ಉಡುಪಿ, ನವೆಂಬರ್ 28, 2025: ಉಡುಪಿ ರಾಜಾಂಗಣ ಮೈದಾನದಲ್ಲಿ ನಡೆದ ಐತಿಹಾಸಿಕ “ಲಕ್ಷ ಕಂಠ ಭಗವದ್ಗೀತಾ ಪಾರಾಯಣ” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿ ಎಲ್ಲರ ಮನಗೆದ್ದರು. ಜೈ ಶ್ರೀಕೃಷ್ಣ…! ಎಂದು ಗಂಭೀರ ಕಂಠದಲ್ಲಿ ಆರಂಭಿಸಿದ ಪ್ರಧಾನಿ, ಕೃಷ್ಣನ ದಿವ್ಯ ದರ್ಶನದಿಂದ ತನಗೆ ಆಧ್ಯಾತ್ಮಿಕ ಸಂತೃಪ್ತಿ ಲಭಿಸಿದೆ ಎಂದು ಭಾವುಕರಾದರು.
ಇಂದು ಕನಕನ ಕಿಂಡಿ ಮೂಲಕ ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನ ಪಡೆದು ಆತ್ಮಾನಂದ ಅನುಭವಿಸಿದ್ದೇನೆ. ಇದು ನನ್ನ ಜೀವನದ ಪರಮ ಸೌಭಾಗ್ಯ. ಶ್ರೀ ಕೃಷ್ಣ ಮಠದಲ್ಲಿ ನನಗೆ ದೊರೆತ ಆಶೀರ್ವಾದ ಅಪಾರ. ನನ್ನಿಂದ ನಿಮ್ಮ ಎಲ್ಲ ಅಪೇಕ್ಷೆಗಳು ಪೂರೈಸುವ ಶಕ್ತಿ ಶ್ರೀ ಕೃಷ್ಣ ಕೊಡಲಿ ಎಂದು ಪ್ರಧಾನಿ ಹಾರೈಸಿದರು.
ಕೇವಲ ಕೆಲವೇ ದಿನಗಳ ಹಿಂದೆ ಭಗವದ್ಗೀತೆಯ ನೆಲೆ ಕುರುಕ್ಷೇತ್ರದಲ್ಲಿದ್ದ ನಾನು ಇಂದು ಮಧ್ವಾಚಾರ್ಯರ ಪುಣ್ಯಭೂಮಿ ಉಡುಪಿಗೆ ಬಂದಿದ್ದೇನೆ ಎಂದ ಪ್ರಧಾನಿ, ಇಲ್ಲಿ ಒಂದು ಲಕ್ಷ ಮಂದಿ ಒಟ್ಟೊಟ್ಟಿಗೆ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ್ದಾರೆ. ಇದು ಭಾರತದ ಸಾವಿರಾರು ವರ್ಷಗಳ ಆಧ್ಯಾತ್ಮಿಕ ಪರಂಪರೆಯ ದಿವ್ಯತೆಯನ್ನು ಇಡೀ ವಿಶ್ವಕ್ಕೆ ಸಾರಿದ ಮಹತ್ತರ ಕಾರ್ಯ ಎಂದು ಶ್ಲಾಘಿಸಿದರು.
ಅಷ್ಟ ಮಠಗಳ ಎಲ್ಲ ಯತಿಗಳಿಗೆ, ಪೇಜಾವರ ಶ್ರೀಗಳ ಸನ್ಯಾಸ ಜೀವನದ ಸುವರ್ಣ ಮಹೋತ್ಸವಕ್ಕೆ, ಗೀತಾ ಪಾರಾಯಣಕ್ಕೆ ಆಯೋಜನೆ ಮಾಡಿದ ಎಲ್ಲರಿಗೂ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದ ಈ ಪುಣ್ಯಭೂಮಿಗೆ ಪ್ರತಿ ಬಾರಿ ಬಂದಾಗಲೂ ಹೊಸ ಶಕ್ತಿ, ಹೊಸ ಅನುಭೂತಿ ಸಿಗುತ್ತದೆ ಎಂದು ಹೇಳಿದರು.
ಮಕ್ಕಳು ರಂಗೋಲಿಯಲ್ಲಿ ಬರೆದ ಚಿತ್ರಗಳನ್ನು ತೋರಿಸಿ ಮೋದಿ ಮಕ್ಕಳನ್ನು ಶ್ಲಾಘಿಸಿದರು. “ಇಷ್ಟು ಸುಂದರವಾಗಿ ಗೀತಾ ಶ್ಲೋಕಗಳನ್ನು ಬಿಡಿಸಿದ್ದೀರಾ? ನಿಮ್ಮ ಈ ಚಿತ್ರಗಳು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಮಕ್ಕಳನ್ನು ಗೌರವಿಸಿದರು.
ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ 50ನೇ ವರ್ಷದ ಸ್ಮರಣಾರ್ಥ ನಡೆಯುತ್ತಿರುವ ಈ ಮಹೋತ್ಸವದಲ್ಲಿ ಒಂದು ಲಕ್ಷ ಜನರ ಗೀತಾ ಪಠಣ ದಾಖಲೆಯಾಗಿ ಉಳಿಯಲಿದೆ ಎಂದ ಪ್ರಧಾನಿ, “ಇದು ಕೇವಲ ಉಡುಪಿಯ ಗೌರವವಲ್ಲ, ಇಡೀ ಭಾರತದ, ಸನಾತನ ಧರ್ಮದ ಗೌರವ ಎಂದು ಹೇಳಿದ್ದಾರೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ವಿಶೇಷ ಧನ್ಯವಾದ ಅರ್ಪಿಸಿದ ಪ್ರಧಾನಿ, ಕೇವಲ ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ. ಅಲ್ಲಿ ಧರ್ಮದ ಧ್ವಜವನ್ನು ಪುನಃ ಸ್ಥಾಪಿಸಿದೆವು. ಅಯೋಧ್ಯೆಯಿಂದ ಉಡುಪಿವರೆಗೆ ಅಸಂಖ್ಯಾತ ರಾಮಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅಪಾರ ಕೊಡುಗೆಯನ್ನು ನೆನಪಿಸಿದ ಪ್ರಧಾನಿ, “ರಾಮ ಮಂದಿರದಲ್ಲಿ ಮಧ್ವಾಚಾರ್ಯ ದ್ವಾರವನ್ನೂ ನಿರ್ಮಿಸಿದ್ದೇವೆ. ಜಗದ್ಗುರು ಮಧ್ವಾಚಾರ್ಯರು ಶ್ರೀರಾಮನ ಕುರಿತು ಕೀರ್ತನೆಗಳನ್ನು ರಚಿಸಿದ್ದರು. ಉಡುಪಿಯಲ್ಲಿ ಕೃಷ್ಣನ ಶಕ್ತಿ, ವೇದಾಧ್ಯಯನ ಮತ್ತು ಸೇವೆಯ ಸಂಗಮವಿದೆ” ಎಂದು ಹೇಳಿದರು.
“ಮಧ್ವಾಚಾರ್ಯರ ಕಾಲದಲ್ಲಿ ಭಾರತ ಸಂಕಟದಲ್ಲಿತ್ತು. ಆದರೆ ಅವರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಅವರ ಪರಂಪರೆಯೇ ಹರಿದಾಸ ಸಾಹಿತ್ಯಕ್ಕೂ ನಾಂದಿ ಹಾಡಿತು. ಪುರಂದರ ದಾಸರು, ಕನಕ ದಾಸರು ಕನ್ನಡದ ಕೀರ್ತನೆಗಳು ಆಧ್ಯಾತ್ಮವನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸಿದವು. ಇಂದು ಸೋಷಿಯಲ್ ಮೀಡಿಯಾದಲ್ಲಿಯೂ ಪುರಂದರ ದಾಸರ ಕೀರ್ತನೆಗಳಿವೆ. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನಕ್ಕೆ ಕನಕದಾಸರೇ ಕಾರಣ. ಅವರಿಗೆ ಇಲ್ಲಿ ನಮಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಭಾವುಕರಾದರು.
ಭಗವದ್ಗೀತೆಯ ಬೋಧನೆ ರಾಷ್ಟ್ರ ನಿರ್ಮಾಣಕ್ಕೂ ಪೂರಕ ಎಂದ ಪ್ರಧಾನಿ, “ಕೃಷ್ಣ ಯುದ್ಧಭೂಮಿಯಲ್ಲಿ ಗೀತೆ ಬೋಧಿಸಿದ. ಆದರೆ ರಾಷ್ಟ್ರ ನಿರ್ಮಾಣಕ್ಕೂ ಗೀತೆ ಬೇಕೇ ಬೇಕು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’, ಆಯುಷ್ಮಾನ್ ಭಾರತ್, ಪಿಎಂ ಆವಾಸ್ ಯೋಜನೆ – ಇವೆಲ್ಲವಕ್ಕೂ ಕೃಷ್ಣನ ಪ್ರೇರಣೆ ಇದೆ. ‘ವಸುಧೈವ ಕುಟುಂಬಕಂ’ ಎಂಬ ನೀತಿಗೂ ಶ್ರೀಕೃಷ್ಣನೇ ಆಧಾರ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದರು.
ಮಿಷನ್ ಸುದರ್ಶನ ಚಕ್ರ, ಆಪರೇಷನ್ ಸಿಂದೂರದಲ್ಲಿ ಭಗವದ್ಗೀತೆಯೇ ನಮಗೆ ಪ್ರೇರಕ ಶಕ್ತಿ. ಶತ್ರುಗಳ ವಿರುದ್ಧ ಹೋರಾಡಲು ಗೀತೆಯೇ ಶಕ್ತಿ ಕೊಡುತ್ತದೆ. ಕರ್ನಾಟಕದ ವೀರ ಯೋಧರೂ ಆ ಕಾರ್ಯಾಚರಣೆಯಲ್ಲಿ ತಮ್ಮ ಜೀವ ಬಿಟ್ಟರು. ಆದರೆ ಶತ್ರುಗಳ ಮುಂದೆ ನಾವು ಎಂದಿಗೂ ತಲೆ ಬಾಗೋದಿಲ್ಲ. ಭಗವದ್ಗೀತೆ ನಮಗೆ ಕರ್ತವ್ಯವನ್ನು ಬೋಧಿಸುತ್ತದೆ ಎಂದು ಹೇಳಿದರು. ಹೀಗೆ ಮೊದಿ ತಮ್ಮ ಭಾಷಣದಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆ ಸಾರಿದರು.





