ಉಡುಪಿ, ನವೆಂಬರ್ 28: ಅಯೋಧ್ಯೆ ರಾಮ ಮಂದಿರದಲ್ಲಿ ಕೇವಲ ಎರಡೇ ದಿನಗಳ ಹಿಂದೆ ಧರ್ಮ ಧ್ವಜ ಸ್ಥಾಪಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 28, 2025) ಕರ್ನಾಟಕದ ಪುಣ್ಯಕ್ಷೇತ್ರ ಉಡುಪಿಗೆ ಆಗಮಿಸುತ್ತಿದ್ದಾರೆ. ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಶ್ವಪರ್ಯಾಯ ಮಹೋತ್ಸವದ ಭಾಗವಾಗಿ ಆಯೋಜಿಸಲಾಗಿರುವ ಐತಿಹಾಸಿಕ “ಲಕ್ಷ ಕಂಠ ಭಗವದ್ಗೀತಾ ಪಾರಾಯಣ” ಕಾರ್ಯಕ್ರಮಕ್ಕೆ ಪ್ರಧಾನಿ ಸಾಕ್ಷಿಯಾಗಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಒಟ್ಟಾಗಿ ಭಗವದ್ಗೀತೆ ಪಠಿಸುವ ಈ ಅಪೂರ್ವ ಕಾರ್ಯಕ್ರಮ ವಿಶ್ವದರ್ಜೆಯ ಆಧ್ಯಾತ್ಮಿಕ ಸಮ್ಮಿಲನವಾಗಿ ಗುರುತಿಸಿಕೊಳ್ಳಲಿದೆ.
ಪ್ರಧಾನಿ ಮೋದಿಯವರು ಸ್ವತಃ ಭಗವದ್ಗೀತೆಯ 15ನೇ ಅಧ್ಯಾಯದ (ಪುರುಷೋತ್ತಮ ಯೋಗ) ಕೊನೆಯ 10 ಶ್ಲೋಕಗಳನ್ನು (ಶ್ಲೋಕ 11ರಿಂದ 20) ಪಠಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಅಧ್ಯಾಯ ಗೀತೆಯಲ್ಲಿ ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿತವಾಗಿದೆ.
ಪ್ರಧಾನಿ ಮೋದಿಯವರ ಇಂದಿನ ವೇಳಾಪಟ್ಟಿ
- ಬೆಳಗ್ಗೆ 11:05 – ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ
- ಬೆಳಗ್ಗೆ 11:15 – ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ
- ಬೆಳಗ್ಗೆ 11:30 – ಉಡುಪಿ ರಾಜಾಂಗಣ ಹೆಲಿಪ್ಯಾಡ್ಗೆ ಆಗಮನ
- 11:40 ರಿಂದ 12:00 – ಬನ್ನಂಜೆ ವೃತ್ತದಿಂದ ಕಲ್ಸಂಕ ಜಂಕ್ಷನ್ ವರೆಗೆ ಭವ್ಯ ರೋಡ್ ಶೋ
- ಮಧ್ಯಾಹ್ನ 12:00 – ಶ್ರೀ ಕೃಷ್ಣ ಮಠಕ್ಕೆ ಆಗಮನ, ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ
- ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ
- ಮಧ್ಯಾಹ್ನ 1:00 – ಲಕ್ಷ ಕಂಠ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ
- ನಂತರ ಸಾರ್ವಜನಿಕ ಸಭೆಯಲ್ಲಿ ಭಾಷಣ
ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟನೆ
ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ (50 ವರ್ಷ) ಸ್ಮರಣಾರ್ಥ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವರ್ಣ ಲೇಪಿತ ತೀರ್ಥ ಮಂಟಪವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ. ಇದು ಉಡುಪಿ ಕೃಷ್ಣ ಮಠದ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ಘಟನೆಯಾಗಿ ದಾಖಲಾಗಲಿದೆ.
ಪ್ರಧಾನಿ ಮೋದಿಯವರ ಕನ್ನಡ ಟ್ವೀಟ್
ಶ್ರೀ ಕ್ರಿಷ್ಣ ಮಠಕ್ಕೆ ಆಗಮಿಸುವುದರ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ ಕನ್ನಡದಲ್ಲೇ , ಉಡುಪಿಯ ಶ್ರೀ ಕ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಈ ವಿಶೇಷ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತ ಈ ಮಠ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 10 ಎಸ್ಪಿ, 27 ಡಿವೈಎಸ್ಪಿ, 6 ಕೆಎಸ್ಆರ್ಪಿ ತುಕಡಿ, 6 ಕ್ಯೂಆರ್ಟಿ ತಂಡಗಳು, ಬಾಂಬ್ ಸ್ಕ್ವಾಡ್, ಡ್ರೋನ್ ನಿಗಾ ತಂಡಗಳು ಸೇರಿದಂತೆ ಬೃಹತ್ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.





