರ್ಗಳ ಅಂದಾಜು ಮೌ್ಲ್ಯ ಸುಮಾರು ಒಂದು ಕೋಟಿ 42 ಲಕ್ಷ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಬೆಂಗಳೂರು ನಗರದ ಕೆಆರ್ ಪುರಂ, ರಾಮಮೂರ್ತಿನಗರ, ಆವಲಹಳ್ಳಿ, ಕೋಲಾರ ಸೇರಿದಂತೆ ಆಂಧ್ರದಲ್ಲಿಯೂ ಕಳವು ಮಾಡಿರುವ ಪ್ರಕರಣಗಳು ಇಲ್ಲಿ ಪತ್ತೆಯಾಗಿದೆ.
ತಾಕತ್ತಿದ್ರೆ ಪೊಲೀಸರು ನನ್ನನ್ನ ಹಿಡಿಲಿ ಅಂತಾ ಆರೋಪಿ ತನ್ನ ಮೊಬೈಲ್ನಲ್ಲಿ ಡಿಪಿ ಹಾಕಿಕೊಂಡಿದ್ದ ಎಂಬ ಅಂಶವು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಒಟ್ಟಿನಲ್ಲಿ ಯಾರದ್ದೋ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದ್ದವನು ಈಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾನೆ. ಕೆಆರ್ ಪುರಂ ಪೊಲೀಸ್ ಠಾಣೆಯ ಪೊಲೀಸರ ಈ ಕಾರ್ಯವನ್ನ ಉಪ ಪೊಲೀಸ್ ಆಯುಕ್ತ ಶಿವಕುಮಾರ್ ಗುಣಾರೆ, ಸಹಾಯಕ ಪೊಲೀಸ್ ಆಯುಕ್ತ ರೀನಾ ಸುವರ್ಣ ಶ್ಲಾಘಿಸಿದ್ದಾರೆ.